ತಂದೆ-ತಾಯಿ ಜಗಳದಿಂದ ಮಸಣ ಸೇರಿದ 22 ದಿನದ ಹಸುಗೂಸು !! | ಪೋಷಕರ ಮೇಲೆ ಕೊಲೆ ಕೇಸು ದಾಖಲು

ಹೈದರಾಬಾದ್​​: ಪ್ರಪಂಚವನ್ನು ನೋಡಿ ಇನ್ನೇನು ಕಣ್ಣು ತುಂಬಿಸಿಕೊಳ್ಳುತ್ತೇನೆ ಎನ್ನುವ ಸಂದರ್ಭದಲ್ಲೇ ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವಂತಹ ಕರಳುಕಿತ್ತು ಬರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹೌದು. ತನ್ನ ತಂದೆ-ತಾಯಿಯ ಜಗಳದಿಂದ ಪುಟ್ಟ ಪಾಪು ಕಣ್ಣ್ ಮುಚ್ಚುವಂತಹ ಪರಿಸ್ಥಿತಿ ಎದುರಾಗಿ ಹೋಗಿದೆ.ಹೊಡೆಯಲು ಮುಂದಾಗಿದ್ದ ಗಂಡನಿಂದ ಪಾರಾಗಲು ಮಗುವನ್ನು ಗಟ್ಟಿಗೆ ಹಿಡಿದುಕೊಂಡು ಅಟ್ಟಾಡಿದ ತಾಯಿಯ ತೋಳಿನಲ್ಲೇ ಮಗು ಉಸಿರುಗಟ್ಟಿ ಸತ್ತಿರುವುದಾಗಿ ವರದಿಯಾಗಿದೆ.

ತೆಲಂಗಾಣದ ಸೈದಾಬಾದ್​ನ ಪೂಸಲ ಬಸ್ತಿ ನಿವಾಸಿಗಳಾದ ಪಿ.ರಾಜೇಶ್​ ಮತ್ತು ಜಾಹ್ನವಿ ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಮುದ್ದಾದ ಗಂಡುಮಗುವಿನ ಅಪ್ಪ-ಅಮ್ಮ ಆಗಿದ್ದರು. ಶುಕ್ರವಾರದಂದು ಮಗುವಿಗೆ ಹಾಲು ಕುಡಿಸುವ ಬಗ್ಗೆ ವಾಗ್ವಾದವಾದ ಹಿನ್ನೆಲೆಯಲ್ಲಿ ರಾಜೇಶ್​ ಜಾಹ್ನವಿಗೆ ಹೊಡೆಯಲು ಪೈಪ್​ ಕೈಗೆತ್ತಿಕೊಂಡಿದ್ದ.ಆಗ ಮಗುವನ್ನು ತನ್ನ ತೋಳಿನಲ್ಲಿ ಎತ್ತಿಕೊಂಡಿದ್ದ ಆ ತಾಯಿ, ಅದನ್ನು ಗಟ್ಟಿಗೆ ಹಿಡಿದುಕೊಂಡು, ಹೊಡೆತ ತಪ್ಪಿಸಿಕೊಳ್ಳಲು ಮನೆಯೆಲ್ಲಾ ಓಡಾಡಿದಳು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ವಲ್ಪ ಸಮಯದ ನಂತರ ಮಗು ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದದ್ದನ್ನು ಗಮನಿಸಿದ ದಂಪತಿ, ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ನಡೆಸಿದ ವೈದ್ಯರು, ಮಗು ಉಸಿರುಗಟ್ಟಿ ಸತ್ತುಹೋಗಿದೆ ಎಂದು ಘೋಷಿಸಿದರು.ಮಾಹಿತಿ ತಿಳಿದ ಸೈದಾಬಾದ್​ ಪೊಲೀಸರು ದಂಪತಿಯ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.