ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್ ಇನ್ನಿಲ್ಲ | ಪದಯಾನ ನಿಲ್ಲಿಸಿದ ಪದ್ಯಾಣರು

ತೆಂಕುತಿಟ್ಟಿನ ಪ್ರಸಿದ್ಧ ಭಾಗವತರುಗಳಲ್ಲೊಬ್ಬರಾಗಿದ್ದ ,ಹನುಮಗಿರಿ ಮೇಳದ ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರು ನಿಧನರಾದರು.

ಇವರು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. ಗಾನಗಂಧರ್ವ ಖ್ಯಾತಿಯ ಶ್ರೀಯುತರು ಸುರತ್ಕಲ್ ಮೇಳದಲ್ಲಿ ಅನೇಕ ವರ್ಷಗಳ ವ್ಯವಸಾಯವನ್ನು ಮಾಡಿದವರು.

ಶ್ರೀ ಪದ್ಯಾಣ ಗಣಪತಿ ಭಟ್ಟರು 1955 ಜನವರಿ 21ರಂದು ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಚಿಕ್ಕ ಮಗು ವಾಗಿದ್ದಾಗ ಬಾಲಪೀಡೆ ಎಂಬ ರೋಗಕ್ಕೆ ತುತ್ತಾಗಿ ಕಾಲನಾಲಯದ ಬಳಿಯವರೆಗೂ ಸಾಗಿ ಮೃತ್ಯುವನ್ನು ಜಯಿಸಿ ಬಂದಿದ್ದರು. ಒಂದು ರೀತಿಯಲ್ಲಿ ಪುನರ್ಜನ್ಮ. ಕಲ್ಮಡ್ಕ ಸರಕಾರೀ ಶಾಲೆಯಲ್ಲಿ 7ನೇ ತರಗತಿ ವರೇಗೆ ಓದಿ ಬಾಳಿಲ ವಿದ್ಯಾಬೋಧಿನೀ ಶಾಲೆಗೆ ಸೇರಿದ್ದರು. ಕಲಿಕೆಯಲ್ಲಿ ಇವರಿಗೆ ಅಷ್ಟು ಆಸಕ್ತಿಯಿರಲಿಲ್ಲ. ಹಿರಿಯರ ಒತ್ತಡಕ್ಕೆ ಮಣಿದು ಶಾಲೆಗೆ ಹೋಗುತ್ತಿದ್ದರು. ಶಾಲೆಯಲ್ಲಿ ಯಕ್ಷಗಾನ ತಂಡವು ಸಿದ್ಧವಾಗಿತ್ತು. ಆಗ ಶ್ರೀನಿವಾಸ ಉಡುಪರು ಮುಖ್ಯೋಪಾಧ್ಯಾಯರಾಗಿದ್ದರು. ಅವರ ಹೇಳಿಕೆಯಂತೆ ಶಾಲಾ ವಾರ್ಷಿಕೋತ್ಸವದ ಪ್ರದರ್ಶನ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತು ಪಾತ್ರವನ್ನು ಮಾಡಿದ್ದರು. ಗಣಪತಿ ಭಟ್ಟರು ಬಾಲಕನಾಗಿದ್ದಾಗ ಬಲು ತುಂಟರಾಗಿದ್ದರು. ಕಲಿಕೆಯಲ್ಲಿ ಹಿಂದೆ. ಯಕ್ಷಗಾನವನ್ನಾದರೂ ಕಲಿಯಲಿ ಎಂದು ಅವರಮ್ಮ ಹೇಳಿದರಂತೆ. ಎಲ್ಲವೂ ದೇವರ ಲೀಲೆ ಅಲ್ಲವೇ?
ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭವಾಗಿತ್ತು. ಯಕ್ಷಗಾನವು ಪದ್ಯಾಣ ಮನೆಯವರಿಗೆ ರಕ್ತಗತವೇ ಆಗಿರುವ ವಿಚಾರ. ಗಣಪತಿ ಭಟ್ಟರ ಅಜ್ಜ ಪುಟ್ಟುನಾರಾಯಣ ಭಟ್ಟರು ಶ್ರೇಷ್ಠ ಭಾಗವತರಾಗಿದ್ದರು. ಹಿಮ್ಮೇಳದ ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರಿಗೂ ಗುರುಸದೃಶರಾಗಿದ್ದವರು. ಅವರಿಗೆ ಅನೇಕ ಪ್ರಸಂಗಗಳು ಕಂಠಪಾಠ. ಗಣಪತಿ ಭಟ್ಟರ ತಂದೆ ತಿರುಮಲೇಶ್ವರ ಭಟ್ಟರೂ ಒಳ್ಳೆಯ ಮದ್ದಳೆಗಾರರಾಗಿದ್ದರು. ಗಣಪತಿ ಭಟ್ಟರು ಧರ್ಮಸ್ಥಳದತ್ತ ಸಾಗಿದರು. ಮಾಂಬಾಡಿ ನಾರಾಯಣ ಭಾಗವತರು, ಕುರಿಯ ವಿಠಲ ಶಾಸ್ತ್ರಿಗಳು, ಪಡ್ರೆ ಚಂದುರವರು ಸಂದರ್ಶಕರಾಗಿದ್ದರು. ಗಣಪತಿ ಭಟ್ಟರು ಸಂದರ್ಶನದಲ್ಲಿ ಅನುತ್ತೀರ್ಣರಾಗಿದ್ದರು. ಪದ್ಯಾಣ ಮನೆಯವನೆಂದು ತಿಳಿದು ಸಂದರ್ಶಕರು ಮತ್ತೆ ಖಾವಂದರಲ್ಲಿ ಹೇಳಿ ತರಬೇತಿಗೆ ಸೇರಿಸಿಕೊಂಡರಂತೆ. ಈ ಘಟನೆಯೇ ಜೀವನದ ತಿರುವು. ಕಲಾಮಾತೆಯು ಶ್ರೇಷ್ಠ ಭಾಗವತನೊಬ್ಬನನ್ನು ಕಳೆದುಕೊಳ್ಳಲು ಸಿದ್ಧಳಿರಲಿಲ್ಲ.

ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಶಿರಂಕಲ್ಲು ನಾರಾಯಣ ಭಟ್, ಬರೆ ಕೃಷ್ಣ ಭಟ್, ಕುಶಾಲಪ್ಪ ಗೌಡ, ಸೀತಾರಾಮ ರೈ (ಹಿಮ್ಮೇಳ), ಡಿ. ಮನೋಹರ ಕುಮಾರ್, ಕೊರಗಪ್ಪ ಮಾಡಾವು, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಬಾಲಕೃಷ್ಣ ಮುಂಡಾಜೆ, ಸದಾಶಿವ ಮುಂಡಾಜೆ, ಅಮೈ ಗೋವಿಂದ ಭಟ್, ನರಸಿಂಹಯ್ಯ, ತಿಮ್ಮಪ್ಪ ಶೆಟ್ಟಿ ಮೊದಲಾದವರು ಗಣಪತಿ ಭಟ್ಟರ ಸಹಪಾಠಿಗಳಾಗಿದ್ದರು. ಚಿಕ್ಕಪ್ಪ ಶಂಕರನಾರಾಯಣ ಭಟ್ಟರಿಂದಾಗಿ ಸಂಗೀತದ ಸ್ವರ ಸಂಚಾರ ರೀತಿಯು ಮನದೊಳಗೆ ಮೊದಲೇ ಮನೆಮಾಡಿತ್ತು. ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯನಾಗಿ ಕಲಿಕೆಯತ್ತ ಗಮನಹರಿಸಿದರು. “ಕುರಿಯ ವಿಠಲ ಶಾಸ್ತ್ರಿಗಳೂ ಬಳಿಯಲ್ಲಿರುತ್ತಿದ್ದರು. ಮಾಂಬಾಡಿ ಗುರುಗಳು ಬಳಸುವ ರಾಗಗಳಿಗೆ ಅತ್ಯಂತ ಆಕರ್ಷಣೆ ಇರುತ್ತಿತ್ತು. ಭಾವನೆಗಳು ಹಾಡಿನೊಳಗೆ ತುಂಬಿ ತುಳುಕುತ್ತಿತ್ತು. ಕರ್ಣಪರ್ವದ ಶಿವ ಶಿವಾ ಸಮರದೊಳು ಕೈಸೋತೆನಲ್ಲ’’ ಪದ್ಯ ತರಗತಿಯಲ್ಲಿ ಹಾಡಿದಾಗ ಕುರಿಯ ವಿಠಲ ಶಾಸ್ತ್ರಿಗಳು ಅನುಭವಿಸುತ್ತಾ ಕುಸಿದಿದ್ದರು! ಕಲಿಕಾ ಕೇಂದ್ರದಲ್ಲಿ ಹಾಡನ್ನು ಕೇಳಿಯೇ ಪರಕಾಯ ಪ್ರವೇಶ ಮಾಡುವ ಕುರಿಯ ವಿಠಲ ಶಾಸ್ತ್ರಿಗಳ ಪಾತ್ರಗಳು ರಂಗದಲ್ಲಿ ಅದ್ಭುತವಾಗಿ ಮೂಡಿಬರುತ್ತದೆ’’ ಎಂದು ಹೇಳಿ ಗಣಪತಿ ಭಟ್ಟರು ಅಂದಿನ ಘಟನೆಯನ್ನು ನೆನಪಿಸುತ್ತಾರೆ. ತರಬೇತಿ ಮುಗಿದು ಮನೆಗೆ ತೆರಳುವಾಗ ಸಂದರ್ಶನದಲ್ಲಿ ಅನುತ್ತೀರ್ಣನಾಗಿದ್ದ ನೀನು ಮನೆಗೆ ಹೋಗಿದ್ದರೆ, ನಿನ್ನಂತಹ ಶಿಷ್ಯನನ್ನು ಕಳೆದುಕೊಳ್ಳುತ್ತಿದ್ದೆ. ನಿನಗೂ ನಷ್ಟವಾಗುತ್ತಿತ್ತು ಎಂದು ಮಾಂಬಾಡಿ ನಾರಾಯಣ ಭಾಗವತರು ಹೇಳಿದ್ದರಂತೆ.

ಧರ್ಮಸ್ಥಳ ಕಲಿಕಾ ಕೇಂದ್ರದಿಂದ ಮರಳಿದ ನಂತರ ಪದ್ಯಾಣ ಗಣಪತಿ ಭಟ್ಟರು ಕಲ್ಮಡ್ಕ ಪರಿಸರದಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಭಾಗವತರಾದ ದಾಸರಬೈಲು ಚನಿಯ ನಾಯ್ಕರ ಒಡನಾಟ ರಂಗದೊಳಗೆ ಪ್ರತ್ಯಕ್ಷ ಕಲಿಕೆಗೆ ವೇದಿಕೆಯಾಯಿತು. 1972-73ರ ಕಾಲ ಚೌಡೇಶ್ವರೀ ಮೇಳದ ಪ್ರದರ್ಶನ, ಪೆರಾಜೆ, ಪೆರ್ನಾಜೆ ಮೊದಲಾದ ಸ್ಥಳಗಳಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸಿದರು. ದಾಸರಬೈಲು ಚನಿಯ ನಾಯ್ಕರು ಪ್ರಸಂಗವನ್ನು ಮುನ್ನಡೆಸುತ್ತಿದ್ದ ಕ್ರಮವನ್ನು ನೋಡಿ ಕಲಿತರು. ಚನಿಯ ನಾಯ್ಕ, ಪ್ರಸಂಗಕರ್ತ ಮಧುಕುಮಾರ್ ಭಾಗವತರ ಹಾಡುಗಳಿಗೆ ಚೆಂಡೆ ಮದ್ದಳೆ ವಾದಕನಾಗಿಯೂ ಭಾಗವಹಿಸಿದರು. ಎರಡನೇ ವರುಷವೇ ಧರ್ಮಸ್ಥಳ ಕೇಂದ್ರಕ್ಕೆ ತೆರಳಿದ್ದರು. ಆಗ ರಾಮಕೃಷ್ಣ ಪದಾರ್ಥಿಗಳು ಗುರುಗಳಾಗಿದ್ದರು. ಮುಂದೆ ಶಂಕರ ಭಟ್ಟ ‘ಟೂರಿಂಗೆ ಕ್ಯಾಂಪು’ ತಿರುಗಾಟ. ಭಾಗವತನಾಗಿ ಕಲಾಸೇವೆ. ಆ ತಂಡದಲ್ಲಿ ಶಿವರಾಮ ಜೋಗಿ, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ ಮೊದಲಾದ ಕಲಾವಿದರಿದ್ದರು. ಮುಂದಿನ ವರುಷ ಸುರತ್ಕಲ್ಲು ಮೇಳಕ್ಕೆ ಸಂಗೀತಗಾರರಾಗಿ ಬರಲು ಶಿವರಾಮ ಜೋಗಿಯವರು ಮತ್ತು ವೇಣೂರು ಸುಂದರ ಆಚಾರ್ಯರು ಆಹ್ವಾನಿಸಿದಾಗ ಗಣಪತಿ ಭಟ್ಟರು ಸಂತೋಷದಿಂದ ಒಪ್ಪಿಕೊಂಡಿದ್ದರು. ಅಗರಿ ಶ್ರೀನಿವಾಸ ರಾಯರು ಮತ್ತು ಅಗರಿ ರಘುರಾಮ ರಾಯರು ಭಾಗವತರಾಗಿದ್ದರು. ಗಣಪತಿ ಭಟ್ಟರು ಸಂಗೀತಗಾರನಾಗಿ ಪೂರ್ವರಂಗವನ್ನು ನಿರ್ವಹಿಸಿ ಪ್ರಸಂಗಕ್ಕೆ ಮದ್ದಳೆಯನ್ನೂ ಬಾರಿಸು ತ್ತಿದ್ದರು. ಮೂರು ತಿಂಗಳ ಬಳಿಕ ಅಗರಿ ರಘುರಾಮ ರಾಯರು ಮುಖ್ಯ ಭಾಗವತರಾಗಿದ್ದರು. ಸಂಗೀತದ ಬಳಿಕ ಪ್ರಸಂಗದಲ್ಲಿ ಪದ್ಯ ಹೇಳುವ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು. ಬೆಳ್ಳಾರೆಯಲ್ಲಿ ಸುರತ್ಕಲ್ಲು ಮೇಳದ ಆಟ ಆಡಿಸಿ ಅಗರಿ ಶ್ರೀನಿವಾಸ ಭಾಗವತರನ್ನು ಸನ್ಮಾನಿಸಿದ್ದರು. ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ, ಸತೀ ಶೀಲವತಿ, ತುಳುನಾಡ ಬಲಿಯೇಂದ್ರೆ ಪದ್ಯಾಣ ಗಣಪತಿ ಭಟ್ಟರಿಗೆ ತಾರಾಮೌಲ್ಯವನ್ನು ತಂದಿತ್ತವು. ಯಶಸ್ವೀ ಯಜಮಾನರಾದ ಕಸ್ತೂರಿ ಪೈಗಳ ಸುರತ್ಕಲ್ಲು ಮೇಳವು ಗಜಮೇಳವಾಗಿ ವಿಜೃಂಭಿಸುತ್ತಿತ್ತು. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತರು, ಜಲವಳ್ಳಿ ಅಲ್ಲದೆ ಅನೇಕ ಹಿರಿಯ ಕಲಾವಿದರ ಒಡನಾಟ ಇವರಿಗೆ ದೊರಕಿತು. ರಾಮದಾಸ ಸಾಮಗರ ಜತೆ ತಿರುಗಾಟವೂ ಇತ್ತು. ಶೇಣಿಯವರು ತಿದ್ದಿ ತೀಡಿದರು. ಅಗರಿ ರಘುರಾಮ ಭಾಗವತರು ಹೆಚ್ಚು ಹೆಚ್ಚು ಹಾಡಲು ಅವಕಾಶವಿತ್ತು ಗಣಪತಿ ಭಟ್ಟರ ಪ್ರತಿಭೆ ಬೆಳಗಲು ಕಾರಣರಾದರು. ಅಗರಿಯವರ ನಿವೃತ್ತಿಯ ನಂತರ ಪ್ರಧಾನ ಭಾಗವತರಾಗಿ ಸುರತ್ಕಲ್ಲು ಮೇಳವನ್ನು ಮುನ್ನಡೆಸಿದರು. ಸತ್ಯಹರಿಶ್ಚಂದ್ರ, ನಳದಮಯಂತಿ ಅಲ್ಲದೆ ಅನೇಕ ಪುರಾಣ ಪ್ರಸಂಗಗಳನ್ನು ಆಡಿಸಿ ತನ್ನ ನಿರ್ದೇಶನಾ ಸಾಮರ್ಥ್ಯವೇನೆಂಬುದನ್ನು ತೋರಿಕೊಟ್ಟರು. ವೇಷಧಾರಿಯ ಸಾಮರ್ಥ್ಯ ಮತ್ತು ಕೊರತೆ ಎರಡನ್ನೂ ಅರಿತು, ಹಾಡಿ, ಸಮಗ್ರ ಪ್ರದರ್ಶನವು ರಂಜಿಸುವಂತೆ ಮಾಡಬಲ್ಲರು. “ಮಹಾನ್ ಗುರು ಮಾಂಬಾಡಿ ನಾರಾಯಣ ಭಾಗವತರು ಹಾಡುತ್ತಿದ್ದ ನಿಧಾನ ಲಯದ ಪದ್ಯಗಳ ಸೌಂದರ್ಯ ಅನುಪಮವಾದುದು. ಹಾಗೆ ಹಾಡಲು ತುಂಬಾ ಇಷ್ಟ. ಆದರೆ ಸಮಯಕ್ಕೆ ಕಲಾವಿದರಿಗೆ ಹೊಂದಿ ಕೊಳ್ಳಲೇಬೇಕಾಗುತ್ತದೆ. ಹಾಡುಗಳನ್ನು ಲಂಬಿಸುವ, ಹೃಸ್ವಗೊಳಿಸುವ ಅನಿವಾರ್ಯತೆ ಇರುತ್ತದೆ. ಮೊದಲೆಲ್ಲಾ ಪೂರ್ವರಂಗದಲ್ಲಿ ಕುಣಿದು ಪಕ್ವನಾದ ಮೇಲೇ ಪ್ರಸಂಗದಲ್ಲಿ ವೇಷ ಮಾಡಲು ಅವಕಾಶ. ಹಿರಿಯ ಕಲಾವಿದರೆಲ್ಲ ಹಾಗೆಯೆ ಬೆಳೆದವರು. ಹಾಗಿದ್ದರೇ ಚಂದ. ಈಗ ಹಾಗಿಲ್ಲ. ಎಲ್ಲರೂ ಕಲಿತೇ ಬಂದಿರುತ್ತಾರೆ! ಎಷ್ಟು ಮಂದಿ ಕಲಾವಿದರಿಗೆ ಪೂರ್ವರಂಗ ಕುಣಿಯಲು ಗೊತ್ತಿದೆ? ಕಟೀಲಿನಂತ ಕ್ಷೇತ್ರಗಳು ಪೂರ್ವರಂಗವನ್ನು ಉಳಿಸಿ ಅದರ ವೈಭವವನ್ನು ಕಣ್ತುಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಸಂತೋಷ. ಕಾಲಮಿತಿ ಈ ಕಾಲಕ್ಕೆ ಅನಿವಾರ್ಯ. ಆದರೂ ಕಷ್ಟ. ಹೊಂದಾಣಿಕೆ ಮಾಡಲೇ ಬೇಕಾಗುತ್ತದೆ. ಕಲಾವಿದರಿಗೆ ಒಂದು ರೀತಿಯಲ್ಲಿ ಅನುಕೂಲ. ವಿಶ್ರಾಂತಿಗೆ ಅವಕಾಶ. ಸಂಪಾದನೆ ದೃಷ್ಟಿಯಿಂದ ಇನ್ನೊಂದು ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳುವುದು ತಪ್ಪಲ್ಲ. ಆದರೆ ಅಲ್ಲಿ ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಒದಗಿಸುವ ಬದ್ಧತೆಯಿರಬೇಕು. ಒತ್ತಡಕ್ಕೊಳಗಾಗದೆ ಆರೋಗ್ಯ ಉಳಿಸಿಕೊಂಡರೆ ಸರಿ. ಆರೋಗ್ಯವಲ್ಲವೇ ನಿಜವಾದ ಸಂಪತ್ತು? ಪರಂಪರೆಯ ಚೌಕಟ್ಟಿನೊಳಗೆ ಬದಲಾವಣೆ ಸ್ವೀಕಾರಾರ್ಹ. ಆದರೆ ಸ್ವಚ್ಛಂದ ಸಲ್ಲದು. ಝಂಪೆ ತಾಳದ ಪದ್ಯ ಉಳಿದ ತಾಳಗಳಂತೆ ಬೇರೆ ತಾಳಗಳಿಗೆ ಬಗ್ಗದು. ಬೇಕಾದಂತೆ ಬಾಗಿಸಿ ಹಾಡುವ ಸಾಹಸವನ್ನು ಮಾಡಬಾರದು. ಕಲಾವಿದರಿಗೆ ರಂಗದೊಳಗೂ ಹೊರಗೂ ಶಿಸ್ತು ಅತ್ಯಗತ್ಯ. ಪ್ರದರ್ಶನಕ್ಕಿಂತ ಮೊದಲೇ ಚೌಕಿಗೆ ಭಾಗವತನು ಸಿದ್ಧನಾಗಬೇಕು. ಸಂಘಟಕರಿಗೂ, ಕಲಾವಿದರಿಗೂ ಹೊರೆಯಾಗಬಾರದು. ಸುರತ್ಕಲ್ಲು ಮೇಳದ ಚೌಕಿಯೆಂದರೆ ಶಿಸ್ತಿನ ಮತ್ತೊಂದು ರೂಪ. ಶೇಣಿಯವರು ಬಂದರೆ ಎಲ್ಲರೂ ಮೌನಕ್ಕೆ ಶರಣಾಗಿ ಕರ್ತವ್ಯವನ್ನು ಮಾಡುತ್ತಿದ್ದರು.

ಹೆದರಿಕೆ ಎಂದಲ್ಲ. ಅವರ ವಿದ್ವತ್ತನ್ನು ಎಲ್ಲರೂ ಗೌರವಿಸುತ್ತಿದ್ದರು. ಇತ್ತೀಚೆಗೆ ಆ ಶಿಸ್ತು ಎಲ್ಲೂ ಕಾಣಿಸುತ್ತಿಲ್ಲ. ಕಲಾವಿದನು ಸ್ವಯಂ ತನ್ನನ್ನು ತಾನು ಶಿಸ್ತಿಗೆ ಒಳಪಡಿಸಿಕೊಳ್ಳಬೇಕು. ಸಂಘಟಕರು, ಪ್ರೇಕ್ಷಕರು ನಮ್ಮನ್ನು ಕಾಯುವಂತೆ ಮಾಡಬಾರದು. ಅದು ಕಲೆಗೆ ಮಾಡುವ ದ್ರೋಹ. ಬದ್ಧತೆಯು ಕಲಾವಿದನಿಗೆ ಅತ್ಯಗತ್ಯ. ಮಹಮ್ಮಾಯಿ ಮೇಳದಲ್ಲಿ ಕಡಬ ನಾರಾಯಣ ಆಚಾರ್ ಚೆಂಡೆಮದ್ದಳೆಯಲ್ಲಿ ನನಗೆ ಸಹಕಲಾವಿದರಾಗಿದ್ದರು. ನನ್ನ ಮನೋಧರ್ಮವನ್ನು ಅರಿತು ನುಡಿಸಿದರು. ದೇಹ ಎರಡಾಗಿದ್ದರೂ ಮನಸ್ಸು ಒಂದಾಗಿತ್ತು. ಕಳೆದುಕೊಂಡೆವು. ಆ ಕಾಲದಲ್ಲಿ ಅವರಿಲ್ಲದ ಹಿಮ್ಮೇಳವನ್ನು ಕಲ್ಪಿಸುವುದು ಒಮ್ಮೆಗೆ ಕಷ್ಟವಾಗಿತ್ತು. ಅವರ ಪುತ್ರ ವಿನಯ ಆಚಾರ್ ಪ್ರತಿಭಾವಂತ.

ಅಂದು ನಾರಾಯಣ ಆಚಾರ್ ಇಂದು ಅವರ ಮಗ ವಿನಯ ಆಚಾರ್. ಇದು ಯೋಗಾಯೋಗ. ಪ್ರಸ್ತುತ ಹೊಸನಗರ ಮೇಳದಲ್ಲಿ ಚಿಕ್ಕಪ್ಪ ಪದ್ಯಾಣ ಶಂಕರನಾರಾಯಣ ಭಟ್ ಅವರು ಜತೆಯಲ್ಲಿದ್ದಾರೆ. ಪೌರಾಣಿಕ ಪ್ರಸಂಗಗಳ ಪರಿಪೂರ್ಣ ಮಾಹಿತಿಯಿದ್ದು ನಡೆಗಳನ್ನು ಅರಿತವರು. ಅವರು ಜತೆಯಲ್ಲಿದ್ದರೆ ಭೀಮಬಲ ಬಂದಂತಾಗುತ್ತದೆ. ತಮ್ಮ ಜಯರಾಮ ಭಟ್ಟರೂ ಮನೆ ಸದಸ್ಯ ಭರವಸೆಯ ಯುವಪ್ರತಿಭೆ ಚೈತನ್ಯಕೃಷ್ಣರೂ ಕಲಾಜೀವನದಲ್ಲಿ ಸಹಕಲಾವಿದರಾಗಿ ಒದಗಿದುದು ಸಂತೋಷ ತಂದಿದೆ’’- ಹೀಗೆ ಶ್ರೀ ಪದ್ಯಾಣ ಗಣಪತಿ ಭಟ್ಟರು ಈ ವರೇಗಿನ ಕಲಾಬದುಕಿನ ಅನಿಸಿಕೆಗಳನ್ನು, ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಮಡದಿ ಶೀಲಾಶಂಕರಿ, ವಿದ್ಯಾವಂತರೂ, ಉದ್ಯೋಗಸ್ಥರೂ ವಿವಾಹಿತರೂ ಆದ ಇಬ್ಬರು ಮಕ್ಕಳು ಸ್ವಸ್ತಿಕ್ ಪದ್ಯಾಣ ಮತ್ತು ಕಾರ್ತಿಕ್ ಪದ್ಯಾಣ.

ಹೀಗೆ ಸಾಂಸಾರಿಕವಾಗಿಯೂ ಅತ್ಯಂತ ತೃಪ್ತರು. 60ನೇ ವಯಸ್ಸು, 2016ರಲ್ಲಿ ಮಂಗಳೂರು ಪುರಭವನದಲ್ಲಿ “ಪದಯಾನ ಅಭಿನಂದನಾ ಸಮಿತಿ’’ ಪುತ್ತೂರು ಇವರು ಕಲಾಭಿಮಾನಿಗಳೆಲ್ಲರೂ ಸೇರಿ ಪದ್ಯಾಣ 60ರ ಸಂಭ್ರಮ ಕಾರ್ಯಕ್ರಮವನ್ನು ಆಚರಿಸಿದ್ದರು. ಶ್ರೀ ನಾ. ಕಾರಂತರ ಸಂಪಾದಕತ್ವದಲ್ಲಿ ‘ಪದಯಾನ’ ಎಂಬ ಕೃತಿಯೂ ಪ್ರಕಟಿಸಲ್ಪಟ್ಟಿತ್ತು. –ರವಿಶಂಕರ್ ವಳಕ್ಕುಂಜ

ಮಿತ್ತೂರು : ಹಿಟ್ ಆ್ಯಂಡ್ ರನ್ | ದ್ವಿಚಕ್ರ ವಾಹನ ಸವಾರ ಸಾವು ,ರಸ್ತೆಯಲ್ಲಿ ರಕ್ತದೋಕುಳಿ

Leave A Reply

Your email address will not be published.