ಉಡುಪಿ : ಪ್ರೇಯಸಿಯ ಕೊಂದು ಯುವಕ ಆತ್ಮಹತ್ಯೆ ಪ್ರಕರಣ | ಯುವತಿಯ ಮನೆಯವರು ಹೇಳಿದ್ದೇನು?

ನಿರಂತರ ಕಿರುಕುಳ ಹಾಗೂ ಹುಡುಗ ಹಾಗೂ ಆತನ ಮನೆಯವರು ಮದುವೆಯಾಗಲು ವಿಳಂಬ ಮಾಡಿದ್ದೇ ಸೌಮ್ಯಾ ಭಂಡಾರಿ ಕೊಲೆಗೆ ಕಾರಣ ಎಂದು ಆಕೆಯ ಮನೆಯವರು ಶನಿವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು.

ಸಂದೇಶ್‌ ಕುಲಾಲ್‌ನ ಮನೆಗೆ ಮದುವೆ ವಿಚಾರದ ಬಗ್ಗೆ ಮಾತುಕತೆಗೆಂದು ಹಲವಾರು ಬಾರಿ ತೆರಳಿದಾಗಲೂ ಸೂಕ್ತ ಉತ್ತರ ನೀಡುತ್ತಿರಲಿಲ್ಲ. ಒಂದು ಬಾರಿ ಹೋದಾಗ ಮಾವನಿಗೆ ಮದುವೆಯಾಗಬೇಕು ಅಂದಿದ್ದರು. ಅನಂತರ ಅಣ್ಣನಿಗೆ ಮದುವೆಯಾದ ಬಳಿಕ ಆಗುವುದಾಗಿ ತಿಳಿಸಿದ್ದರು. ಈ ನಡುವೆ ರಿಜಿಸ್ಟ್ರಾರ್‌ ಮದುವೆಯಾದರೂ ಆಗು ಎಂದು ಕೇಳಿಕೊಂಡರೂ ಆತ ಹಾಗೂ ಆತನ ಮನೆಯವರು ಒಪ್ಪಿರಲಿಲ್ಲ. ಇದರಿಂದ ಬೇಸತ್ತಿದ್ದ ಸೌಮ್ಯಾ ಅವರು ಬೇರೆ ಮದುವೆಗೆ ತಯಾರಾಗಿದ್ದರು. ನಿಶ್ಚಿತಾರ್ಥವಾಗಿ ವಿವಾಹ ದಿನಾಂಕವೂ ನಿಗದಿಯಾಗಿತ್ತು. ಈ ನಡುವೆ ಇಷ್ಟೆಲ್ಲ ಘಟನೆ ನಡೆದಿದೆ ಎಂದು ಆಕೆಯ ಮನೆಯವರು ಕಣ್ಣೀರು ಸುರಿಸಿದರು.

ಕೆಲಸಕ್ಕೆ ರಾಜೀನಾಮೆ ನೀಡಿದ್ದಳು
ಸೌಮ್ಯಾ ಭಂಡಾರಿಯು ಕೊಲೆಯಾದ ಸಂದರ್ಭಕ್ಕೂ ಮುನ್ನ ತಾನು ಕರ್ತವ್ಯ ನಿರ್ವಹಿಸುವ ಬ್ಯಾಂಕ್‌ಗೆ ರಾಜೀನಾಮೆ ನೀಡಿ ಬಂದಿದ್ದಳು. ಇದೇ ತಿಂಗಳಿಗೆ ಮದುವೆ ದಿನಾಂಕ ನಿಗದಿಯಾಗಿದ್ದ ಕಾರಣಕ್ಕೆ ರಾಜೀನಾಮೆ ನೀಡಿದ್ದಳು. ಸಂದೇಶ್‌ ಕುಲಾಲ್‌ಗೆ ಕುಡಿತದ ವ್ಯಸನವೂ ಇತ್ತು ಎಂದು ಅವರು ತಿಳಿಸಿದ್ದಾರೆ. ಸೌಮ್ಯಾಳಿಂದ ಕೆಲವೊಂದು ಬಾರಿ ಸಣ್ಣಪುಟ್ಟ ಕೆಲಸಗಳನ್ನೂ ಈತ ಪುಕ್ಸಟ್ಟೆಯಾಗಿ ಮಾಡಿಸಿಕೊಳ್ಳುತ್ತಿದ್ದ. ಈಕೆ ಕೆಲಸ ನಿರ್ವಹಿಸುವ ಬ್ಯಾಂಕ್‌ಗೂ ಬಂದು ಆತ ಕಿರುಕುಳ ನೀಡುತ್ತಿದ್ದ. ಪದೇ ಪದೇ ಫೋನ್‌ ಕರೆಯನ್ನೂ ಮಾಡುತ್ತಿದ್ದ ಈ ಬಗ್ಗೆ ಉಡುಪಿ ಮಹಿಳಾ ಠಾಣೆಗೆ 1 ತಿಂಗಳ ಹಿಂದೆ ದೂರು ನೀಡಿ ಆತನಿಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೌಮ್ಯಾ ಅವರ ತಾಯಿ ಸುಶೀಲಾ, ಅಣ್ಣ ಸುನಿಲ್‌, ಪತ್ನಿ ನಿಕ್ಷಿತಾ, ಪ್ರಮುಖರಾದ ಜಗದೀಶ್‌, ಅಶೋಕ್‌ ಕುಮಾರ್‌ ಅಲೆವೂರು, ಸೋಮಶೇಖರ ಭಂಡಾರಿ ಉಪಸ್ಥಿತರಿದ್ದರು.

Leave A Reply

Your email address will not be published.