ಆತ ಅಸಾಧಾರಣ ಚಿತ್ರಕಲಾ ಪ್ರತಿಭೆ!! ಆತನ ಕೈಚಳಕದಲ್ಲಿ ಮೂಡಿದ ಚಿತ್ತಾರ ಕಂಡರೆ ಎಂಥವರೂ ಅರೆಕ್ಷಣ ಮೂಕವಿಸ್ಮಿತರಾಗುತ್ತಾರೆ

ಆತ ಕಲಾಕಾರ ತನ್ನ ಅದ್ಭುತ ಕೈಚಳಕದಲ್ಲಿ ಎಂಥವರನ್ನೂ ಮೆಚ್ಚಿಸಬಲ್ಲ ಸಕಲಕಲಾವಲ್ಲಭ.ನಿಮಿಷಾರ್ಧದಲ್ಲೇ ಅತೀ ವೇಗವಾಗಿ ಚಿತ್ರ ಬಿಡಿಸುವ ಆತನ ಚಾಕಚಕ್ಯತೆಗೆ ಅರೆಕ್ಷಣ ನೋಡುಗರೇ ಮೂಕ ವಿಸ್ಮಿತರಾಗುತ್ತಾರೆ.ಮಣ್ಣಿನಲ್ಲಿ ಬಿಡಿಸುವ ಆಕೃತಿಗಳು,ಹಸಿರೆಲೆಗಳಲ್ಲಿ ಬಿಡಿಸುವ ಚಿತ್ರಗಳು,ಗೋಡೆ ಚಿತ್ತಾರಗಳು,ಯಕ್ಷಗಾನ ಜೊತೆಗೆ ಕಲಿಕೆ.ಬಾಲ್ಯದಿಂದಲೇ ಹಲವಾರು ಸನ್ಮಾನ ಪುರಸ್ಕಾರಗಳನ್ನು ಮೂಡಿಗೇರಿಸಿಕೊಂಡ ಆ ಓರ್ವ ಪ್ರತಿಭಾವಂತ ಗ್ರಾಮೀಣ ಪ್ರತಿಭೆಯನ್ನು ನಾವಿಂದು ಪರಿಚಯಿಸುತ್ತಿದ್ದೇವೆ.

ಚಿತ್ರಕಲೆ,ವಿದ್ಯೆ,ಹಾಗೂ ಯಕ್ಷಗಾನದಲ್ಲಿ ಮಿಂಚಿದ ಗ್ರಾಮೀಣ ಭಾಗದ ನಮ್ಮೂರ ಪ್ರತಿಭೆ ದೀಕ್ಷಿತ್ ಪಿ ರೈ ನಮ್ಮ ಇಂದಿನ ಅತಿಥಿ.
ಎಡಮಂಗಲ ಗ್ರಾಮದ ಪೊಯ್ಯೇತ್ತೂರು ವಿಶ್ವನಾಥ ರೈ -ಶೀಲಾವತಿ ರೈ ದಂಪತಿಯ ಪುತ್ರನಾಗಿ ಜನಿಸಿದ ದೀಕ್ಷಿತ್ ಬಾಲ್ಯದಿಂದಲೇ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ಪ್ರಾಥಮಿಕ ಶಿಕ್ಷಣದಿಂದಲೇ ಕಲೆ -ಚಿತ್ರಕಲೆಯಲ್ಲಿ ಮಿಂಚಿದ ಯುವ ಪ್ರತಿಭೆ.

ಚಿತ್ರಕಲಾ ಗುರು ಮೋಹನ್ ಗೌಡ ಅವರಿಂದ ಚಿತ್ರ ರಚನೆ ಹಾಗೂ ಬಣ್ಣ ಹಚ್ಚುವಿಕೆಯನ್ನು ಕಲಿತ ಈತ, ಯಕ್ಷಗಾನದಲ್ಲೂ ಪಾತ್ರ ನಿರ್ವಹಿಸಲು ಸೈ. ಅದರಲ್ಲೂ ಮಹಿಷಾಸುರನ ಪಾತ್ರದಲ್ಲಿ ರಂಗಸ್ಥಳದಲ್ಲಿ ನೋಡುಗರ ಗಮನ ಸೆಳೆದಿರುವುದು ಖುಷಿಯ ಸಂಗತಿ.

ತನ್ನ ಪ್ರಾಥಮಿಕ ಶಿಕ್ಷಣವನ್ನು ಕರಿಂಬಿಲ, ಎಡಮಂಗಲ, ಹಾಗೂ ಎಣ್ಮುರು ಶಾಲೆಯಲ್ಲಿ ಕಲಿತ ಈತ, ಪಿ ಯು ಸಿ ವಿದ್ಯಾಭ್ಯಾಸವನ್ನು ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿ, ಪ್ರಸ್ತುತ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ.

ತನ್ನ ಹವ್ಯಾಸಗಳಾದ ಯಕ್ಷಗಾನ, ಲೀಫ್ ಆರ್ಟ್, ವೇಗದ ಪೇಂಟಿಂಗ್ ಸಹಿತ ಇನ್ನಿತರ ಚಿತ್ರಗಳನ್ನು ಬಿಡಿಸುತ್ತ, ಅದರಲ್ಲಿ ಖುಷಿ ಕಾಣುವ ಅಸಾಧಾರಣ ಪ್ರತಿಭೆಯು,ಕಳೆದ ಬಾರಿ ರಾಜ್ಯ ಮಟ್ಟದಲ್ಲೂ ಭಾಗವಹಿಸಿ ಊರಿಗೆ, ಹೆತ್ತವರಿಗೆ, ವಿದ್ಯಾಸಂಸ್ಥೆಗೆ ಕೀರ್ತಿ ತಂದಿರುವುದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.ಇತ್ತೀಚಿಗೆ ಎಲ್ಲಾ ಕಡೆಗಳಲ್ಲೂ ಹೆಚ್ಚು ಸುದ್ದಿ ಮಾಡಿದ್ದ,ಪದವು ಸರ್ಕಾರಿ ಪ್ರಾಥಮಿಕ ಶಾಲೆಯ ಗೋಡೆ ಚಿತ್ತಾರದಲ್ಲೂ ಈತನ ಕೈಚಳಕ ಇತ್ತು ಎಂಬುವುದು ಖುಷಿಯ ಜೊತೆಗೆ ಹೆಮ್ಮೆಯ ವಿಷಯ.

ಗ್ರಾಮೀಣ ಭಾಗದ ಈ ಪ್ರತಿಭೆ ಮುಂದೊಂದು ದಿನ ರಾಜ್ಯ, ದೇಶ ಕಾಣುವ ಓರ್ವ ಪ್ರತಿಭಾವಂತ ಉತ್ತಮ ಕಲೆಗಾರನಾಗಿ, ಚಿತ್ರ ಕಲಾ ಗುರುವಾಗಿ, ಎಲ್ಲರೂ ಮೆಚ್ಚುವಂತಹ ಪ್ರತಿಭೆಯಾಗಿ ಹೊರಹೊಮ್ಮಲಿ.ಊರಿನ ಹಿರಿಯರ, ಹೆತ್ತವರ, ಗುರುವೃಂದದ ಆಶೀರ್ವಾದ ಸದಾ ಈತನ ಮೇಲಿರಲಿ. ಸಾಧನೆಯಲ್ಲಿ ಗ್ರಾಮಕ್ಕೆ,ಹೆತ್ತವರಿಗೆ ಕೀರ್ತಿ ತರಲಿ ಎಂಬುವುದೇ ನಮ್ಮ ಆಶಯ.

?ದೀಪಕ್ ಹೊಸ್ಮಠ

Leave A Reply

Your email address will not be published.