ಬೆಳ್ಳಾರೆ : ಗಮನ ಸೆಳೆಯಿತು ಹಾರೆ ಹಿಡಿದ 2ನೇ ತರಗತಿ‌ ಮಕ್ಕಳ ರಸ್ತೆ ದುರಸ್ತಿ | ಸಂಜೆಯೊಳಗೆ ರಸ್ತೆ ದುರಸ್ತಿಗೆ ನ್ಯಾಯಾಧೀಶರ ತಾಕೀತು

ಸುಳ್ಯ : ಬೆಳ್ಳಾರೆಯಿಂದ ಮುಡಾಯಿ ತೋಟ ಕಡೆಗೆ ಹೋಗುವ ರಸ್ತೆ ಮಂಡೇಪು ಎಂಬಲ್ಲಿ ಕೆಸರುಮಯವಾಗಿರುವ ರಸ್ತೆಯನ್ನು 2 ನೇ ತರಗತಿಯ ಪುಟ್ಟಮಕ್ಕಳು ದುರಸ್ತಿ ಮಾಡುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಂಡು ವೈರಲ್ ಆಗಿದ್ದು, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜಾಗೃತಿಗೆ ಕಾರಣವಾಗಿದೆ. ಗ್ರಾಮ ಪಂಚಾಯತ್ ,ತಾ.ಪಂ. ಅಧಿಕಾರಿಗಳಲ್ಲದೆ ಸುಳ್ಯದ ನ್ಯಾಯಾಧೀಶರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಸೋಮವಾರ ಸಂಜೆಯೊಳಗೆ ರಸ್ತೆ ದುರಸ್ತಿ ಮಾಡಿ ಕೆಸರು ನಿವಾರಿಸಬೇಕೆಂದು ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಆದಿತ್ಯವಾರ ರಾತ್ರಿಯೇ ಇದನ್ನು ಗಮನಿಸಿ ಸುಳ್ಯ ತಾಪಂ ಇ.ಒ. ರವರಿಗೆ ಸೂಚನೆ ನೀಡಿದ್ದಾರೆ.ತಾಪಂ ಇಒ ಬೆಳ್ಳಾರೆ ಗ್ರಾ ಪಂ ಪಿಡಿಒ ರವರಿಗೆ ಫೋನಾಯಿಸಿ ದುರಸ್ತಿಗೆ ನಿರ್ದೇಶನ ನೀಡಿದ್ದರು. ಅದರಂತೆ ಪಿಡಿಒ ಸೋಮವಾರ ಸ್ಥಳ ಪರಿಶೀಲನೆ ನಡೆಸಿದ್ದರು.

2ನೇ ತರಗತಿಯ ಪುಟ್ಟ ಮಕ್ಕಳು ದುರಸ್ತಿ ಪಡಿಸುತ್ತಿರುವ ವರದಿಯನ್ನು ಮಾಧ್ಯಮದ ಮೂಲಕ ಗಮನಿಸಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಸೋಮಶೇಖರ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ವಿದ್ಯಾರ್ಥಿಗಳ ಕೈಯಲ್ಲಿ ಹಾರೆ ನೀಡಿದುದಕ್ಕಾಗಿ ಪೋಷಕರನ್ನು ಪ್ರಶ್ನಿಸಿದರು. ” ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತಿಗೆ ಮನವಿ ನೀಡಿದ್ದರೂ, ಅವರು ಮಾಡದಿದ್ದ ಕಾರಣದಿಂದಾಗಿ ನಾವು ಶ್ರಮದಾನ ಮಾಡಿದೆವು. ಆ ವೇಳೆ ಮಕ್ಕಳು ಬಂದು ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ” ಎಂದು ಪೋಷಕರು ತಿಳಿಸಿದರು.

ಬಳಿಕ ಗ್ರಾಮ ಪಂಚಾಯತಿಗೆ ಬಂದ ನ್ಯಾಯಾಧೀಶರು ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಒ ರವರನ್ನು ಪ್ರಶ್ನಿಸಿ ಆ ರಸ್ತೆಯನ್ನು ದುರಸ್ತಿಪಡಿಸದ ಬಗ್ಗೆ ಕೇಸು ದಾಖಲಿಸುವುದಾಗಿ ಹೇಳಿದರೆನ್ನಲಾಗಿದೆ.

ಒಟ್ಟಿನಲ್ಲಿ ಎರಡನೇ ತರಗತಿಯ ಓದುವ ಇಬ್ಬರು ಮಕ್ಕಳು ಮಾಡಿದ ಶ್ರಮದಾನದ ಕಾರ್ಯ ಇಲಾಖಾಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿದೆ.

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ | ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಎಲ್ಯಾಸ್ ಪಿಂಟೋ ಬಂಧನ

Leave A Reply

Your email address will not be published.