ಈ ಬಾರಿಯ ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ಒಂದು ವಾರದ ಕಾಲ ರಂಗೇರಲಿದೆ ಕನ್ನಡದ ಹಬ್ಬ | ಒಂದೂ ಅನ್ಯ ಭಾಷೆಯ ಪದ ಬಳಸದೆ ನಿರರ್ಗಳವಾಗಿ ಕನ್ನಡ ಮಾತಾಡುವ ಕನ್ನಡಿಗನಿಗೆ ದೊರೆಯಲಿದೆ ಬಂಪರ್ ಬಹುಮಾನ!!

ಬೆಂಗಳೂರು: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಯೋಜಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಮಾಹಿತಿ ತಿಳಿಸಿದ್ದಾರೆ.

ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಎಂದಿನಂತೆ ನವೆಂಬರ್ ಒಂದರಂದು ಮಾತ್ರ ರಾಜ್ಯೋತ್ಸವ ಆಚರಿಸದೇ, ಈ ಬಾರಿ ಅಕ್ಟೋಬರ್ 24ರಿಂದ ಅಕ್ಟೋಬರ್ 30ರವರೆಗೆ ‘ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ರಾಜ್ಯದಾದ್ಯಂತ ನಡೆಯುವ ಈ ಕಾರ್ಯಕ್ರಮಕ್ಕೆ ಪ್ರತ್ಯೇಕ ಲಾಂಛನವನ್ನು ರೂಪಿಸಲಾಗಿದೆ. ಅಭಿಯಾನದ ಸಂದರ್ಭದಲ್ಲಿ ಎಲ್ಲರೂ ಕನ್ನಡದಲ್ಲೇ ಮಾತಾಡುವುದು, ಕನ್ನಡದಲ್ಲೇ ವ್ಯವಹರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಕನ್ನಡವನ್ನೇ ಬಳಸುವುದು, ಕನ್ನಡೇತರರಿಗೆ ಕನ್ನಡ ಕಲಿಸುವುದು, ಕನ್ನಡದಲ್ಲೇ ಸಹಿ ಮಾಡುವುದು, ಚರವಾಣಿಯ ಸಂದೇಶಗಳನ್ನು ಕನ್ನಡದಲ್ಲಿಯೇ ಕಳುಹಿಸುವುದು, ಐಟಿ-ಬಿಟಿ ಕಂಪೆನಿಗಳಲ್ಲಿ ಕನ್ನಡದಲ್ಲಿಯೇ ಮಾತನಾಡುವುದು ಹಾಗೂ ಎಲ್ಲಾ ಮಾಧ್ಯಮಗಳಲ್ಲಿಯೂ ಸರಿಗನ್ನಡವನ್ನೇ ಬಳಸುವ ಮೂಲಕ ಕನ್ನಡ ಹಬ್ಬದ ವಾತಾವರಣವನ್ನು ಸೃಷ್ಟಿಸೋಣ, ನಾಡಿನ ಎಲ್ಲರೂ ಕನ್ನಡವನ್ನು ಬಳಸುವುದು, ಪ್ರತಿಯೊಬ್ಬರಲ್ಲೂ ಕನ್ನಡ ಭಾಷೆಯ ಮಹತ್ವವನ್ನು ತಿಳಿಸುವುದರ ಜೊತೆ ಅನ್ಯ ಭಾಷೆಯ ಪದಗಳನ್ನು ಬಳಸದೇ ಕನ್ನಡದಲ್ಲಿ ಮಾತನಾಡಲು ಪೂರಕ ವಾತಾವರಣ ನಿರ್ಮಿಸುವುದು, ಒಂದು ವಾರ ಕಾಲ ಸಂಪೂರ್ಣ ಕನ್ನಡಮಯ ವಾತಾವರಣ ಸೃಷ್ಟಿಸುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದ ಹಿನ್ನಲೆಯಲ್ಲಿ ಲಾಂಛನ, ಕನ್ನಡದ ಹಿರಿಯ ಸಾಧಕರ ನುಡಿಗಳನ್ನು ಒಳಗೊಂಡ ಪ್ರೊಮೊ ಬಳಸುವ ಮೂಲಕ ಕನ್ನಡಪರ ವಾತಾವರಣವನ್ನು ನಾಡಿನಾದ್ಯಂತ ಮೂಡಿಸಲಾಗುತ್ತಿದೆ.

ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ:

ರಾಜ್ಯದ ಐದು ರಂಗಾಯಣಗಳು ಹಾಗೂ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಸಹಯೋಗದಲ್ಲಿ ರಾಜ್ಯದ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕರ್ನಾಟಕದ ಹಿರಿಮೆ ಬಿಂಬಿಸುವ ನಾಟಕಗಳು,ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡ ‘ಕನ್ನಡ ಸಾಂಸ್ಕೃತಿಕ ಉತ್ಸವ’ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬೆಂಗಳೂರು ಎಲ್ಲ ವಾರ್ಡ್ ಗಳಲ್ಲಿ, ಐಟಿಬಿಟಿ ಸಂಸ್ಥೆಗಳ ಆವರಣಗಳಲ್ಲಿ, ಮೆಟ್ರೋ, ವಿಧಾನಸೌಧ, ವಿವಿಧ ಕಾರ್ಖಾನಗಳ ಆವರಣದಲ್ಲಿ ಇದೇ ತೆರನಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ಸಾಮೂಹಿಕ ಕನ್ನಡ ಗೀತ ಗಾಯನ:

ರಾಜ್ಯಾದಾದ್ಯಂತ ಅಕ್ಟೋಬರ್ 28 ರಂದು ಬೆಳಗ್ಗೆ 11.06 ಗಂಟೆಗೆ ಒಂದು ಲಕ್ಷ ಕಂಠಗಳಲ್ಲಿ ಕನ್ನಡದ ಮೂರು ಗೀತೆಗಳ ಗಾಯನ ನಡೆಯಲಿದೆ. ಇದಕ್ಕೆ ಈಗಾಗಲೇ 3 ಕನ್ನಡದ ಗೀತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಷ್ಟ್ರಕವಿ ಕುವೆಂಪು ರಚಿತ ‘ಬಾರಿಸು ಕನ್ನಡ ಡಿಂಡಿಮವ’,ಕ.ಎಸ್. ನಿಸಾರ್ ಅಹಮದ್ ರಚಿತ ‘ಜೋಗದ ಸಿರಿ ಬೆಳಕಿನಲ್ಲಿ, ಹಂಸಲೇಖಾ ರಚನೆಯ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ತಿಳಿಸಿದರು.

ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಗಡಿನಾಡು, ಹೊರನಾಡುಗಳಲ್ಲಿ ಏಕಕಾಲದಲ್ಲಿ ಈ ಮೂರು ಹಾಡುಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ವಿಧಾನಸೌಧದ ಮೆಟ್ಟಿಲ ಬಳಿ ವಿಧಾನಸೌಧ ಸಿಬ್ಬಂದಿಗಳಿಂದ, ಗಾಂಧಿ ಪ್ರತಿಮೆ ಬಳಿ ಅಧಿಕಾರಿ ವೃಂದದಿಂದ ಗೀತ ಗಾಯನ ನಡೆಯಲಿದೆ ಎಂದರು.

ಕನ್ನಡದಲ್ಲಿ ಮಾತು ಮತ್ತು ಬರವಣಿಗೆ:

ಕನ್ನಡ ಭಾಷೆಯನ್ನು ಬೆಳೆಸುವ ಹಿನ್ನಲೆಯಲ್ಲಿ ಕಡ್ಡಾಯವಾಗಿ ಎಲ್ಲೆಡೆಯೂ ಕನ್ನಡ ಬಳಸುವಂತ ಚರವಾಣಿ(ಮೊಬೈಲ್)ಯಲ್ಲಿ ಕನ್ನಡ ಭಾಷೆಯಲ್ಲೇ ಸಂದೇಶ ಕಳುಹಿಸುವಂತೆ, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿಯೂ ಕನ್ನಡವನ್ನೇ ಬಳಸುವಂತೆ ಪ್ರೇರೇಪಿಸುವುದು ಎಂದರು.

ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ:

ಒಂದೂ ಅನ್ಯ ಭಾಷೆಯ ಪದಗಳನ್ನು ಬಳಸದೇ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಸಿ ತಗೆದು ಕಳುಹಿಸುವುದು. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಪ್ರಥಮ- 5000/-ರೂ., ದ್ವಿತೀಯ- 3000-ರೂ., ತೃತೀಯ 2000/- ರೂ ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯಮಟ್ಟದಲ್ಲಿ ಮತ್ತೆ ಸ್ಪರ್ಧೆ ನಡೆಸಲಾಗುವುದು. ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ, 50,000/- ರೂ. ದ್ವಿತೀಯ ಬಹುಮಾನ- 30,000/- ಮತ್ತು ತೃತೀಯ ಬಹುಮಾನ- 20,000/ರೂ. ನೀಡಲಾಗುವುದು. ಅಕ್ಟೋಬರ್ 28ರೊಳಗೆ ವಿಡಿಯೋ-ಸೆಲ್ಸಿ ತಗೆದು ಕಳುಹಿಸುವುದು. ಅಕ್ಟೋಬರ್ 20ರಂದು ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಗಡಿಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ:

ರಾಜ್ಯದ ಗಡಿಭಾಗಗಳಾದ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಭಾಗದ ತಾಲೂಕು ಪ್ರದೇಶಗಳಲ್ಲಿ ನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯ ಕುರಿತ ಜಾಗೃತಿ ಕಾರ್ಯಕ್ರಮಗಳ ನಡೆಸುವ ಮೂಲಕ ಕನ್ನಡಕ್ಕಾಗಿ ನಾವು’ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಕರ್ನಾಟಕ ಸಾಂಸ್ಕೃತಿಕ ಉತ್ಸವ:

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕರ್ನಾಟಕ ಸಾಂಸ್ಕೃತಿಕ ಉತ್ಸವವನ್ನು ಅಕ್ಟೋಬರ್ 29, 30, 31ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಪುಸ್ತಕೋತ್ಸವ, ದೇಶೀಯ ಉಡುಪು ಮತ್ತು ಆಹಾರ ಮೇಳ, ಚಿತ್ರಕಲೆ/ಶಿಲ್ಪಕಲಾ ಮೇಳಗಳನ್ನು ಆಯೋಜಿಸಲಾಗುವುದು. ಜೊತೆಗೆ ಗೀತಗಾಯನ, ನೃತ್ಯರೂಪಕ, ಯಕ್ಷಗಾನ, ವಿಚಾರ ಸಂಕಿರಣ, ಶಾಸ್ತ್ರೀಯ ನೃತ್ಯ, ಕಾವ್ಯ-ಕುಂಚ-ಗಾಯನ, ನಾಟಕ, ಸುಗಮಸಂಗೀತ, ವಾದ್ಯಸಂಗೀತ, ಜಾನಪದ ನೃತ್ಯ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ. ಬನ್ನಿ, ಕನ್ನಡಿಗರಾದ ನಾವೆಲ್ಲರೂ ಈ ಅಭಿಯಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳೋಣ ಎಂದರು.

Leave A Reply

Your email address will not be published.