ಬೆಳ್ತಂಗಡಿ:ಮೇಯಲು ಬಿಟ್ಟ ಸಾಕೆಮ್ಮೆಯನ್ನು ಗುಂಡು ಹೊಡೆದು ಕೊಂದ ದುಷ್ಕರ್ಮಿಗಳು !! ಎಮ್ಮೆಯ ಮೃತದೇಹ ಚರಂಡಿಯಲ್ಲಿ ಕಂಡು ಆಕ್ರೋಶಿತರಾದ ಬೆಳ್ತಂಗಡಿ ಜನತೆ

ಸಾಕು ಎಮ್ಮೆಯನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಗುಂಡು ಹೊಡೆದು ಸಾಯಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕದ ಅರೆಕ್ಕಲ್ ಎಂಬಲ್ಲಿ ಇಂದು ನಡೆದಿದೆ.

ಮಹಾದೇವ ಭಟ್ ಎಂಬವರ ಮನೆಯಲ್ಲಿ ಸಾಕುತ್ತಿದ್ದ ಎಮ್ಮೆಯಾಗಿದ್ದು, ಪ್ರತಿನಿತ್ಯದಂತೆ ಮೇಯಲು ಹೊರಗೆ ಬಿಟ್ಟ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.

ಮಹಾದೇವ ಭಟ್ ರವರು ಪ್ರತಿ ದಿನವೂ ಸಂಜೆ ತಮ್ಮ ಮನೆಯಲ್ಲಿ ಸಾಕುತ್ತಿದ್ದ ಎಮ್ಮೆಯ ಹಾಲು ಕರೆದು ಮೇಯಲು ಬಿಡುತ್ತಿದ್ದರು. ಹುಲ್ಲನ್ನು ಮೇಯ್ದು ಹೊಟ್ಟೆ ತುಂಬಿದ ನಂತರ ರಾತ್ರಿ ವೇಳೆ ಎಮ್ಮೆ ಹಟ್ಟಿಗೆ ಬರುತ್ತಿತ್ತು.

ಎಂದಿನಂತೆ ಸೆ.6 ರಂದು ಸಂಜೆ ಹಾಲು ಕರೆದು ಮೇಯಲು ಬಿಟ್ಟ ಎಮ್ಮೆ ಮರುದಿನ ಬೆಳಗ್ಗಿನ ಜಾವದವರೆಗೂ ಮರಳಿ ಬಾರದೆ ಇರುವುದನ್ನು ಕಂಡು ಮನೆಯವರು ಎಮ್ಮೆಗಾಗಿ ಹುಡುಕಾಟ ನಡೆಸಿದ್ದ
ವೇಳೆ ಹತ್ಯಡ್ಕ ಗ್ರಾಮದ ಫಲಸ್ತಡ್ಕ ಎಂಬಲ್ಲಿ ರಸ್ತೆ ಬದಿಯಿರುವ ಚರಂಡಿಯಲ್ಲಿ ಎಮ್ಮೆಯ ಮೃತದೇಹ ಪತ್ತೆಯಾಗಿದೆ.

ಈ ವೇಳೆ ಎಮ್ಮೆಯ ಮೃತ ಶರೀರದಲ್ಲಿ ಎರಡು ಗುಂಡುಗಳು ಪತ್ತೆಯಾಗಿದ್ದು, ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಎಮ್ಮೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.

ಈ ಎಮ್ಮೆಗೆ ಯಾರು ಗುಂಡು ಹೊಡೆದಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಕೃತ್ಯ ಉದ್ದೇಶಪೂರ್ವಕವೋ ಅಲ್ಲವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಯಾರೋ ಕಿಡಿಗೇಡಿಗಳು ಪ್ರಾಣಿಗಳನ್ನು
ಬೇಟೆಯಾಡುವ ಸಂದರ್ಭದಲ್ಲಿ ಈ ಗುಂಡು ತಗುಲಿರಬಹುದು ಎಂಬ ಸಂಶಯ ಮೂಡಿದೆ.

Leave A Reply

Your email address will not be published.