ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಅದಲು ಬದಲು ಪ್ರಕರಣ

ಮಂಗಳೂರು: ಜಿಲ್ಲಾ ಪ್ರಸಿದ್ಧ ಸರ್ಕಾರಿ ಹೆರಿಗೆ ಆಸ್ಪತ್ರೆ ವಿರುದ್ಧ ನವಜಾತ ಶಿಶುವನ್ನು ಬದಲಾಯಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರನ್ನು ಕೂಡ ನೀಡಲಾಗಿದೆ. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಕರಾವಳಿ ಭಾಗದಲ್ಲಿ ಅತ್ಯಂತ ಪ್ರಸಿದ್ಧ ಸರ್ಕಾರಿ ಹೆರಿಗೆ . ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ನಿತ್ಯ ನೂರಾರು ಗರ್ಭಿಣಿಯರು ಹೆರಿಗೆಗೆ ಬರುತ್ತಾರೆ. ಇಲ್ಲಿ ನುರಿತ ವೈದ್ಯರು ಕೂಡ ಇದ್ದಾರೆ. ಆಡಳಿತ ನಿರ್ವಹಣೆಯನ್ನು ದೇಶದ ಪ್ರತಿಷ್ಟಿತ ವೈದ್ಯಕೀಯ ಸಂಸ್ಥೆಯಾದ ಕೆ.ಎಂ.ಸಿ ವಹಿಸಿಕೊಂಡಿದೆ. ಇಂತಹ ವ್ಯವಸ್ಥಿತ ಆಸ್ಪತ್ರೆ ವಿರುದ್ಧ ಈಗ ಗಂಭೀರ ಆರೋಪ ಕೇಳಿ ಬಂದಿದೆ.

ಸೆಪ್ಟಂಬರ್ 27 ರಂದು ಹೆರಿಗೆಗಾಗಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ನಿವಾಸಿಗಳಾದ ಅಮ್ರೀನಾ-ಮುಸ್ತಫಾ ದಂಪತಿ ಬಂದಿದ್ದಾರೆ. ಅದೇ ದಿನ ಹೆರಿಗೆಯಾಗಿದ್ದು ಹೆಣ್ಣು ಮಗು ಹುಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಹುಟ್ಟಿದಾಗ ಮಗುವಿಗೆ ತೀವ್ರ ಅನಾರೋಗ್ಯ ಇದ್ದ ಕಾರಣ ಎನ್ ಐಸಿಯುಗೆ ದಾಖಲು ಮಾಡಿದ್ದಾರೆ. 15 ದಿನಗಳಲ್ಲಿ 2 ಬಾರಿ ತಾಯಿಗೆ ಮಗುವನ್ನು ತೋರಿಸಿದ್ದನ್ನು ಬಿಟ್ಟರೆ ಇನ್ಯಾರಿಗೆ ಮಗುವನ್ನು ತೋರಿಸಿಲ್ಲ. ಇನ್ನು ಆಸ್ಪತ್ರೆಯ ದಾಖಲೆಗಳಲ್ಲಿ ಹೆಣ್ಣು ಮಗು ಎಂದೇ ಆಡಳಿತ ಮಂಡಳಿ ನಮೂದಿಸಿದೆ.

ಪೋಷಕರು ಉಡುಪಿಯ ಮತ್ತೊಂದು ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಅಕ್ಟೋಬರ್ 13 ರಂದು ಡಿಸ್ಚಾರ್ಜ್ ಮಾಡಿ ಕುಂದಾಪುರದ ಒಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ನೋಡಿದಾಗ ಅದು ಗಂಡು ಮಗುವಾಗಿತ್ತು. ತಕ್ಷಣ ಗಂಡು ಮಗುವನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಕೊಟ್ಟು ನಮ್ಮ ಹೆಣ್ಣು ಮಗು ಕೊಡಿ ಅಂತಾ ಕೇಳಿದ್ದಾರೆ. ಮಾತ್ರವಲ್ಲದೇ ಬಂದರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ನಮ್ಮ ಹೆಣ್ಣು ಮಗುವನ್ನು ಕೊಡದೆ ಆರೋಗ್ಯ ಸರಿ ಇಲ್ಲದ ಗಂಡು ಮಗು ಕೊಟ್ಟಿದ್ದಾರೆ ಅನ್ನೋದು ಮಗುವಿನ ತಂದೆಯ ಆರೋಪ.ಇನ್ನು ಈ ಪ್ರಕರಣದ ಬಗ್ಗೆ ಲೇಡಿಗೋಷನ್ ಆಸ್ಪತ್ರೆ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಹೇಳೋದೆ ಬೇರೆ. ಮಗು ಅದಲು-ಬದಲು ಆರೋಪ ಸತ್ಯಕ್ಕೆ ದೂರವಾದ ವಿಷಯ. ಆಸ್ಪತ್ರೆ ಸಿಬ್ಬಂದಿ ಅಚಾತುರ್ಯದಿಂದ ದಾಖಲೆಗಳಲ್ಲಿ ಬರೆಯುವಾಗ ತಪ್ಪಾಗಿದೆ. ಅವಸರದಲ್ಲಿ ಗಂಡು ಮಗು ಅನ್ನೋದ್ರ ಬದಲು ಹೆಣ್ಣು ಮಗು ಅಂತ ಉಲ್ಲೇಖಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಅವರದ್ದೇ ಮಗು, ನಮ್ಮಲ್ಲಿ ಮಗು ಬದಲಾವಣೆ ಆಗಿಲ್ಲ. ಅಧಿಕ ರಕ್ತದೊತ್ತಡ ಇದ್ದಾಗ ಆ ತಾಯಿ ನಮ್ಮಲ್ಲಿ ದಾಖಲಾಗಿದ್ದಾರೆ. ಪರಿಸ್ಥಿತಿ ಗಂಭೀರ ಇದ್ದಾಗ ನಾವು ಶಸ್ತ್ರಚಿಕಿತ್ಸೆ ಮಾಡಿ ತಾಯಿ, ಮಗುವನ್ನ ಬದುಕಿಸಿದ್ದೇವೆ.ಈ ವೇಳೆ ಮಗುವಿನ ತೂಕ ಮತ್ತು ಆರೋಗ್ಯದಲ್ಲಿ ಸಮಸ್ಯೆ ಇತ್ತು. ಹೀಗಾಗಿ ತುರ್ತು ಸಂದರ್ಭದಲ್ಲಿ ತಕ್ಷಣ ನಾವು ಮಗುವನ್ನು ಎನ್ ಐಸಿಯುಗೆ ದಾಖಲಿಸಿದ್ದೇವೆ.ಮಕ್ಕಳ ತಜ್ಞರು ಮಗುವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ವೇಳೆ ತುರ್ತು ಸಂದರ್ಭದಲ್ಲಿ ದಾಖಲೆ ಬರೆಯುವಾಗ ತಪ್ಪಾಗಿದೆ. ಮಗುವನ್ನು ಹುಟ್ಟಿದ ಮೇಲೆ ಸಂಬಂಧಿಕರಿಗೆ ತೋರಿಸಲು ಕೂಡ ನಮಗೆ ಅವಕಾಶ ಸಿಗಲಿಲ್ಲ. ಆದರೆ ದಾಖಲೆ ಎಂಟ್ರಿ ಸಮಯದಲ್ಲಿ ತಪ್ಪಿ ಹೆಣ್ಣು ಮಗು ಅಂತ ಉಲ್ಲೇಖಿಸಲಾಗಿದೆ. ಈ ಬಗ್ಗೆ ತಪ್ಪು ಮಾಡಿದ ಸಿಬ್ಬಂದಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಕೊಡ್ತೇವೆ. ದಾಖಲೆಯಲ್ಲಿ ತಪ್ಪು ಮಾಡಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು.ಆದರೆ ಅವರಿಗೆ ಹೆರಿಗೆಯಾಗಿದ್ದು ಗಂಡು ಮಗು, ಅದಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ. ನಮ್ಮ ಸಿಬ್ಬಂದಿಯಿಂದ ದಾಖಲೆ ಬರೆಯುವಾಗ ತಪ್ಪಾಗಿದ್ದು ಬಿಟ್ರೆ ಬೇರೇನೂ ಆಗಿಲ್ಲ. ಮಾನವ ಸಹಜ ತಪ್ಪಿನಿಂದ ಈ ಒಂದು ಗೊಂದಲ ಆಗಿದೆ ಅಷ್ಟೇ. ಮಗು ಗಂಡೇ ಎನ್ನುವ ದಾಖಲೆಗಳನ್ನು ನಾವು ಅಗತ್ಯ ಬಿದ್ರೆ ಹಾಜರುಪಡಿಸುತ್ತೇವೆ ಅಂತಾ ಹೇಳಿದ್ದಾರೆ.

ಸದ್ಯ ಈ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ಕೇಳಿದ್ದಾರೆ. ಇನ್ನು ಆಸ್ಪತ್ರೆಯವರೇ ಹೇಳುವ ರೀತಿ ಸಿಬ್ಬಂದ ನಿರ್ಲಕ್ಷ ಅನ್ನೊದು ನಿಜವೇ ಆಗಿದ್ರೆ, ಪ್ರತಿಷ್ಟಿತ ಕೆ.ಎಂ.ಸಿ ಆಸ್ಪತ್ರೆಯಿಂದ ಎಷ್ಟು ಗುಣಮಟ್ಟದ ನಿರ್ವಹಣೆ ಆಗುತ್ತಿದೆ ಅನ್ನೊ ಪ್ರಶ್ನೆಗಳು ಮೂಡುತ್ತವೆ.

Leave A Reply

Your email address will not be published.