ನಕ್ಸಲ್ ಸಂಬಂಧ ಆರೋಪ | ಬೆಳ್ತಂಗಡಿಯ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ

ಬೆಳ್ತಂಗಡಿ :ನಕ್ಸಲ್ ಸಂಪರ್ಕದ ಆರೋಪ ಹೊರಿಸಿ, ನಕ್ಸಲ್ ನಿಗ್ರಹ ದಳದ ಪೊಲೀಸರಿಂದ ದಶಕಗಳ ಹಿಂದೆ ಬಂಧಿತನಾಗಿದ್ದ ಪತ್ರಿಕೋದ್ಯಮ ವಿದ್ಯಾರ್ಥಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ವಿಠಲ ಮಲೆಕುಡಿಯ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಮೂರನೇ ಹೆಚ್ಚುವರಿ ನ್ಯಾಯಾಲಯವು ಇದೀಗ ಇಬ್ಬರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ಕೂಡ್ಲುರು ನಿವಾಸಿ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ನಿರ್ದೋಷಿಗಳು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ ಜಕಾತಿ ಈ ತೀರ್ಪು ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ
ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯನನ್ನು 2012
ಮಾ.3ರಂದು ನಕ್ಸಲ್ ನಿಗ್ರಹದಳ ಬಂಧಿಸಿತ್ತು. ಬಳಿಕ
ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ವಿಠಲ 6ನೇ ಹಾಗೂ ತಂದೆ ಲಿಂಗಣ್ಣ ಮಲೆಕುಡಿಯ 7ನೇ ಆರೋಪಿಗಳನ್ನಾ ದಾಖಲಿಸಲಾಗಿತ್ತು.

ಘಟನೆಯ ಹಿನ್ನಲೆ:

ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಪ್ಪ ಮಲೆಕುಡಿಯ ಅವರನ್ನು ನಕ್ಸಲ್ ನಿಗ್ರಹ ದಳದ
ಪೊಲೀಸರು 2012 ಮಾರ್ಚ್ 3ರಂದು ಮಂಗಳೂರಿನ ವಿದ್ಯಾರ್ಥಿ ನಿಲಯದಿಂದ ಮನೆಗೆ ಬಂದ ವೇಳೆ ಅವರ ಮನೆಯಿಂದ ಬಂಧಿಸಿದ್ದರು. ಆ ವೇಳೆ ಅವರ ಮನೆಯಿಂದ ಭಗತ್ ಸಿಂಗ ಜೀವನ ಚರಿತ್ರೆ ಪುಸ್ತಕ, ಅರ್ಧ ಕೆ.ಜಿ ಸಕ್ಕರೆ, 100 ಗ್ರಾಂ ಚಹಾ ಪುಡಿ,
ಆಟಿಕೆಯ ಬೈನಾಕುಲರ್, ಸೇರಿದಂತೆ ಮನೆ ಬಳಕೆಯ ವಸ್ತುಗಳನ್ನು ವಶ ಪಡಿಸಿಕೊಂಡಿದ್ದರು. ಈ ಸಂದರ್ಭ ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಪತ್ರಿಕೋದ್ಯಮದ
ವಿದ್ಯಾರ್ಥಿಯಾಗಿದ್ದರು. ಡಿವೈಎಫ್‌ಐ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಕ್ರಿಯ ಕಾರ್ಯಕರ್ತನಾಗಿದ್ದ. ಈತನ ಬಂಧನ ರಾಜ್ಯದಾದ್ಯಂತ ಭಾರಿ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ಕುತೂಹಲದ ವಿಚಾರವೆಂದರೆ ನಕ್ಸಲ್ ಸಂಪರ್ಕದ ಆರೋಪ ಪ್ರಕರಣದ ಒಂದನೆಯ ಆರೋಪಿಯೆಂದು ನಕ್ಸಲ್ ನಾಯಕ ವಿಕ್ರಂಗೌಡನ ಹೆಸರಿದ್ದು,ಮೊದಲ ಐದು ಆರೋಪಿಗಳು ತಲೆಮರೆಸಿಕೊಂಡಿರುವ ನಕ್ಸಲ್ ನಾಯಕರುಗಳೇ ಆಗಿದ್ದಾರೆ.ಪ್ರದೀಪ್, ಜಾನ್, ಸುಂದರಿ, ಹಾಗೂ ಪ್ರಭಾ ಆರೋಪ ಪಟ್ಟಿಯಲ್ಲಿ ಹೆಸರಿರುವ ಶಂಕಿತ ನಕ್ಸಲೀಯರಾಗಿದ್ದಾರೆ. ಈ ಐವರ ಮೇಲೆ ಹಾಗೂ ವಿಠಲ ಮತ್ತು ಆತನ ತಂದೆಯ ಮೇಲೆ ಹಲವು ಆರೋಪಗಳನ್ನು ಹೊರಿಸಿ ವಿಠಲ ಮಲೆಕುಡಿಯ ಅವರನ್ನು ಆರನೆಯ ಆರೋಪಿಯೆಂದು, ಲಿಂಗಪ್ಪ ಮಲೆಕುಡಿಯ ಏಳನೆಯ ಆರೋಪಿಯಾಗಿದ್ದು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ಆರೋಪಪಟ್ಟಿ ಸಲ್ಲಿಸಿದ್ದರು.

ಪೊಲೀಸರಿಂದ ಬಂಧನಕ್ಕೆ ಒಳಗಾದ ವಿಠಲ ಮಲೆಕುಡಿಯ ಮೂರು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಬಳಿಕ 2012ರ ಜೂನ್ 6ರಂದು ಆತನಿಗೆ ಬೆಳ್ತಂಗಡಿ ನ್ಯಾಯಾಲಯವು ಜಾಮೀನು ನೀಡಿತ್ತು. ಬಳಿಕ ಶಿಕ್ಷಣ ಮುಂದುವರಿಸಿದ ವಿಠಲ
ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು
ಪೂರ್ಣಗೊಳಿಸಿದ್ದಾರೆ.

ಸಂಸದ ಎಂಪಿ ರಾಜೇಶ್, ಸಿಪಿಐಎಂ ಕಾರ್ಯದರ್ಶಿ ಪ್ರಕಾಶ್ ಕಾರಾಟ್ ಸೇರಿದಂತೆ ಹಲವರು ಮುಖಂಡರುಗಳು, ಮಾನವ ಹಕ್ಕುಗಳ ಹೋರಾಟಗಾರರು ಈತನ ಬಂಧನದ ವಿರುದ್ಧ
ಧ್ವನಿಯೆತ್ತಿದ್ದರು. ಸಂಸತ್ತಿನಲ್ಲಿಯೂ ಈ ವಿಚಾರ ಚರ್ಚೆಯಾಗಿತ್ತು.

Leave A Reply

Your email address will not be published.