70 ಕೆಜಿ ಬಾಳೆಗೊನೆ ಮೈಮೇಲೆ ಬಿದ್ದು ಅಂಗವಿಕಲನಾದ ಕೆಲಸಗಾರ | ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣಕ್ಕೆ ಮಾಲೀಕ ನೀಡಬೇಕಾದ ಪರಿಹಾರದ ಮೊತ್ತ ಎಷ್ಟು ಗೊತ್ತಾ ??!

ಪ್ರಪಂಚದ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ಘಟನೆಗಳು ಸಂಭವಿಸುತ್ತವೆ. ಕೆಲವು ತುಂಬಾ ಹಾಸ್ಯಾಸ್ಪದವಾಗಿದ್ದರೆ ಇನ್ನು ಕೆಲವು ಘಟನೆಗಳು ನಮ್ಮನ್ನು ಅಚ್ಚರಿಯಲ್ಲಿ ಮುಳುಗೇಳಿಸುತ್ತವೆ. ಕೆಲವು ಘಟನೆಗಳಂತೂ ಹೀಗೂ ಇರುತ್ತವಾ..!? ಎನ್ನುವಂತಿರುತ್ತವೆ. ಇಲ್ಲೊಂದು ಅಂಥದ್ದೇ ಪ್ರಕರಣ ವರದಿಯಾಗಿದೆ.

ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ತಲೆ ಮೇಲೆ ಸುಮಾರು 70 ಕೆಜಿ ತೂಕದ ಬಾಳೆ ಗೊನೆ ಹಾಗೂ ಗಿಡದ ತುದಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ನ್ಯಾಯಾಂಗದ ಮೆಟ್ಟಿಲನ್ನು ಹತ್ತಿತ್ತು. ಕೊನೆಗೆ ನ್ಯಾಯಾಲಯವು ಸಂತ್ರಸ್ತರಿಗೆ ಬರೋಬ್ಬರಿ ಸುಮಾರು ₹ 4 ಕೋಟಿ ಪರಿಹಾರ ನೀಡುವಂತೆ ಆದೇಶಿಸಿದೆ.

ಈ ಪ್ರಕರಣವು 2016 ರಲ್ಲಿ ನಡೆದಿದ್ದು, ಲಾಂಗ್‌ಬಾಟಮ್ ಎಂಬ 30 ವರ್ಷದ ವ್ಯಕ್ತಿ ಕ್ವೀನ್ಸ್‌ಲ್ಯಾಂಡ್‌ನ ಕುಕ್‌ಟೌನ್ ಬಳಿಯ ಎಲ್ & ಆರ್ ಕಾಲಿನ್ಸ್‌ನ ಬಾಳೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಬಾಳೆ ಗಿಡ ಹಾಗೂ ಅದರಲಲ್ಲಿದ್ದ ಬಾನೆ ಗೊನೆ ತುಂಡಾಗಿ ಅವರ ಮೇಲೆ ಬಿದ್ದಿದೆ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡು ಅಂಗವಿಕಲರಾದರು. ಪರಿಣಾಮವಾಗಿ ಕೆಲಸ ಮಾಡಲು ಸಾಧ್ಯವಾಗದೇ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಆಗ ಅವರು ನ್ಯಾಯಾಲಯದಲ್ಲಿ ಸುಮಾರು $ 502,740 ರಷ್ಟು ಮೊತ್ತದ ನಷ್ಟ ಪರಿಹಾರಕ್ಕಾಗಿ ಮೊಕದ್ದಮೆ ಹೂಡಿದ್ದರು.

ಪ್ರಕರಣದಲ್ಲಿ ಲಾಂಗ್ ಬಾಟಮ್ ತೋಟದ ಮಾಲಿಕರನ್ನು ತಪ್ಪಿತಸ್ಥರನ್ನಾಗಿ ಮಾಡಿದ್ದರು. ಬಾಳೆ ಗಿಡವನ್ನು ಕತ್ತರಿಸುವಾಗ ಕತ್ತರಿಸುವ ವ್ಯಕ್ತಿ ಮುಂಜಾಗ್ರತೆ ವಹಿಸಲಿಲ್ಲ ಮತ್ತು ಬೀಳುವ ಮುನ್ನ ಮುನ್ನೆಚ್ಚರಿಕೆ ನೀಡಲಿಲ್ಲ. ತನ್ನದಲ್ಲದ ತಪ್ಪಿಗೆ ಬೆಲೆ ತೆರಬೇಕಾಗಿದೆ ಎಂದು ವಾದಿಸಿದ್ದರು. ತೋಟದ ಮಾಲಿಕರು ಮತ್ತೊಬ್ಬ ಕೆಲಸಗಾರ ತುರಾತುರಿಯಲ್ಲಿ ಗಿಡ ಕತ್ತರಿಸಿದ್ದು ತನ್ನ ತಪ್ಪಲ್ಲ. ಜೊತೆಗೆ ಲಾಂಗ್ ಬಾಟಮ್ ಅವರೇ ಜಾಗರೂಕರಾಗಿರಬೇಕಿತ್ತು ಎಂದು ವಾದಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆದು ಇತ್ತೀಚೆಗೆ ತೀರ್ಪು ನೀಡಲಾಗಿದೆ. ಅದರಲ್ಲಿ ನ್ಯಾಯಾಲಯವು ಮಾಲಿಕರ ನಿರ್ಲಕ್ಷ್ಯವನ್ನು ಪ್ರಶ್ನಿಸಿದೆ. ಜೊತೆಗೆ ನೈಪುಣ್ಯವಿಲ್ಲದ ಕೆಲಸಗಾರ ಏಕಾಏಕಿ ಗಿಡ ಕತ್ತರಿಸಿದ್ದು, ಲಾಂಗ್ ಬಾಟಮ್ ಅವರಿಗೆ ಹಾನಿಯಾಗಲು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದೆ. ಕೆಲಸಗಾರನೋರ್ವನ ಜೀವನ ಪರ್ಯಂತ ಕೆಲಸ ನಷ್ಟವಾಗಿದ್ದಕ್ಕಾಗಿ ಪರಿಹಾರ ನೀಡಲು ಆದೇಶಿಸಿದೆ. ಇದರ ಅನ್ವಯ ಸಂತ್ರಸ್ತ ವ್ಯಕ್ತಿಗೆ $ 502,740 ಪರಿಹಾರವನ್ನು (ಭಾರತೀಯ ಕರೆನ್ಸಿಯಲ್ಲಿ ₹ 4.19 ಕೋಟಿ) ಪಾವತಿಸುವಂತೆ ಆದೇಶಿಸಿದೆ.

ನ್ಯಾಯಾಲಯವು ಮಾಲಿಕರಿಗೆ ಇದರೊಂದಿಗೆ ಮಾಲಿಕರಿಗೆ ಸ್ವಲ್ಪ ಸಮಾಧಾನವನ್ನೂ ನೀಡಿದೆ. ಕಾರಣ, ಲಾಂಗ್ ಬಾಟಮ್ ಅವರ ವಾದ ಸಂಪೂರ್ಣ ಸ್ಪಷ್ಟವಾಗಿಲ್ಲ. ಅದಾಗ್ಯೂ ಅವರು ಪರಿಹಾರ ಪಡೆಯಲು ಅರ್ಹರು. ಆದರೆ ಅವರ ಪಾಲಿನ ನಿರ್ಲಕ್ಷ್ಯವೂ ಇರುವುದರಿಂದ ಶೇ.10ರಷ್ಟು ಪರಿಹಾರವನ್ನು ಕಡಿಮೆ ಮಾಡಲಾಗಿದೆ. ಈ ತೀರ್ಪು ಬಹಳಷ್ಟು ಸುದ್ದಿಯಾಗಿದ್ದು, ಮಾಲಿಕರ ನಿರ್ಲಕ್ಷ್ಯಕ್ಕೆ ಇಷ್ಟು ದೊಡ್ಡ ಮೊತ್ತದ ಪರಿಹಾರ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ.

Leave A Reply

Your email address will not be published.