ಕಡಬ:ಮನೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಠಾಣೆಯಲ್ಲಿ ಬಂದು ಕೈ ತೊಳೆದ!! ಅಷ್ಟಕ್ಕೂ ಆತ ಅಲ್ಲಿಗೆ ಬಂದಿದ್ದು ಹೇಗೆ?ತಮಾಷೆಗೆ ಕಾರಣವಾದ ಆ ಘಟನೆ ಇಲ್ಲಿದೆ

ಅವಸರವಸರದಲ್ಲಿ ತುರ್ತಾಗಿ ನಡೆಯುವ ಕೆಲ ಘಟನೆಗಳು ಕೆಲವೊಮ್ಮೆ ತಮಾಷೆಗೂ ಕಾರಣವಾಗುತ್ತದೆ. ಉದಾಹರಣೆಗೆ ಕೆಲವೊಂದು ನಾಯಕರು ರೋಷದಲ್ಲಿ ಮಾಡುವ ಭಾಷಣ, ವೇಗವಾಗಿ ಹೇಳಿಬಿಡಬೇಕು ಎನ್ನುವ ಭರದಲ್ಲಿ ಎಡವಟ್ಟು, ಇಂತವುಗಳೆಲ್ಲವೂ ಅನೇಕಬಾರಿ ತಮಾಷೆಗೂ ದಾರಿ ಮಾಡಿಕೊಡುತ್ತವೆ. ಅಂತಹ ಘಟನೆಗಳಿಗೆ ಕಡಬ ಠಾಣೆಯಲ್ಲಿ ಆ ರಾತ್ರಿ ನಡೆದ ಅದೊಂದು ಘಟನೆ ಉದಾಹರಣೆಯಾಗಿದೆ.

ಮಹಿಳೆಯೊಬ್ಬರು ಕಡಬ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರ ಪರಿಣಾಮ,ಪ್ರಕರಣದ ಆರೋಪಿಯನ್ನು ಬಂಧಿಸಲು ರಾತ್ರಿವೇಳೆ ಪೊಲೀಸರು ಆತನಿದ್ದ ಬಾಡಿಗೆ ಮನೆಗೆ ತೆರಳುತ್ತಾರೆ. ಪೊಲೀಸರು ಬಂದಾಗ ಗದರಿಸುವುದು ಸಾಮಾನ್ಯ, ಹೀಗೆ ಆ ಆರೋಪಿಗೆ ಗದರಿಸಿದ ಬೊಬ್ಬೆಗೆ ಅದೇ ಸಂಕೀರ್ಣದಲ್ಲಿದ್ದ ಇನ್ನೊಂದು ಬಾಡಿಗೆ ಮನೆಯ ವ್ಯಕ್ತಿ ಬಂದು ಇಣುಕಿ ನೋಡುತ್ತಾನೆ.

ಈ ಸಂದರ್ಭ ಓರ್ವ ಸಿಬ್ಬಂದಿ, ಇಣುಕಿ ನೋಡುತ್ತಿದ್ದ ಆ ವ್ಯಕ್ತಿಯನ್ನೂ ಜೀಪು ಹತ್ತಲು ತಿಳಿಸಿದ್ದಾರೆ ಎನ್ನಲಾಗಿದ್ದು, ಆ ವ್ಯಕ್ತಿ ಸರಕ್ಕನೆ ಬಂದು ಜೀಪು ಏರಿ ಕುಳಿತಿದ್ದಾನೆ.ಇಬ್ಬರನ್ನೂ ಜೀಪಿನಲ್ಲಿ ಠಾಣೆಗೆ ಕರೆತಂದ ಪೊಲೀಸರಿಗೆ ಅಲ್ಲಿ ನೈಜತೆ ಅರಿವಾಗಿದೆ.

ಪ್ರಕರಣದಲ್ಲಿ ಬಂಧಿಸಬೇಕಾದ ವ್ಯಕ್ತಿಯ ಜೊತೆಗೆ, ಪ್ರಕರಣಕ್ಕೆ ಸಂಬಂಧ ಪಡದ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದೇವೆ ಎಂಬುವುದು ಕೊಂಚ ತಡವಾದರೂ ಗಮನಕ್ಕೆ ಬಂದಿದೆ. ಆ ಬಳಿಕ ಆ ವ್ಯಕ್ತಿಯನ್ನು ತೆರಳಲು ಸೂಚಿಸಿದ್ದು, ಪೊಲೀಸರು ಕರೆಯುವ ವೇಳೆ ಮನೆಯಲ್ಲಿ ಊಟ ಮಾಡುತ್ತಿದ್ದ ಆ ವ್ಯಕ್ತಿ ಅವಸರದಲ್ಲಿ ಕೈ ತೊಳೆಯದೇ ಬಂದಿದ್ದರಿಂದ ಠಾಣೆಯಲ್ಲಿ ಕೈ ತೊಳೆದು ಆ ಬಳಿಕ ನಡೆದುಕೊಂಡು ಮನೆ ತಲುಪಿದ್ದಾನೆ.ಒಟ್ಟಿನಲ್ಲಿ ಊಟದ ತಟ್ಟೆ ಮನೆಯಲ್ಲಿ ತೊಳೆದರೆ, ಊಟ ಮಾಡಿದ ಕೈ ಠಾಣೆಯಲ್ಲಿ ತೊಳೆದ ಘಟನೆ ಎಲ್ಲೆಡೆ ತಮಾಷೆಗೆ ಕಾರಣವಾಗುವ ಜೊತೆಗೆ ಪೊಲೀಸರ ಬೇಜವಾಬ್ದಾರಿ ವರ್ತನೆ ಆಕ್ರೋಶಕ್ಕೂ ಕಾರಣವಾಗಿದೆ.

Leave A Reply

Your email address will not be published.