‘ಕೋಟಿಗೊಬ್ಬ’ನ ಕಾಣದೆ ರಾಜ್ಯದಲ್ಲೆಡೆ ರೊಚ್ಚಿಗೆದ್ದ ಜನ | ಅಭಿನಯ ಚಕ್ರವರ್ತಿಯ ಸಿನಿಮಾ ರಿಲೀಸ್ ವಿಳಂಬ, ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್

ಎಲ್ಲಡೆ ನಾಡ ಹಬ್ಬ ದಸರಾ ಸಂಭ್ರಮ. ಆಯುಧಪೂಜೆ ದಿನದಂದೇ ಸಿನಿಪ್ರಿಯರಿಗೆ ಸ್ಯಾಂಡಲ್​ವುಡ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ದುನಿಯಾ ವಿಜಯ್ ಅಭಿನಯದ ಸಲಗ ಹಾಗೂ ಕಿಚ್ಚ ಸುದೀಪ್​ ಅವರ ಕೋಟಿಗೊಬ್ಬ 3 ತೆರೆ ಕಂಡಿದೆ.

ಕೊರೋನಾ ಲಾಕ್​ಡೌನ್​ ಸಡಿಲಗೊಂಡ ನಂತರ ಸಿನಿಮಾ ಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಿದ ನಂತರ ತೆರೆ ಕಾಣುತ್ತಿರುವ ಸಿನಿಮಾಗಳು ಇವಾಗಿದೆ. ಅದರಲ್ಲೂ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ ಸಿನಿಮಾ ನೋಡಲು ಅಭಿಮಾನಿಗಳು ಮುಂಜಾನೆಯೇ ಚಿತ್ರಮಂದಿರಗಳ ಬಳಿ ಸೇರಿದ್ದಾರೆ. ಎರಡೂವರೆ ವರ್ಷದಿಂದ ಸಿನಿಮಾಗಾಗಿ ಕಾಯ್ತಿರೋ ಕಿಚ್ಚನ ಅಭಿಮಾನಿಗಳು ಬೆಳಿಗ್ಗೆಯೇ ಮೊದಲ ಪ್ರದರ್ಶನಕ್ಕಾಗಿ ಕಾಯುತ್ತಾ ಕುಳಿತ್ತಿದ್ದರು. ಜೆ.ಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್​ನಲ್ಲಿ ಮೊದಲ ಶೋ ಆರಂಭವಾಗಬೇಕಿತ್ತು. ಆದರೆ ಆರಂಭದಲ್ಲೇ ಕಿಚ್ಚನ ಸಿನಿಮಾಗೆ ವಿಘ್ನ ಎದುರಾಗಿದೆ.

ಹೌದು, ಆಯುಧಪೂಜೆಯಂದು ಬೆಳಗಿನಿಂದಲೇ ಸಿನಿಮಾ ಪ್ರದರ್ಶನ ಇದೆ ಎಂದು ಟಿಕೆಟ್​ಗಳನ್ನು ಮಾರಾಟ ಮಾಡಲಾಗಿತ್ತು. 6 ಗಂಟೆಗೆ ಇದ್ದ ಕೋಟಿಗೊಬ್ಬ 3 ಸಿನಿಮಾದ ಪ್ರದರ್ಶನವನ್ನು 7:30ಕ್ಕೆ ಮುಂದೂಡಲಾಗಿತ್ತು. 7:30 ಆದರೂ ಸಿನಿಮಾ ಪ್ರದರ್ಶನ ಆರಂಭವಾಗಲಿಲ್ಲ. ಇದರಿಂದಾಗಿ ಚಿತ್ರಮಂದಿರಗಳ ಬಳಿ ಸೇರಿದ್ದ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಬೆಳಗಿನ ಪ್ರದರ್ಶನಕ್ಕೆ ಲೈಸನ್ಸ್ ಸಿಗದ ಹಿನ್ನಲೆಯಲ್ಲಿ ಶೋ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಿದ್ದು, ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜಿಸಲಾಗಿತ್ತಂತೆ.

ಬೆಂಗಳೂರಿನ ಜೆ.ಪಿ ನಗರದಲ್ಲಿರೋ ಸಿದ್ದೇಲಿಂಗೇಶ್ವರ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ ನಡೆಯಬೇಕಿತ್ತು. ಆದರೆ, ಈಗ ನಗರದಾದ್ಯಂತ ಆಯೋಜಿಸಲಾಗಿರುವ ಫ್ಯಾನ್ಸ್​ ಶೋ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತುಮಕೂರಿನಲ್ಲಿ ಫ್ಯಾನ್ ಶೋ ರದ್ದು ಮಾಡಿದ್ದಾರೆ. ಗಾಯತ್ರಿ ಥಿಯೇಟರ್​​ನಲ್ಲಿ ಬೆಳಗ್ಗೆ 7.30ಕ್ಕೆ ಕೋಟಿಗೊಬ್ಬ 3 ಫ್ಯಾನ್ಸ್ ಶೋ ಇತ್ತು. ಆದರೆ ಈಗ ಶೋ ಕ್ಯಾನ್ಸಲ್ ಆಗಿದೆ.

ಆದರೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ಮೊದಲ ಶೋ ವಿಳಂಬವಾಗಿದ್ದಕ್ಕೆ ತನ್ನ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಚ್ಚ, ಕೆಲವೊಂದು ವಿಚಾರಗಳಿಂದ ಸಿನಿಮಾದ ಮೊದಲ ಶೋ ವಿಳಂಬವಾಗಿದೆ. ಈ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ನಾನು ವೈಯಕ್ತಿವಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಥಿಯೇಟರ್ ಮಾಲೀಕ ತಪ್ಪಿಲ್ಲ. ಹೀಗಾಗಿ ಅಲ್ಲಿ ಅಹಿತರ ಘಟನೆಗಳನ್ನು ನಡೆಸಬೇಡಿ. ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ.

ಇದು ಅತ್ಯಂತ ವಿಚಿತ್ರ ಸನ್ನಿವೇಶವಾಗಿದೆ. ನಿರ್ಲಕ್ಷ್ಯಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅಭಿಮಾನಿಗಳು ಕೆಟ್ಟ ರೀತಿಯಲ್ಲಿ ವರ್ತಿಸಬಾರದು. ಸಿನಿಮಾ ಬಿಡಗಡೆಯ ಸಮಯವನ್ನು ನಾನೇ ನೀಡುವೆ, ಕೆಲ ಸಮಸ್ಯೆಗಳಿಂದ ರಿಲೀಸ್ ವಿಳಂಬವಾಗಿದೆ. ಚಿತ್ರ ಬಿಡುಗಡೆಗೆ ನಾನು ಕೂಡ ಉತ್ಸುಕನಾಗಿರುವೆ. ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಹೇಳಿದ್ದಾರೆ.

Leave A Reply

Your email address will not be published.