ತಾ.ಪಂ.,ಜಿ.ಪಂ.ಕ್ಷೇತ್ರದ ವಿಂಗಡನೆ ಮತ್ತೊಮ್ಮೆ ನಡೆಯಲಿದೆ. ಕೆಲ ತಿಂಗಳ ಹಿಂದೆ ಚುನಾವಣಾ ಆಯೋಗ ಹೊರಡಿಸಿದ ಎಲ್ಲಾ ಆದೇಶಗಳು ರದ್ದಾಗಲಿದೆ.ಜತೆಗೂ ಮೀಸಲಾತಿಯೂ ಬದಲಾಗಲಿದೆ. ಈ ಕುರಿತು ರಾಜ್ಯ ಸರಕಾರ ಮಹತ್ವದ ಹೆಜ್ಜೆಇರಿಸಿದೆ.
ಈ ಸಂಬಂಧ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆಗೆ ಸರಕಾರ ಮುಂದಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2021ನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಈ ಮೂಲಕ ಪ್ರಸ್ತುತ ಇರುವ ತಾಲೂಕು ಮತ್ತು ಜಿ.ಪಂ. ಕ್ಷೇತ್ರ ಪುನರ್ ವಿಂಗಡನೆಯನ್ನು ರದ್ದುಪಡಿಸಿ ಮತ್ತೆ ಪುನರ್ ವಿಂಗಡಣೆ ಮಾಡಲು ನಿರ್ಧರಿಸಲಾಗಿದೆ.
ಮಂಗಳವಾರ ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಸೂದೆಯನ್ನು ಮಂಡಿಸಿದ್ದಾರೆ.
ಚುನಾವಣಾ ಆಯೋಗದ ಮೂಲಕ ತಾ.ಪಂ., ಜಿ.ಪಂ. ಕ್ಷೇತ್ರಗಳ ಪುನರ್ವಿಂಗಡನೆ ಮಾಡಲಾಗುತ್ತದೆ. ಮಸೂದೆ ಜಾರಿಯಾದ ತತ್ಕ್ಷಣ ತಾ.ಪಂ., ಜಿ.ಪಂ. ಕ್ಷೇತ್ರಗಳ ಈ ಹಿಂದಿನ ಎಲ್ಲ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆಗಳು ರದ್ದಾಗಲಿವೆ. ಜತೆಗೆ ತಾ.ಪಂ., ಜಿ.ಪಂ. ಕ್ಷೇತ್ರಗಳ ಮೀಸಲಾತಿಯೂ ರದ್ದಾಗಲಿದೆ. ಚುನಾವಣ ಆಯೋಗದ ಮೂಲಕ ಮತ್ತೊಂದು ಬಾರಿ ಮೀಸಲಾತಿ ಪ್ರಕಟಿಸಲಾಗುತ್ತದೆ.
ಅದರಂತೆ ಜನಗಣತಿ ಆಧಾರದಲ್ಲಿ ಪ್ರತೀ ತಾ.ಪಂ.ಗೆ ಕನಿಷ್ಠ 12,500ರಿಂದ 15 ಸಾವಿರ ಜನಸಂಖ್ಯೆಗೆ ಒಬ್ಬನಂತೆ ಸದಸ್ಯರ ಆಯ್ಕೆ, ಒಂದೊಂದು ತಾ.ಪಂ.ನಲ್ಲಿ ಕನಿಷ್ಠ 11 ಸದಸ್ಯರು ಇರುವಂತೆ ಮಾಡುವುದು, ಸದಸ್ಯರಲ್ಲಿ 3ನೇ 1ರಷ್ಟು ಹಿಂ. ವರ್ಗ ದವರು ಇರುವಂತೆ ನೋಡಿಕೊಳ್ಳುವುದು,ಒಂದು ತಾ.ಪಂ.ನಲ್ಲಿ ಕನಿಷ್ಠ 1 ಸ್ಥಾನ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಡುವುದು,ಜತೆಗೆ ಶೇ.50ರಷ್ಟು ಮಹಿಳಾ ಮೀಸಲಾತಿಗೆ ಅವಕಾಶ ಕಲ್ಪಿಸುವುದು.