ಪುತ್ತೂರು: ರೈತರ ಹಾಗೂ ಸ್ವಸಹಾಯ ಸಂಘಗಳ ಸಾಲ ಜೋಡಣೆ ಉತ್ಸವ

ರೈತರ ಹಾಗೂ ಸ್ವಸಹಾಯ ಸಂಘಗಳ ಸಾಲ ಜೋಡಣಾ ಕಾರ್ಯಕ್ರಮವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಹಾಗೂ ಸುತ್ತಮುತ್ತಲಿನ ಶಾಖೆಗಳಿಂದ ಜಂಟಿಯಾಗಿ ದಿನಾಂಕ 18.10.2021 ರಂದು ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ RAJKIRAN RAI G ರವರು ಆಗಮಿಸಿ ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 25 ಸ್ವಸಹಾಯ ಸಂಘಗಳಿಗೆ ಒಂದು ಕೋಟಿಗಿಂತಲೂ ಹೆಚ್ಚಿನ ಸಾಲ ಮಂಜೂರಾತಿ ಪತ್ರವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೃಷಿ ಹಾಗೂ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಆಕರ್ಷಕ ಬಡ್ಡಿದರದಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇದರ ಉಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ರೈತರು ಹಾಗೂ ಸ್ವಸಹಾಯ ಸಂಘಗಳು ಪಡೆಯಬೇಕು ಎಂದು ಆಗ್ರಹಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ PMJBY, PMSBY, ಹಾಗೂ APY ಯೋಜನೆಗಳಡಿಯಲ್ಲಿ ಹೆಚ್ಚಿನ ಗ್ರಾಹಕರು ರೈತರು ನೋಂದಣಿ  ಮಾಡಿಕೊಂಡು ಲಾಭವನ್ನು ಪಡೆಯಲು ತಿಳಿಸಿದರು. ಬ್ಯಾಂಕ್ ಮುದ್ರಾ ಸಾಲ ಯೋಜನೆಯಡಿಯಲ್ಲಿ ಡಿಜಿಟಲ್ ಮುಖಾಂತರ ರೂಪಾಯಿ 50,000 ವರೆಗೆ ತ್ವರಿತ ರೀತಿಯಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆಯನ್ನು ಅಳವಡಿಸಿದ್ದು ಅದರ ಲಾಭವನ್ನು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಲು ಕೋರಿದರು. ಬ್ಯಾಂಕುಗಳು ಬರುವ ದಿನಗಳಲ್ಲಿ ಆಸ್ತಿ ಆಧಾರಿತ ಸಾಲಕ್ಕಿಂತಲೂ ಗ್ರಾಹಕರ ವ್ಯವಹಾರ ಮತ್ತು ಸಾಲ ಮರುಪಾವತಿಯ ದಾಖಲೆಗಳ ಅನುಗುಣವಾಗಿ ಸಾಲ ಮಂಜೂರಾತಿಯನ್ನು ನಿರ್ಧರಿಸಲಾಗುವುದು ಆದ್ದರಿಂದ ಎಲ್ಲರೂ ಬ್ಯಾಂಕ್ ವ್ಯವಹಾರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲು ಒತ್ತು ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಲಯ ಕಚೇರಿಯ ಮುಖ್ಯ ಮಹಾ ಪ್ರಬಂಧಕರು ಶ್ರೀ ಎಂ.ವಿ. ಬಾಲಸುಬ್ರಮಣ್ಯಂ ಮಾತನಾಡಿ ಕೃಷಿ ಹಾಗೂ ಸ್ವಸಹಾಯ ಸಂಘಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ ಇದರ ಸೌಲಭ್ಯವನ್ನು ಪಡೆಯಬೇಕೆಂದು ವಿನಂತಿಸಿದರು.

ಪ್ರಾದೇಶಿಕ ಕಚೇರಿಯ ಮುಖ್ಯಸ್ಥರು ಹಾಗೂ ಉಪ ಮಹಾ ಪ್ರಬಂಧಕ ರಾದ ಶ್ರೀ ಮಹೇಶ್ ಜೆ ರವರು ಕಾರ್ಯಕ್ರಮದಲ್ಲಿ ವಂದನಾರ್ಪಣೆ ನೆರವೇರಿಸಿದರು.

Leave A Reply

Your email address will not be published.