ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ ರಘುಪತಿ ಭಟ್ ಪ್ರಶ್ನೆ | ಕೇಸರಿ ಬಟ್ಟೆ ಧರಿಸಿದ ಕಾಪು ಪೊಲೀಸರ ಫೋಟೋಹಾಕಿ ಸಿದ್ದರಾಮಯ್ಯ ಟ್ವೀಟ್ ಹಿನ್ನೆಲೆ !

ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಉಡುಪಿಯ ಕಾಪು ಪೊಲೀಸರು ಕೇಸರಿ ಬಟ್ಟೆ ಧರಿಸಿದ ಫೋಟೋ ಟ್ವೀಟ್ ಮಾಡಿ ಟೀಕಿಸಿದ್ದರು. ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ? ನೀವು ಟಿಪ್ಪುವಿನ ಪೋಷಾಕು ಧರಿಸಿ, ಖಡ್ಗ ಹಿಡಿದಿಲ್ಲವೇ? ಪಚ್ಚೆ ಶಾಲು, ಟೊಪ್ಪಿ ಧರಿಸಿದಾಗ ಭಾವೈಕ್ಯತೆ ನೆನಪಾಗಲಿಲ್ಲವೇ? ಪೊಲೀಸರು ಕೇಸರಿ ಬಟ್ಟೆ ಧರಿಸಿದರೆ ನಿಮಗೆ ಏನು ಸಮಸ್ಯೆ? ಎಂದು ಉಡುಪಿ ಶಾಸಕ ರಘುಪತಿ ಭಟ್ ಪ್ರಶ್ನಿಸಿದ್ದಾರೆ.

ಮೊನ್ನೆ ಪೊಲೀಸರು ವಿಜಯದಶಮಿಯಂದು ಕೇಸರಿ ಉಡುಪು ಧರಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ಪೊಲೀಸರಿಗೆ ತ್ರಿಶೂಲಗಳನ್ನು ಕೊಟ್ಟು ಹಿಂಸೆಯ ದೀಕ್ಷೆ ಕೊಡಿ ಎಂದು ಕಿಡಿಕಾರಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಟ್ ಅವರು ‘ ಕೇಸರಿ ತ್ಯಾಗದ ಸಂಕೇತ. ದೇಶದಲ್ಲಿ ಕೇಸರಿಯನ್ನು ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದೇವೆ. ಅಲ್ಪಸಂಖ್ಯಾತರ ಮತ ಬ್ಯಾಂಕ್ ಉದ್ದೇಶವಿಟ್ಟುಕೊಂಡು ಕೇಸರಿಯನ್ನು ದ್ವೇಷಿಸಿದ್ದೀರಿ. ಕೇಸರಿಯನ್ನು ದ್ವೇಷಿಸಿದಕ್ಕೆ ಕಾಂಗ್ರೆಸ್‍ಗೆ ಈ ಪರಿಸ್ಥಿತಿ ಬಂದಿದೆ. ಕೇಸರಿಯನ್ನು ವಿರೋಧಿಸಿದರೆ ಇನ್ನಷ್ಟು ಮೂಲೆಗುಂಪಾಗುತ್ತೀರಿ. ಹಬ್ಬದ ದಿನ ಪೊಲೀಸರು ಕೇಸರಿ ಧರಿಸಿದ್ದನ್ನು ಸಮರ್ಥಿಸುತ್ತೇನೆ ‘ ಎಂದು ರಘುಪತಿ ಭಟ್ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನಮ್ಮ ರಾಷ್ಟ್ರ ಧ್ವಜದಲ್ಲಿ ಕೇಸರಿ ಬಣ್ಣ ಇದೆ. ಕೇಸರಿ ಧರಿಸಿದ್ದು ಅಪರಾಧವೇನಲ್ಲ. ಸಿದ್ದರಾಮಯ್ಯಅವರ ಮನೋ ಭಾವನೆ ಈ ಟ್ವೀಟ್‍ನಿಂದ ಗೊತ್ತಾಗುತ್ತೆ. ತ್ರಿಶೂಲ ಯಾರನ್ನೂ ಕೊಲ್ಲುವ ಆಯುಧವಲ್ಲ. ತ್ರಿಶೂಲ ಹಿಂದೂಗಳು ಆರಾಧಿಸುವ ಆಯುಧ. ಪೊಲೀಸರಿಗೆ ತ್ರಿಶೂಲ ಕೊಡುವುದು ಒಳ್ಳೆಯ ಸಂಗತಿ. ಸಿದ್ದರಾಮಯ್ಯನವರು ಹೇಳಿರುವುದು ಸರಿಯಾಗಿದೆ ಎಂದು ಶಾಸಕ ರಘುಪತಿ ಭಟ್ ವ್ಯಂಗ್ಯವಾಡಿದ್ದಾರೆ.

Leave A Reply

Your email address will not be published.