ಭಾಷಣದಲ್ಲಿ ಬಂಟ ಸಮುದಾಯದ ಹೆಣ್ಣಿನ ಬಗ್ಗೆ ಕೀಳು ಮಾತು | ಚೈತ್ರಾ ಕುಂದಾಪುರ ಸಾರ್ವಜನಿಕವಾಗಿ ಕ್ಷಮೆ ಯಾಚಿಸಲು ಬ್ಲಾಕ್ ಕಾಂಗ್ರೆಸ್ ಆಗ್ರಹ

ಕಡಬ: ಸುರತ್ಕಲ್‌ನಲ್ಲಿ ಜರಗಿದ ಹಿಂದೂ ಸಮಾವೇಶದಲ್ಲಿ ಭಾಷಣ ಮಾಡಿದ ಚೈತ್ರಾ ಕುಂದಾಪುರ ಅವರು ಬಂಟ ಸಮುದಾಯದ ಹೆಣ್ಣಿನ ಬಗ್ಗೆ ಮಾನಹಾನಿಕರ ಕೀಳು ಮಾತುಗಳ್ನಾಡಿರುವುದು ಖಂಡನೀಯ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಹಿಂದೂ ಸಮಾವೇಶದಲ್ಲಿ ಭಾಷಣ ಮಾಡುವವರಿ ಗೆ ಮದುವೆಯ ಪ್ರಾಯ ಕಳೆದ ಬಂಟ ಸಮುದಾಯದ ಹೆಣ್ಣಿನ ವಿಚಾರ ಯಾಕೆ ಬೇಕಿದೆ. ಸಭೆಯ ಔಚಿತ್ಯವನ್ನು ಮರೆತು ಸಭಿಕರ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುವ ಭಾಷಣಕಾರರಿಗೆ ಕಡಿವಾಣ ಹಾಕುವ ಕೆಲಸವನ್ನು ಬಿಜೆಪಿಯಲ್ಲಿರುವ ಬಂಟ ಸಮುದಾಯದ ನಾಯಕರು ಮಾಡಬೇಕಿದೆ ಎಂದರು.

ದ.ಕ.ಜಿಲ್ಲಾ ಬಂಟರ ಸಂಘದ ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಅವರು ಮಾತನಾಡಿ ,ಬಂಟರ ಸಂಘವು ಬಂಟ ಸಮುದಾಯದ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಮದುವೆಗೆ ನೆರವು ನೀಡುವುದು ಮುಂತಾದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಸಭೆಯಲ್ಲಿ ಲೇವಡಿ ಮಾಡಿರುವುದನ್ನು ಬಲವಾಗಿ ಖಂಡಿಸುತ್ತಿದ್ದೇವೆ. ಬಂಟ ಸಮುದಾಯದ ಹೆಣ್ಣಿನ ಕುರಿತು ಮಾನ ಹಾನಿಕರ ಭಾಷಣ ಮಾಡಿದ ಚೈತ್ರಾ ಕುಂದಾಪುರ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು

ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಡಬ ಸಿ.ಎ.ಬ್ಯಾಂಕ್ ನಿರ್ದೇಶಕ ಸತೀಶ್ ನ್ಯಾಕ್ ಮೆಲಿನಮನೆ ಹಾಗೂ ಕಡಬ ಗ್ರಾ.ಪಂ. ಮಾಜಿ ಸದಸ್ಯೆ ಶಾಲಿನಿ ಸತೀಶ್ ನಾಯಕ್ ಉಪಸ್ಥಿತರಿದ್ದರು.

Leave A Reply

Your email address will not be published.