ಸಂಗಾತಿ ಜೊತೆ ಏಕಾಂತ ಕಳೆಯಲು ನಿರ್ಜನ ಪ್ರದೇಶಕ್ಕೆ ತೆರಳುತ್ತೀರಾ ?? ಹಾಗಿದ್ದರೆ ಎಚ್ಚರ!!| ಹೀಗೆ ಏಕಾಂತಕ್ಕೆ ತೆರಳಿದ ಜೋಡಿಯ ಖಾಸಗಿ ವೀಡಿಯೋ ಚಿತ್ರೀಕರಿಸಿ, ಹಣಕ್ಕೆ ಬೇಡಿಕೆ ಇಟ್ಟ ಗ್ಯಾಂಗ್ !! ಬೆದರಿಕೆ ಹಾಕಿದ್ದ ಕೀಚಕರ ಗ್ಯಾಂಗ್ ಪೊಲೀಸ್ ಬಲೆಗೆ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಹಿ ಘಟನೆ ನಡೆದಿದೆ. ಆದರೆ, ಇಲ್ಲಿ ಅದೃಷ್ಟವಶಾತ್ ಆ ರೀತಿಯ ಹೀನ ಕೃತ್ಯ ನಡೆದಿಲ್ಲ.

ಸಂಗಾತಿ ಅಥವಾ ಬಾಯ್ ಫ್ರೆಂಡ್ ಜೊತೆ ಏಕಾಂತ ಕಳೆಯಲು ನಿರ್ಜನ ಪ್ರದೇಶ ಅಥವಾ ಜನ ವಸತಿ ರಹಿತ ಪ್ರದೇಶಗಳು ನಿಮ್ಮ ಆಯ್ಕೆಯಾಗಿದೆಯೇ? ಮೈಸೂರಲ್ಲಿ ನಿರ್ಜನ ಪ್ರದೇಶಕ್ಕೆ ಹೋದ ಯುವತಿ ಕಥೆ ಏನಾಯ್ತು ಗೊತ್ತಿದೆಯಲ್ವಾ? ಪ್ರತಿಯೊಬ್ಬ ಹೆಣ್ಣು ಮಕ್ಕಳು ಹಾಗೂ ಪೋಷಕರು ಓದಲೇಬೇಕಾದ ಸ್ಟೋರಿ ಇದಾಗಿದೆ.

ಮೈಸೂರಲ್ಲಿ ಏಕಾಂತ ಕಳೆಯಲು ಬಾಯ್‌ಫ್ರೆಂಡ್ ಜೊತೆ ಹೋದ ಯುವತಿಯ ಮೇಲೆ ರೇಪ್ ಆಗಿದ್ದು ದೇಶಾದ್ಯಂತ ದೊಡ್ಡ ಸ್ಟೋರಿ ಆಯ್ತು. ಅದೇ ರೀತಿಯಲ್ಲಿ ಬೆಂಗಳೂರು ಹೊರವಲಯದಲ್ಲಿ ಏಕಾಂತಕ್ಕೆ ಹೋದವರ ಮೇಲೂ ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್ ಮೇಲ್ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ.

ಯುವತಿಯೊಬ್ಬಳು ಸಂಬಂಧಿಯ ಜೊತೆ ಖಾಸಗಿ ಲೇಔಟ್‌ಗೆ ತೆರಳಿರ್ತಾರೆ. ಇದೇ ತಿಂಗಳ 25ರಂದು ಬೆಳಗ್ಗೆ 11 ಗಂಟೆಗೆ ಖಾಸಗಿ ಲೇಔಟ್‌ಗೆ ಯುವತಿ ಮತ್ತು ಯುವಕ ತೆರಳಿದ್ದರು. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ಖಾಸಗಿ ಲೇಔಟ್‌ಗೆ ಜೋಡಿ ತೆರಳಿತ್ತು. ಕಾರಿನಲ್ಲಿ ಕೂತು ಸ್ಪ್ಯಾಕ್ಸ್ ಮತ್ತು ತಂಪು ಪಾನೀಯ ಸೇವಿಸುತ್ತಿದ್ದಾಗ ಕೀಚಕರ ಗ್ಯಾಂಗ್ ಎಂಟ್ರಿ ಕೊಟ್ಟಿದೆ.

ಯುವತಿ ಮತ್ತು ಯುವಕನ ಖಾಸಗಿ ಕ್ಷಣಗಳನ್ನು ವೀಡಿಯೋ ಮಾಡಿ, ಕಾರಿನಲ್ಲೇ ಕೂರುವಂತೆ ಗ್ಯಾಂಗ್ ಹೆದರಿಸಿದೆ. ಅಲ್ಲದೆ, ಯುವತಿಯ ಕೈ ಹಿಡಿದು ಎಳೆದಾಡಿದ್ದಾರೆ. ಐದು ಲಕ್ಷ ರೂಪಾಯಿ ಹಣ ಕೊಡಬೇಕು. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ದೂರದಲ್ಲಿ ಜನ ಬರ್ತಿರೋದನ್ನು ನೋಡಿ ಗ್ಯಾಂಗ್ ಎಸ್ಕೆಪ್ ಆಗಿತ್ತು.

ಈ ಆಘಾತದಿಂದ ಚೇತರಿಸಿಕೊಂಡ ಬಳಿಕ ಯುವತಿ ಕೆಲ ದಿನಗಳ ಹಿಂದೆ ಘಟನೆಯ ಬಗ್ಗೆ ದೂರು ನೀಡಿದ್ದಳು. ಅನಿರೀಕ್ಷಿತ ಘಟನೆಯಿಂದ ಯುವತಿ ಹೆದರಿದ್ದಳು. ಆರೋಪಿಗಳ ಮುಖ ನೋಡಿದ್ರೆ ಗುರುತು ಪತ್ತೆ ಹಚ್ಚೋದಾಗಿ ಹೇಳಿದ್ದಳು. ಯುವತಿ ನೀಡಿದ ದೂರಿನ ಮೇಲೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 354 (A) , 354 (D), 354(C), 354(B), 504,149, 384 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೀಚಕರ ಗ್ಯಾಂಗ್‌ಗೆ ಪೊಲೀಸರು ಬಲೆ ಬೀಸಿದ್ದರು.

ಸ್ವಲ್ಪ ತಡ ಮಾಡಿದ್ರೂ ಎಸ್ಕೆಪ್ ಆಗ್ತಿದ್ದ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ. ಹಂದೇನಹಳ್ಳಿ ಗ್ರಾಮದ ಐವರನ್ನು ಖಾಕಿ ಬಲೆಗೆ ಕೆಡವಿದೆ. ಆರೋಪಿಗಳನ್ನು ಎ1 ಸಯ್ಯದ್ ಆಸಿಫ್ ಫಾಷಾ, ಎ2 ನವಾಜ್ ಪಾಷ, ಎ3 ಲಿಯಾಖತ್ ಪಾಷಾ, ಎ4 ಸಲ್ಮಾನ್ ಖಾನ್, ಎ5 ರೂಹಿ ಎಂಬುವವರು ಬಂಧಿತರು. ಆರೋಪಿಯೋರ್ವನ ಮೊಬೈಲ್‌ನಲ್ಲಿದ್ದ ಖಾಸಗಿ ವಿಡಿಯೋವನ್ನು ಪೊಲೀಸರು ನಾಶ ಮಾಡಿದ್ದಾರೆ.

ಯುವತಿಯ ಮುಂದೆ ಆರೋಪಿಗಳ ಪೆರೇಡ್ ಮಾಡಿಸಿ ಆರೋಪಿಗಳನ್ನು ಯುವತಿ ಗುರುತು ಹಿಡಿದಿದ್ದಾಳೆ. ಹಂದೇನಹಳ್ಳಿಯವರಾದ ಎಲ್ಲರೂ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ರು. ಅಂದು ಯುವಕ ಯುವತಿ ಏಕಾಂತದಲ್ಲಿದ್ದಾಗ ವಿಡಿಯೋ ಹಿಡಿದು ಹಣಕ್ಕಾಗಿ ಬೇಡಿಕೆ ಇಟ್ಟಿದ್ರು. ಯುವತಿಯ ಹಣೆಬರಹ ಚೆನ್ನಾಗಿದ್ರಿಂದ ದುರಂತ ಏನೂ ಆಗಿಲ್ಲ. ಸದ್ಯ ಎಲ್ಲ ಆರೋಪಿಗಳನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

ಆದರೆ, ಕಾಮುಕರ ಬಗ್ಗೆ ಪ್ರೇಮಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದೆ ಇಂತಹ ಅನಾಹುತಗಳು ಸಂಭವಿಸಿದರೂ ಅಚ್ಚರಿಪಡಬೇಕಿಲ್ಲ. ಇನ್ನು ಎಲ್ಲಾದರೂ ಏಕಾಂತದ ಸಮಯ ಕಳೆಯಲು ನಿರ್ಜನ ಪ್ರದೇಶಗಳಿಗೆ ಹೋಗುವ ಮುನ್ನ ಒಮ್ಮೆ ಯೋಚನೆ ಮಾಡುವುದು ಒಳ್ಳೆಯದು.

Leave A Reply

Your email address will not be published.