ಇಂದಿನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ!!ಭಕ್ತ ಸಮೂಹವನ್ನು ಸ್ವಾಗತಿಸಲು ಸಜ್ಜಾಗಿದೆ ತಿರುಪತಿ ಆಡಳಿತ ಸಮಿತಿ

ಇಷ್ಟು ದಿನ ತಮ್ಮ ಆರಾಧ್ಯದೈವ ತಿಮ್ಮಪ್ಪನನ್ನು ನೋಡಲು ಕಾದು ಕುಳಿತಿದ್ದ ಭಕ್ತರಿಗೆ ಇದೀಗ ಸಂತಸದ ಸುದ್ದಿಯೊಂದು ಬಂದಿದೆ. ಮಹಾಮಾರಿ ಕೊರೋನಾ ಅಬ್ಬರ ತಗ್ಗುತ್ತಿರುವ ಹೊತ್ತಲ್ಲಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ತಿರುಪತಿ ದೇಗುಲದ ಆಡಳಿತ ಮಂಡಳಿ (ಟಿಟಿಡಿ) ಸಿಹಿಸುದ್ದಿ ನೀಡಿದೆ.

ಇಂದಿನಿಂದ ಪ್ರಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಟೋಕನ್ ವಿತರಣೆ ನಡೆಯಲಿದೆ. ಮೊದಲಿಗೆ ಚಿತ್ತೂರು ಜಿಲ್ಲೆಯ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಪ್ರತಿದಿನ 2 ಸಾವಿರ ಟೋಕನ್ ವಿತರಿಸಲಾಗುತ್ತದೆ. ಶ್ರೀನಿವಾಸ ಕಾಂಪ್ಲೆಕ್ಸ್ ನ ಕೌಂಟರ್ ಗಳಲ್ಲಿ ಟೋಕನ್ ಸಿಗಲಿದೆ. ಈ ಮೊದಲು ಸರ್ವದರ್ಶನಕ್ಕೆ 8 ಸಾವಿರ ಟೋಕನ್ ವಿತರಿಸಲಾಗುತ್ತಿತ್ತು.

ಈ ಹಿಂದೆ ತಿರುಪತಿಯಲ್ಲಿ ನೀಡಲಾಗುವ ಲಡ್ಡು ಪ್ರಸಾದದ ವಿಲೇವಾರಿಗಾಗಿ ಪರಿಸರ ಸ್ನೇಹಿ ಬ್ಯಾಗ್‍ಗಳನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ತಯಾರಿಸಿತ್ತು. ಹೊಸ ಬ್ಯಾಗ್‍ಗಳಲ್ಲಿ ಲಡ್ಡು ವಿತರಿಸುವ ಕೌಂಟರ್ ಅನ್ನು ಡಿಆರ್ ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ಹಾಗೂ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಸ್ ಜವಾಹರ್ ರೆಡ್ಡಿ ಉದ್ಘಾಟಿಸಿದ್ದರು.

ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ಲಾಸ್ಟಿಕ್ ಬ್ಯಾಗ್‍ಗಳು, ಪೆಟ್ರೋಕೆಮಿಕಲ್ಸ್‍ನಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಆರೋಗ್ಯಕ್ಕೆ ಹಾನಿಕಾರಕ. ಅಂಥ ಬ್ಯಾಗ್‍ಗಳು ಮಣ್ಣಿನಲ್ಲಿ ಕೊಳೆಯಲು 200ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಆದರೆ ಡಿಆರ್ ಡಿಒ ತಯಾರಿಸಿರುವ ಬ್ಯಾಗ್‍ಗಳು, ಆರೋಗ್ಯಕ್ಕೆ ಹಾನಿಕಾರವಲ್ಲ. ಮಣ್ಣಿನಲ್ಲಿ ಬೇಗನೇ ಕೊಳೆಯುತ್ತವೆ. ಅಲ್ಲದೆ ಇವುಗಳ ತಯಾರಿಕಾ ವೆಚ್ಚವೂ ಕಡಿಮೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದರು.

ಅತಿ ಹೆಚ್ಚು ಭಕ್ತರನ್ನು ಹೊಂದಿರುವ ತಿಮ್ಮಪ್ಪನ ದರ್ಶನಕ್ಕೆ ಇನ್ನು ಜನಸಾಗರವೇ ಹರಿದು ಬರಲಿದೆ. ಭಕ್ತರನ್ನು ಸ್ವಾಗತಿಸಲು ಆಡಳಿತ ಮಂಡಳಿ ಕೂಡ ಸಂಪೂರ್ಣ ಸಜ್ಜಾಗಿದೆ.

Leave A Reply

Your email address will not be published.