ಮುಸ್ಲಿಮ್ ಯುವಕನ ಬರ್ಬರ ಹತ್ಯೆ : ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

ಮುಸ್ಲಿಮ್ ಯುವಕನನ್ನು ಬರ್ಬರವಾಗಿ ಹತ್ಯೆ ನಡೆಸಿ ಮೃತದೇಹವನ್ನು ರೈಲ್ವೇ ಹಳಿ ಬಳಿ ಎಸೆದಿರುವ ಘಟನೆಯ ಹಿಂದೆ ಶ್ರೀರಾಮ ಸೇನೆಯ ಕೈವಾಡ ಕೇಳಿಬಂದಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್‌ ಕಟಗಿ ಆಗ್ರಹಿಸಿದ್ದಾರೆ.

ಹಿಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಹಿಂದುತ್ವವಾದಿ ಸಂಘಟನೆ ರಾಮ ಸೇನೆಯ ಕಾರ್ಯಕರ್ತರು ಅರ್ಬಾಝ್ ನಿಗೆ ನಿರಂತರ ಕೊಲೆ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಲಾಗಿದೆ. ರಾಮ ಸೇನೆಯ ಕಾರ್ಯಕರ್ತರು ಸೆಪ್ಟಂಬರ್ 28ರಂದು ಭೇಟಿಯಾಗಲು ಅರ್ಬಾಝ್ ನನ್ನು ಕರೆಸಿಕೊಂಡಿದ್ದರು. ಆದರೆ ಆ ನಂತರ ಒಂದು ಘಂಟೆಯ ಬಳಿಕ ಆತನ ಮೃತದೇಹ ಬೆಳಗಾವಿಯ ಖಾನಾಪುರದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿರುವ ಸುದ್ದಿ ದೊರಕಿದೆ. ಇದು ಆತ್ಮಹತ್ಯೆಯಲ್ಲ, ಹತ್ಯೆ ಎಂದು ಸ್ವತಃ ಕುಟುಂಬಸ್ಥರು ಕೂಡ ಗಂಭೀರ ಆರೋಪ ಮಾಡಿದ್ದಾರೆ. ಕೈಕಾಲುಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಅರ್ಬಾಝ್ ಮೃತದೇಹ ಪತ್ತೆಯಾಗಿರುವುದನ್ನು ಗಮನಿಸಿದರೆ ಇದೊಂದು ವ್ಯವಸ್ಥಿತವಾದ ಕೊಲೆ ಎಂಬ ವಿಚಾರ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಈ ಮಧ್ಯೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆಂದು ಹೇಳಲಾಗುತ್ತಿದ್ದರೂ, ಇನ್ನು ಕೂಡ ಆರೋಪಿಗಳ ವಿರುದ್ಧ ಎಫ್.ಐ.ಆರ್.ದಾಖಲಿಸಲಾಗಿಲ್ಲ. ಅಲ್ಪಸಂಖ್ಯಾತರನ್ನು ಗುರಿಪಡಿಸಿಕೊಂಡು ಸಂಘಪರಿವಾರದ ಸಂಘಟನೆಗಳು ಹಲ್ಲೆ, ಹತ್ಯೆಗಳನ್ನು ನಡೆಸುತ್ತಿರುವ ಘಟನೆಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ಆಡಳಿತ ವರ್ಗವು ಈ ಬಗ್ಗೆ ಕ್ರಮಕೈಗೊಳ್ಳದಿರುವುದು ದುಷ್ಕರ್ಮಿಗಳಿಗೆ ಇಂತಹ ದುಷ್ಕೃತ್ಯಗಳನ್ನು ನಡೆಸಲು ಮತ್ತಷ್ಟು ನೈತಿಕ ಸ್ಥೈರ್ಯವನ್ನು ತುಂಬುತ್ತಿದೆ.

ಪ್ರೇಮ ಸಂಬಂಧದ ಆರೋಪದಲ್ಲಿ ಯುವಕನನ್ನು ಅಮಾನವೀಯವಾಗಿ ಹತ್ಯೆಗೈದಿರುವುದು ಖಂಡನಾರ್ಹ. ಗಂಭೀರ ಆರೋಪ ಎದುರಿಸುತ್ತಿರುವ ರಾಮ ಸೇನೆಯ ಕಾರ್ಯಕರ್ತರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಮತ್ತು ಈ ಘಟನೆಯ ಹಿಂದಿರುವ ಷಡ್ಯಂತ್ರವನ್ನು ಬಯಲಿಗೆಳೆಯಬೇಕು. ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ಧನವನ್ನು ಘೋಷಿಸಬೇಕೆಂದು ನವೀದ್ ಕಟಗಿ ಒತ್ತಾಯಿಸಿದ್ದಾರೆ. ಅದೇ ರೀತಿ ಸಂತ್ರಸ್ತ ಕುಟುಂಬದ ಕಾನೂನು ಹೋರಾಟಕ್ಕೆ ಸಂಘಟನೆ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದೂ ಅವರು ಹೇಳಿದ್ದಾರೆ.

Leave A Reply

Your email address will not be published.