ಮಂಗಳೂರು: ನಿನ್ನ ಮಗಳೊಂದಿಗೆ ರಸ್ತೆಯಲ್ಲಿ ಸಿಗು, ನಿನಗೂ ಹೊಡೆಯುತ್ತೇವೆ!!| ಖಾಸಗಿ ಮಾಧ್ಯಮ ನಡೆಸಿದ ಕಾರ್ಯಕ್ರಮವೊಂದರಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರೆಗೆ ಸಾರ್ವಜನಿಕವಾಗಿ ಬೆದರಿಕೆ

ಖಾಸಗಿ ಮಾಧ್ಯಮವೊಂದು ನಡೆಸಿದ ಡಿಬೇಟ್ ಕಾರ್ಯಕ್ರಮ ಒಂದಕ್ಕೆ ಕರೆ ಮಾಡಿದ ವ್ಯಕ್ತಿಯೊರ್ವ ಅತಿಥಿಯಾಗಿ ಚರ್ಚೆಯಲ್ಲಿ ಭಾಗವಹಿಸಿದ್ದ ರಾಜ್ಯ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಗೆ ನಡುರಸ್ತೆಯಲ್ಲಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲಿನ ಹಿಂದೂ ಸಂಘಟನೆಯ ಕಾರ್ಯಕರ್ತರ ನೈತಿಕ ಪೊಲೀಸ್ ಗಿರಿಯ ಬಗೆಗೆ ಖಾಸಗಿ ಮಾಧ್ಯಮ ನಡೆಸಿದ ಚರ್ಚಾ ಕೂಟದಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಪ್ರಶ್ನೆ ಕೇಳಲು ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಮುಖಂಡ, ಬಿಜೆಪಿ ವಕ್ತಾರ,ಸಿಎಫ್ ಐ ರಾಜ್ಯ ವಕ್ತಾರ ಸಹಿತ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಕರೆ ಮಾಡಿದ ಹಿಂದೂ ಸಂಘಟನೆಯ ಪರವಾದ ವ್ಯಕ್ತಿ, ಮಂಗಳೂರಿನ ಸಂದೀಪ್ ಎನ್ನುವ ನೇರವಾಗಿ ಲಾವಣ್ಯ ಬಲ್ಲಾಳ್ ರನ್ನು ತರಾಟೆಗೆ ತೆಗೆದುಕೊಂಡು ‘ನೀನು ಎಸಿ ಕಾರ್ ನಲ್ಲಿ ಕುಳಿತು ಮಾತನಾಡುವುದಲ್ಲ,ನಿನ್ನ ಮಗಳನ್ನು ಕರೆದುಕೊಂಡು ನೀನು ರಸ್ತೆಯಲ್ಲಿ ಸಿಗು, ಸಾರ್ವಜನಿಕವಾಗಿ ನೀನು ಬಂದು ಮಾತನಾಡು ನಾವು ನಿನಗೂ ಹೊಡೆಯುತ್ತೇವೆ’ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾನೆ.

ಹೀಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿರುವುದನ್ನು ಕಾರ್ಯಕ್ರಮದಲ್ಲಿದ್ದ ಇತರ ಅತಿಥಿಗಳೂ ಕೂಡಾ ಖಂಡಿಸಿದ್ದು, ಈತನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿಂದೂ ಮುಖಂಡ ಪ್ರದೀಪ್ ಸರಿಪಳ್ಳ, ಯಾರೋ ಕಿಡಿಗೇಡಿಗಳು ಸಂಘಟನೆಯ ಹೆಸರನ್ನು ಹಾಳು ಮಾಡಲು ಈ ರೀತಿ ನಡೆದುಕೊಂಡಿದ್ದಾರೆ, ಈತನ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಯಬೇಕು, ಲಾವಣ್ಯ ರ ಜೊತೆಗೆ ಸ್ಟೇಷನ್ ಗೆ ನಾನು ಕೂಡಾ ಬರುತ್ತೇನೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.