ಪುನೀತ್‌ರಾಜ್ ನೆನೆದು ಕಣ್ಣೀರಿಟ್ಟ ಪುತ್ತೂರಿನ ಯುವಪ್ರತಿಭೆ ದೀಕ್ಷಾ ರೈ

ಪುತ್ತೂರು : ಶುಕ್ರವಾರ ನಿಧನರಾದ ನಟ ಪುನೀತ್ ರಾಜ್ ಅವರನ್ನು ನೆನೆದು ಪುತ್ತೂರಿನ ಯುವಕಲಾವಿದೆ ದೀಕ್ಷಾ ರೈ ಕಂಬನಿ‌ ಮಿಡಿದಿದ್ದಾರೆ.

ಪುತ್ತೂರಿನ ಸುಧಾನ ವಸತಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ದೀಕ್ಷಾ ರೈ, ಪುನೀತ್ ರಾಜ್ ಕುಮಾರ್ ರನ್ನು ಅತ್ಯಂತ ಹತ್ತಿರದಿಂದ ಬಲ್ಲವರು,ಖಾಸಗಿ ಟಿವಿ ವಾಹಿನಿಯಲ್ಲಿ ನಡೆದ ಡ್ಯಾನ್ಸ್ ಸ್ಫರ್ಧೆ ಕಾರ್ಯಕ್ರಮದಲ್ಲಿ ದೀಕ್ಷಾ ಪ್ರದರ್ಶಿಸಿದ ಡ್ಯಾನ್ಸ್ ಗೆ ಮಾರುಹೋಗಿದ್ದ ಪುನೀತ್ ನಂತರದ ದಿನಗಳಲ್ಲಿ ದೀಕ್ಷಾಳ ಜೊತೆ ಉತ್ತಮ ಸಂಬಂಧ ಬೆಳೆಸಿದ್ದರು.

ಕನ್ನಡದ ಕೋಟ್ಯಾಧಿಪತಿ ಯಲ್ಲಿ ಪುನೀತ್ ರಾಜ್ ಗೆ ಪ್ರಶ್ನೆ ಕೇಳುವ ಅವಕಾಶವೂ ದೀಕ್ಷಾ ರೈ ಅವರಿಗೆ ದೊರಕಿತ್ತು. ಕಾರ್ಯಕ್ರಮದಲ್ಲಿ ಪುನೀತ್ ಗೆ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಪುನೀತ್ ಎದುರು ತಬ್ಬಿಬ್ಬಾಗಿದ್ದ ದೀಕ್ಷಾಳಿಗೆ ಧೈರ್ಯ ತುಂಬಿ ಕಾರ್ಯಕ್ರವನ್ನು ಮುಂದುವರಿಸಿದ್ದ ಪುನೀತ್ ರಾಜ್ ಕುಮಾರ್ ರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.ಆ ಕಾರ್ಯಕ್ರಮದಲ್ಲಿ ಪುನೀತ್ ಅವರಲ್ಲಿ ದೀಕ್ಷಾ ರೈ ಅವರು ಅಲೂಗಡ್ಡೆಯ ಬೆಲೆ ಎಷ್ಟೆಂದು ಕೇಳಿದ್ದರು.

ಖಾಸಗಿ ಚಾನೆಲ್‌ನಲ್ಲಿ ದೀಕ್ಷಾಳ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದ ಪುನಿತ್ ದೀಕ್ಷಾಳ ಡ್ಯಾನ್ಸ್ ನ ಒಂದು ಸ್ಟೆಪ್ ಅನ್ನು ತಾನು ತನ್ನ ಮುಂದಿನ ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದು ದೀಕ್ಷಾಳಲ್ಲಿ ತಿಳಿಸಿದ್ದರು.

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಹೆಚ್ಚು ಒಲವಿದ್ದ ಪುನೀತ್ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಎದುರಿನ ದೇವಮಾರು ಗದ್ದೆಯಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕೆರೆ ಕಂಬಳದಲ್ಲೂ ಭಾಗವಹಿಸಿ ಕಂಬಳದ‌ ಕುರಿತು ಅಭಿಮಾನದ ಮಾತನಾಡಿದ್ದರು. ಎಲ್ಲಾ ವಯೋಮಾನದವರ ಜೊತೆಗೂ ಆತ್ಮೀಯವಾಗಿ ಬೆರೆಯುತ್ತಿದ್ದ ಪುನೀತ್ ದೀಕ್ಷಾಳ ಜೊತೆ ಮಕ್ಕಳಂತೆ ಬೆರೆಯುತ್ತಿದ್ದರು ಎನ್ನುವುದನ್ನು ದೀಕ್ಷಾ ನೆನೆದು ಕಣ್ಣೀರಿಡುತ್ತಾಳೆ. ಮತ್ತೆ ಹುಟ್ಟಿ ಬಾ ಪುನೀತ್ ಎಂದು ಪ್ರಾರ್ಥಿಸುತ್ತಿದ್ದಾಳೆ.

Leave A Reply

Your email address will not be published.