ಇಚಿಲಂಪಾಡಿಯಲ್ಲಿ ರಸ್ತೆ ಬದಿ ಕಾಡಾನೆ : ಆನೆಯ ಸಮೀಪವೇ ಬೈಕ್ ನಿಂದ ಬಿದ್ದು ಜೀವ ಭಯದಿಂದ ಓಡಿದ ಯುವಕರು

ಕಡಬ :ಕಾಡಾನೆಯೊಂದು ಏಕಾಏಕಿ ರಸ್ತೆ ಬದಿ ಪ್ರತ್ಯಕ್ಷವಾಗಿ ಬೈಕ್ ಸವಾರರಿಬ್ಬರು ಸಾವಿನ ದವಡೆಯಿಂದ ಪಾರಾದ ಘಟನೆ ಇಚಿಲಂಪಾಡಿ ಸಮೀಪ ನ.2 ರಂದು ರಾತ್ರಿ ನಡೆದಿದೆ.

ಕುಟ್ರುಪ್ಪಾಡಿ ಗ್ರಾಮದ ಬಜೆತ್ತಡ ನಿವಾಸಿ ಧರ್ಮಪಾಲ ಮತ್ತು ರಮೇಶ ಎಂಬವರು ಸಂಬಂಧಿಕರ ಮನೆಗೆಂದು ಕೊಕ್ಕಡಕ್ಕೆ ಇಚಿಲಂಪಾಡಿ ಮೂಲಕ ತಮ್ಮ ದ್ವಿಚ ಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಕಾಡಾನೆ ರಸ್ತೆ ದಾಟಿದೆ. ದಿಕ್ಕು ತೋಚದೆ ಬೈಕ್ ಸವಾರ ಹಠತ್ ಬ್ರೇಕ್ ಹಾಕಿದ ಕಾರಣ ಕಾಡಾನೆಯ ಪಕ್ಕವೇ ಬೈಕ್ ಮಗುಚಿ ಬಿದ್ದು ಸವಾರ ಮತ್ತು ಸಹ ಸವಾರ ರಸ್ತೆ ಬದಿಗೆ ಎಸೆಯಲ್ಪಟ್ಟು ಬಳಿಕ ಕೂಡಲೇ ಎದ್ದು ಬೈಕ್ ಬಿಟ್ಟು ಅರ್ಧ ಕಿ.ಮೀ ದೂರ ಓಡಿ ಹೋಗಿದ್ದಾರೆ.

ಬೈಕ್ ನಲ್ಲಿ ಲೈಟ್ ಉರಿಯುತ್ತಲೇ ಇದ್ದು ಅಕ್ಕ ಪಕ್ಕ ಯಾರು ಇಲ್ಲದನ್ನು ಗಮನಿಸಿ ಕಾರಿನವರು ನಿಲ್ಲಿಸಿ ಕುತೂಹಲದಿಂದ ಬೈಕ್ ನವರಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಬೈಕ್ ಬಿದ್ದ ಶಬ್ದಕ್ಕೆ ಕಾಡಾನೆ ಕಾಡು ಪ್ರದೇಶಕ್ಕೆ ಮುಂದೆ ಸಾಗಿದೆ. ಹಲವು ಕಾರುಗಳು ನಿಂತಿರುವುದನ್ನು ಗಮನಿಸಿ ಓಡುತ್ತಿದ್ದ ಬೈಕ್ ಸವಾರರು ನೆರೆದಿದ್ದವರಿಗೆ ವಿವರಿಸಿದ್ದಾರೆ.

ಸೇರಿದ್ದವರು ಬೈಕನ್ನು ಎತ್ತಿ ಸಹಕರಿಸಿದ್ದು, ರಸ್ತೆಗೆ ಎಸೆಯಲ್ಪಟ್ಟ ಸವಾರನ ಕಾಲಿಗೆ ಸಣ್ಣ ಗಾಯವಾಗಿದೆ.ಸಹ ಸವಾರನಿಗೂ ಕೈಗೆ ಪರಚಿದ ಗಾಯವಾಗಿದೆ. ಇಬ್ಬರೂ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ನೂಜಿಬಾಳ್ತಿಲ ಸುತ್ತ ಮುತ್ತ ಕಾಡಾನೆ ಕೃಷಿಕರ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿರುವುದು ಸುದ್ದಿಯಾಗಿತ್ತು.ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜನರಿಂದ ಆಗ್ರಹ ವ್ಯಕ್ತವಾಗಿದೆ.

Leave A Reply

Your email address will not be published.