ಡಿ.21-ಡಿ.26 : ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ-ಅಶೋಕ್ ಕುಮಾರ್ ರೈ

ಪುತ್ತೂರು : ಡಿ.21 ರಿಂದ ಡಿ.26 ರವರೆಗೆ ಕೋಡಿಂಬಾಡಿಯ ಮಠಂತಬೆಟ್ಟು ಮಹಿಷಮರ್ದಿನಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಧಾರ್ಮಿಕ ಹಾಗೂ ಜೋಡಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬ್ರಹ್ಮಕಲಶೋತ್ಸವ ಮಂಗಳೂರು ದಸರಾ ಮಾದರಿಯಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ‌.24ರಂದು ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದರು.

ಕೊರೋನ ಕಾರಣದಿಂದಾಗಿ ಎರಡು ಬಾರಿ ಮುಂದೂಡಲ್ಪಟ್ಟ ಕ್ಷೇತ್ರದ ಬ್ರಹ್ಮಕಲಶೋತ್ಸವವು ಇದೀಗ ಪ್ರಶ್ನಾಚಿಂತನೆ ನಡೆಸಿ ಡಿಸೆಂಬರ್‌ನಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ.ಬ್ರಹ್ಮಕಲಶೋತ್ಸವ ಪೂರ್ವವಾಗಿ ನಡೆಯಬೇಕಾದ ಸೇವೆಗಳೆಲ್ಲಾ ನಡೆದಿದ್ದು ಭಕ್ತಾದಿಗಳೆಲ್ಲರೂ ಭಕ್ತಯಿಂದ ನಿರೀಕ್ಷಿಸುತ್ತಿರುವ ಬ್ರಹ್ಮಕಲಶೋತ್ಸವದ ತಯಾರಿಗಳು ನಡೆಯುತ್ತಿದೆ.ಈ ಹಿಂದೆ ನಿರ್ಧರಿಸಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಜೋಡಿಸಿಕೊಂಡು ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ರೈ ಹೇಳಿದರು.

ಬ್ರಹ್ಮಕಲಶೋತ್ಸವದ ವಿಶೇಷತೆಗಳು

ಈಗಾಗಲೇ ರಾಜ್ಯದೆಲ್ಲೆಡೆ ತನ್ನ ವಿಶಿಷ್ಟ ಕಾರ್ಯಕ್ರಮ ಜೋಡಣೆಯಿಂದ ಮನೆ ಮಾತಾಗಿರುವ ಮಠಂತಬೆಟ್ಟು ಮಹಿಷಮರ್ದಿನಿ ದೇವರ ಬ್ರಹ್ಮಕಲಶೋತ್ಸವವು ಭಕ್ತರ ನಿರೀಕ್ಷೆಯಂತೆ ವಿಶೇಷತೆಗಳಿಂದ ಕೂಡಿದೆ. ಸುಮಾರು ೫ ಲಕ್ಷ ವೆಚ್ಚದಲ್ಲಿ ಮಂಗಳೂರು ದಸರಾ ಶೈಲಿಯ ನಗರಾಲಂಕಾರವು ನಡೆಯಲಿದೆ.ಬ್ರಹ್ಮಕಲಶೋತ್ಸವದಲ್ಲಿ ಸುಮಾರು ೫-೬ ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ. ಈ ಹಿಂದೆ ನಿರ್ಧರಿಸಿದಂತೆ ಭಜನಾಮೃತ ಕಾರ್ಯಕ್ರಮ ಜರಗಲಿದ್ದು ಭಜನಾ ತಂಡಗಳಿಗೆ ದೇವಾಲಯದ ಮೂಲಕ ವೇದಿಕೆ ಒದಗಿಸಲಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೋಡಿಸಿಕೊಂಡಿದ್ದು ಈ ಹಿಂದೆ ನಿಶ್ಚಯವಾಗಿದ್ದ ಕಾರ್ಯಕ್ರಮಗಳಷ್ಟೇ ಅಲ್ಲದೇ ಇನ್ನೂ ಹೆಚ್ಚಿನ ತಂಡಗಳು ಈ ಬಾರಿ ಬ್ರಹ್ಮಕಲಶೋತ್ಸವದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲಿವೆ.

ವಿಶೇಷವಾಗಿ ದೇವಾಲಯಕ್ಕೆ ಆಗಮಿಸುವವರಿಗಾಗಿ ವಾಹನದ ವ್ಯವಸ್ಥೆ ಮಾಡಲಾಗಿದ್ದು ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಲಭ್ಯ ಇವೆ.ಈಗಾಗಲೇ ಈ ಬಗ್ಗೆ ಸಚಿವ ಶ್ರೀರಾಮುಲು ಅವರಲ್ಲಿ ಪ್ರಸ್ತಾಪಿಸಿದ್ದು ಯಾವೆಲ್ಲಾ ರಸ್ತೆಗಳಿಗೆ ಬಸ್ಸಿನ ಅಗತ್ಯವಿದೆ ಎಂಬುದರ ಪಟ್ಟಿ ನೀಡಲು ತಿಳಿಸಿದ್ದಾರೆ.ವಹೀಗೆ ಮಠಂತಬೆಟ್ಟುವಿನ ಬ್ರಹ್ಮಕಲಶೋತ್ಸವವು ಅನೇಕ ವಿಶೇಷತೆಗಳೊಂದಿಗೆ ಸಾಧು ಸಂತರು, ಮಂತ್ರಿಗಳು, ಜನಪ್ರತಿನಿಧಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು. ಸಮಿತಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ತು, ಕೋಶಾಧಿಕಾರಿ ನಿರಂಜನ ರೈ ಮಠಂತಬೆಟ್ಟು, ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ನಿಡ್ಯ ಮತ್ತು ಪ್ರಚಾರ ಸಮಿತಿ ಸಂಚಾಲಕ ಜಯಪ್ರಕಾಶ್ ಬದಿನಾರು ಮತ್ತಿತರರು ಉಪಸ್ಥಿತರಿದ್ದರು.

ಧಾರ್ಮಿಕ ಪರಿಷತ್ ನವರು ಸರಕಾರಿ ಜಾಗದಲ್ಲಿರುವ ದೇವಸ್ಥಾನಗಳು ಹಾಗೂ ದೈವಸ್ಥಾನಗಳನ್ನು ಅವುಗಳಿಗಾಗಿ ಮೀಸಲಿರಿಸಲಿ

ಮಾಧ್ಯಮ ಸಂವಾದದ ಮಧ್ಯೆ ವಸ್ತ್ರ ಸಂಹಿತೆಯನ್ನು ಬ್ರಹ್ಮಕಲಶೋತ್ಸವದಲ್ಲಿ ಪಾಲಿಸುವ ಯೋಜನೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಕುಮಾರ್ ರೈ ‘ವಸ್ತ್ರ ಸಂಹಿತೆ ಮಾಡುವುದು ಒಳ್ಳೆಯದು, ಆದರೆ ಬ್ರಹ್ಮಕಲಶೋತ್ಸವಕ್ಕೆ ಬರುವವರು ನಮ್ಮ ಧರ್ಮವನ್ನು ಪಾಲಿಸುವ ಕೆಲಸವನ್ನು ಮಾಡುತ್ತಾರೆ. ದೇವಾಲಯಕ್ಕೆ ಬರುವಾಗ ಬಹುತೇಕ ಜನರು ಉಡುಗೆ-ತೊಡುಗೆಯನ್ನು ಬಹುತೇಕ ಪಾಲಿಸುತ್ತಾರೆ. ಆದರೆ ನಾವು ಇದೇ ರೀತಿ ಬನ್ನಿ ಎಂಬ ಚೌಕಟ್ಟು ವಿಧಿಸುವುದು ಕಷ್ಟ ಸಾಧ್ಯ. ಧಾರ್ಮಿಕ ಪರಿಷತ್ ನವರಿಗೆ ಕೆಲಸ ಮಾಡಲು ಬೇಕಾಗುವಷ್ಟು ವ್ಯವಸ್ಥೆಗಳಿವೆ. ವಸ್ತ್ರ ಸಂಹಿತೆ ಮುಂಚಿತವಾಗಿ ನಡೆಯಬೇಕಾದ ಅನೇಕ ಕೆಲಸಗಳಿವೆ. ಬಹಳಷ್ಟು ದೇವಸ್ಥಾನಗಳು ಸರಕಾರಿ ಜಾಗದಲ್ಲಿದೆ. ಈಗಾಗಲೇ ಅನಧಿಕೃತ ದೇವಾಲಯಗಳನ್ನು ಕೆಡಹಿದ ಘಟನೆಗಳೂ ರಾಜ್ಯದಲ್ಲಿ ನಡೆದಿದೆ. ಆದ್ದರಿಂದ ಧಾರ್ಮಿಕ ಪರಿಷತ್ ಶೀಘ್ರವಾಗಿ ಎಲ್ಲಾ ಸರಕಾರಿ ಜಾಗದಲ್ಲಿರುವ ಮಠ, ಮಂದಿರ, ದೈವಸ್ಥಾನಗಳನ್ನು ಅವುಗಳಿಗಾಗಿ ಮೀಸಲಿರಿಸುವ ಕೆಲಸ ಮಾಡಲಿ ಎಂದು ವಿನಂತಿಸುತ್ತಿದ್ದೇನೆ ಎಂದರು.

Leave A Reply

Your email address will not be published.