ಹೃದಯದ ಬಗ್ಗೆ ಆತಂಕ, ಭಯ ಬೇಡ- ಎಚ್ಚರಿಕೆ ಇರಲಿ

ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಸಲಹೆ

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಹೃದ್ರೋಗ ತಜ್ಞರ ಬಳಿ ಬರುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಕುರಿತು ಕೇಳಿ ಬರುತ್ತಿರುವ ಕೆಲವೊಂದು ಹೇಳಿಕೆ, ಸಲಹೆಗಳು ಜನಸಾಮಾನ್ಯರಲ್ಲಿ ಆತಂಕ, ಭಯಕ್ಕೆ ಕಾರಣವಾಗುತ್ತಿದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ಬೇಕಿರುವುದು ಆತಂಕವಲ್ಲ. ಬದಲಿಗೆ ಆರೋಗ್ಯದ ಕುರಿತಂತೆ ಎಚ್ಚರಿಕೆಯ ಹೆಜ್ಜೆ.
ಇದು ಮಂಗಳೂರು ಎಜೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಅವರ ಸಲಹೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಹೃದ್ರೋಗ ಸಂಬಂಧಿ ರೋಗಗಳು, ನಿಯಂತ್ರಣ, ವಹಿಸಬೇಕಾದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು.


ಕಳೆದ ನಾಲ್ಕೈದು ತಿಂಗಳಿನಿಂದೀಚೆಗೆ ಹೃದ್ರೋಗದ ಸಂಬಂಧಿಸಿದ ವಿಚಾರಗಳು ಹೆಚ್ಚು ಮುನ್ನೆಲೆಗೆ ಬಂದಿವೆ. ನಟ ಸಿದ್ಧಾರ್ಥ್ ಶುಕ್ಲಾ, ಕಳೆದ ಶ್ರುವಾರ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ಸಾವು ಜನರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಒತ್ತಡವನ್ನು ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ ವೈದ್ಯರಾದವರು ಹೃದಯ ಸಂಬಂಧಿ ಕಾಯಿಲೆಗಳನ್ನು ತಿಳಿದುಕೊಳ್ಳುವ ಅಥವಾ ನಿಯಂತ್ರಣ, ಜಾಗೃತಿ ಕುರಿತಂತೆ ಅಂತಾರಾಷ್ಟ್ರೀಯ ಮಾರ್ಗಸೂಚಿಗಳಂತೆ ವೈಜ್ಞಾನಿಕ ವಿಚಾರಗಳನ್ನು ಮುಂದಿಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
40 ವರ್ಷ ಮೇಲ್ಪಟ್ಟವರಲ್ಲಿ ಹೃದಯ ರೋಗಗಳು ಸಾಮಾನ್ಯ. ಅದಕ್ಕಾಗಿ ಎಲ್ಲರಿಗೂ ಆ್ಯಂಜಿಯೋಗ್ರಾಮ್ ಅಗತ್ಯವೆಂಬುದು ಸರಿಯಲ್ಲ. ಆದರೆ ಸಾಮಾನ್ಯವಾಗಿ ಹೃದಯ ರೋಗದ ಕೌಟುಂಬಿಕ ಹಿನ್ನೆಲೆ ಇದ್ದಲ್ಲಿ (ತಮ್ಮ ತಂದೆ ತಾಯಿಗೆ45 ವರ್ಷದ ಒಳಗೆ ಹೃದಾಯಾಘಾತ, ಹೃದಯ ಸ್ತಂಭನ ಆಗಿದ್ದಲ್ಲಿ) ಹೃದಯದ ತಪಾಸಣೆ ನಡೆಸುವುದು ಅಗತ್ಯವಾಗಿದೆ. ಉಳಿದಂತೆ ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ಇದರ ಜತೆಯಲ್ಲೇ ಕೊಲೆಸ್ಟ್ರಾಲ್, ರಕ್ತದೊತ್ತಡದ ಬಗ್ಗೆಯೂ ನಿಯಮಿತ ತಪಾಸಣೆ ಎಲ್ಲರಿಗೂ ಅಗತ್ಯವಾಗಿರುತ್ತದೆ. ಹೃದಯಕ್ಕೆ ಸಂಬಂಧಿಸಿ ಸುರಕ್ಷಿತ ತಪಾಸಣೆ ನಡೆಸುವ ಮೂಲಕ ಮುಂಜಾಗೃತಾ ಕ್ರಮಗಳನ್ನು ವಹಿಸಬಹುದಾಗಿದೆ. ಬಹುತೇಕವಾಗಿ ಹೃದಯ ಸಂಬಂಧಿ ಕಾಯಿಲೆಗಳು ಮೇಲ್ನೋಟಕ್ಕೆ ಕಂಡು ಬಾರದಿದ್ದರೂ ಇಕೋ, ಇಕೋ ಕಾರ್ಡಿಯೋಗ್ರಫಿ, ಆಂಜಿಯೋಗ್ರಾಮ್ ಮೊದಲಾದ ತಪಾಸಣೆಯ ಸಂದರ್ಭ ಸ್ಪಷ್ಟವಾಗುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಹೃದಯ ಸಂಬಂಧಿ ಅನಾರೋಗ್ಯಗಳನ್ನು ತಡೆಯಲು ಸಾಧ್ಯ ಎಂದು ಅವರು ಹೇಳಿದರು.
ಜಿಮ್ ಅಥವಾ ವ್ಯಾಯಾಮ ದೇಹಕ್ಕೆ ಸರಿಯಲ್ಲ ಎಂಬುದು ತಪ್ಪು. ಆದರೆ ಸರಿಯಾದ ರೀತಿಯಲ್ಲಿ ಸಮತೋಲಿತ ವ್ಯಾಯಾಮ ದೇಹಕ್ಕೆ ಅಗತ್ಯವಾಗಿರುತ್ತದೆ. ದೇಹವನ್ನು ಜಡವಾಗಿಸುವುದು ಅಥವಾ ಅತಿಯಾದ ವ್ಯಾಯಾಮ ದೇಹಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ವಯೋಮಿತಿಗೆ ತಕ್ಕುದಾದ ಸಮತೋಲಿತ ವ್ಯಾಯಾಮವನ್ನು ರೂಢಿಸಿಕೊಳ್ಳುವುದರಿಂದ ರೋಗಗಳಿಂದ ದೂರವಿರಬಹುದು ಎಂದು ಅವರು ಹೇಳಿದರು.
ದೇಹ, ಹೃದಯದ ಆರೋಗ್ಯದಲ್ಲಿ ನಿಯಮಿತ ವ್ಯಾಯಾಮದ ಜತೆಗೆ ಆಹಾರ ಹಾಗೂ ಜೀವನ ಶೈಲಿಯೂ ಪ್ರಮುಖ ಕಾರಣವಾಗಿರುತ್ತದೆ. ಕನಿಷ್ಠ ಆರು ಗಂಟೆಯ ಸುಖ ನಿದ್ರೆಯ ಬಳಿಕ ಆಹಾರ ರಹಿತವಾಗಿ ಸೂಕ್ತ ಪ್ರಮಾಣದ ನೀರು ಸೇವನೆಯೊಂದಿಗೆ ನಡೆಸುವ ವ್ಯಾಯಾಮ ದೇಹಕ್ಕೆ ಅನುಕೂಲ ಎಂದು ಡಾ. ಮಂಜುನಾಥ್ ಸಲಹೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು.

  • ಜಿಮ್‌ಗಳಲ್ಲಿ ಕನಿಷ್ಠ ಜೀವರಕ್ಷಕ ಸಾಧನಗಳು ಅತೀ ಅಗತ್ಯ
    ದೇಹದ ವ್ಯಾಯಾಮಕ್ಕಾಗಿ ಜಿಮ್‌ಗಳಿಗೆ ಹೋಗುವುದು ತಪ್ಪಲ್ಲ. ಆದರೆ ಜಿಮ್‌ಗಳಲ್ಲಿ ನುರಿತ ತರಬೇತುದಾರರ ಜತೆಗೆ ಕನಿಷ್ಠ ಜೀವರಕ್ಷಕ ಸಾಧನಗಳು ಹೊಂದಿರುವುದು ಅತೀ ಅಗತ್ಯ ಎಂದು ಡಾ. ಮಂಜುನಾಥ್ ಸಲಹೆ ನೀಡಿದರು.
  • ಮೇಲ್ವಿಚಾರಣೆಯಿಂದ ಕೂಡಿದ ವ್ಯಾಯಾಮ ದೇಹಕ್ಕೆ ಹಿತಕರ. ದೇಹಕ್ಕೆ ಮೇಲ್ವಿಚಾರಣೆಯಿಂದ ಕೂಡಿದ ವ್ಯಾಯಾಮ ಅಗತ್ಯವಾಗಿದ್ದು, ಜಿಮ್‌ಗಳಲ್ಲಿ ತಜ್ಞರಿಂದ ಈ ಬಗ್ಗೆ ತರಬೇತಿ ಸಿಗುತ್ತದೆ. ಮನೆಗಳಲ್ಲಿಯೂ ವ್ಯಾಯಾಮ ಮಾಡಬೇಕು. ಆದರೆ ದೇಹಕ್ಕೆ ಯಾವ ರೀತಿಯ ವ್ಯಾಯಾಮ, ಹೇಗೆ ಮಾಡಬೇಕು ಎಂಬ ಬಗ್ಗೆ ಜಿಮ್‌ಗಳಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಜಿಮ್ ತರಬೇತುದಾರ ಮೋಹಿತ್ ಮಲ್ಲಿ ಪ್ರತಿಕ್ರಿಯಿಸಿದರು.
  • ಕೆಲವೊಂದು ದೇಹಗಳಿಗೆ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂನಂತಹ ಪೂರಕಗಳ ಅಗತ್ಯವಿರುತ್ತದೆ. ಇದಕ್ಕಾಗಿ ಕೆಲವೊಂದು ಪೇಯಗಳನ್ನು ಜಿಮ್‌ಗಳಲ್ಲಿ ಶಿಫಾರಸ್ಸು ಮಾಡುತ್ತಾರೆ. ಆದರೆ ಎಲ್ಲೂ ಅದನ್ನು ಕಡ್ಡಾಯ ಮಾಡುವಂತಿಲ್ಲ. ದೇದಾರ್ಢ್ಯತೆಗಾಗಿ ಕೆಲವರು ತಾವಾಗಿಯೇ ಸಪ್ಲಿಮೆಂಟ್‌ಗಳನ್ನು ಬಳಸುತ್ತಾರೆ. ಅದು ಎಲ್ಲಿಂದ, ಹೇಗೆ ತಯಾರಾಗಿರುತ್ತದೆ ಎನ್ನುವುದರ ಮೇಲೆ ಅದರ ಸಾಧಕ ಬಾಧಕ ಅವಲಂಬಿತವಾಗಿರುತ್ತದೆ. ಒಂದು ತಿಂಗಳಲ್ಲಿ 10ರಿಂದ 15 ಕೆಜಿ ದೇಹ ತೂಕ ಇಳಿಸಬೇಕೆಂಬ ಆತುರತೆ ಕೆಲವೊಮ್ಮೆ ಅನಾರೋಗ್ಯಕ್ಕೆ ಕಾರಮವಾಗುತ್ತದೆ. ದೇಹ ತೂಕ ಇಳಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿ ಅತ್ಯಂತ ಸುರಕ್ಷಿತ ರೀತಿಯಲ್ಲಿ ಪರಿಣಿತರ ಸಲಹೆಯ ಮೇರೆಗೆ ಸಾಗಬೇಕು ಎಂದು ಜಿಮ್ ಪರಿಣಿತ ವಿಕಾಸ್ ಪುತ್ರನ್ ಮಾಹಿತಿ ನೀಡಿದರು.
Leave A Reply

Your email address will not be published.