ಬೆಳ್ತಂಗಡಿ | ವೇಣೂರಿನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ

ಜೊತೆಯಾಗಿ ಕುಡಿದು ಗಲಾಟೆ ಮಾಡಿ, ನಂತರ ವ್ಯಕ್ತಿಯನ್ನು ಮಾವನ ಮಗನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ ಎಂದು ಗುರುತಿಸಲಾಗಿದೆ. ಸುಮಾರು 60 ವರ್ಷ ಪ್ರಾಯದ ಇವರನ್ನು ಕಡಿದು ಕೊಲೆ ಮಾಡಲಾಗಿದೆ.

ಸಂಜೀವ ಶೆಟ್ಟಿ ಇವರು ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಇವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ಇಂದು ಬೆಳಗ್ಗೆ ತಡವಾದರೂ ಸಂಜೀವ ಅವರು ಏಕೆ ಬಂದಿಲ್ಲ ಎಂದು ಅವರ ಮನೆಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕುಡಿದು ಗಲಾಟೆಯಾಗಿ ನಂತರ ಸಂಜೀವ ಶೆಟ್ಟಿಯ ಮಾವನ ಮಗ ಶ್ರೀಶ ಶೆಟ್ಟಿಯೇ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ. ಪರಾರಿಯಾಗಿದ್ದ ಆರೋಪಿಯ ಜಾಡು ಹಿಡಿದ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್ ನೇತೃತ್ವದ ಪೋಲೀಸರ ತಂಡ, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಉಜಿರೆ ಸಮೀಪದ ಸೋಮಂದಡ್ಕ ಅಂಗಡಿಯ ಬಳಿ ವಶಕ್ಕೆ ಪಡೆದಿದ್ದಾರೆ.

ವೇಣೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಉನ್ನತ ಅಧಿಕಾರಿ ಎಎಸ್ ಪಿ ಶಿವಾಂಶು ರಜಪೂತ್, ಬೆರಳಚ್ಚು ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.