ಕೃಷಿ ಇಲಾಖೆಯ ಆತ್ಮಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿಆಹ್ವಾನ

ಪುತ್ತೂರು: 2021-22ನೇ ಸಾಲಿನಲ್ಲಿ ಕೃಷಿ ಇಲಾಖೆಯ ಆತ್ಮಯೋಜನೆಯಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಆತ್ಮ ಯೋಜನೆಯ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಹ ರೈತುಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಗಳ ಆಯ್ಕೆಯ ಮಾನದಂಡಗಳಲ್ಲಿನ ಅಂಶಗಳನ್ನು ಸಮಾನಾಂತರವಾಗಿ ಆತ್ಮ ಯೋಜನೆಯಲ್ಲೂ ಶ್ರೇಷ್ಠ ಕೃಷಿಕ ಪ್ರಶಸ್ತಿಗಳನ್ನು ಆಯ್ದು ರೈತರಿಗೆ ಪುರಸ್ಕರಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಒಬ್ಬ ಅರ್ಜಿದಾರರು ತಾನು ನಿರ್ವಹಿಸುವ ಒಂದು ಚಟುವಟಿಕೆಯಡಿ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಬೇಕಾಗಿರುತ್ತದೆ. ಚಟುವಟಿಕೆಗಳ ಹೆಸರು ಈ ಕೆಳಗಿನಂತಿದೆ.

1)ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ, 2)ಸಮಗ್ರ ನೀರು ನಿರ್ವಹಣೆ, 3)ಸಾವಯವ ಕೃಷಿ ಅಭಿವೃದ್ಧಿ, 4)ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, 5)ತೋಟಗಾರಿಕೆ, 6)ಹೈನುಗಾರಿಕೆ, 7) ಕೋಳಿ ಸಾಕಾಣಿಕೆ, 8)ಮೀನುಗಾರಿಕೆ, 9)ರೇಷ್ಮೆ ಬೇಸಾಯ, 10) ಹೈಟೆಕ್‌ ತಂತ್ರಜ್ಞಾನ ಅಳವಡಿಕೆ (ಹಸಿರು ಮನೆ, ಅಭಿವೃದ್ಧಿ, ಕಾಶಿ, ಕೃಷಿ ಯಾಂತ್ರೀಕರಣ ಇತ್ಯಾದಿ), 11) ಕೃಷಿ ಸಂಸ್ಕರಣೆ, 12)ಅರಣ್ಯ, ಕೃಷಿ, ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ ಚಟುವಟಿಕೆ.

ಇವುಗಳಲ್ಲಿ ಯಾವುದಾದರೂ ಒಂದು ಚಟುವಟಿಕೆಗೆ ಮಾತ್ರ ಒಂದು ಅರ್ಜಿಯನ್ನು ಸಲ್ಲಿಸ ಬೇಕಾಗಿರುತ್ತದೆ. ಅರ್ಜಿಯೊಂದಿಗೆ ಸಂಬಂಧಪಟ್ಟ ಚಟುವಟಿಕೆಯ ಜೆರಾಕ್ಸ್ ಪ್ರತಿಗಳನ್ನು, ಫೋಟೋಗ್ರಾಫ್, ಸಿ.ಡಿ.ಗಳನ್ನು, ಖರ್ಚು ವೆಚ್ಚಗಳು, ವರಮಾನ, ಪತ್ರಿಕಾ ಪ್ರಕಟಣೆಗಳ ಮಾಹಿತಿ ಇತ್ಯಾದಿಗಳ ಪ್ರತಿ ಲಗತ್ತಿಸಬೇಕು. ಅಳವಡಿಸಿರುವ ತಾಂತ್ರಿಕತೆ ಪ್ರಸ್ತುತ ಸನ್ನಿವೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಪ್ರೇರಣೆಗೆ ಮತ್ತು ಅಳವಡಿಕೆಗೆ ಸಹಕಾರಿಯಾಗುವಂತಿರಬೇಕು. ಕಳೆದೆರಡು ಸಾಲಿನಲ್ಲಿ ತಾಲೂಕು ಇಲ್ಲವೇ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದವರು ಮುಂದಿನ ಹಂತದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಒಂದು ಬಾರಿ ರಾಜ್ಯಮಟ್ಟದ ಶ್ರೇಷ್ಟ ಕೃಷಿಕ/ ಕೃಷಿ ಪಂಡಿತ ಪ್ರಶಸ್ತಿ ಪಡೆದಿದ್ದಲ್ಲಿ ಪುನಃ ಯಾವುದೇ ತೆರನಾದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಆಸ್ತಕರು ನಿಗದಿತ ಅರ್ಜಿ ನಮೂನೆಯನ್ನು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕಕೇಂದ್ರ (ಪುತ್ತೂರು, ಉಪ್ಪಿನಂಗಡಿ, ಕಡಬ) ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಪುತ್ತೂರಿನಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಲು 16-10-2021 ಕೊನೆಯ ದಿನಾಂಕವಾಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.