ಮಂಜಿನ ಶೃಂಗಾರ ಸೌಂದರ್ಯದ ಪ್ರವಾಸಿಗರ ಸ್ವರ್ಗ ಮುಳ್ಳಯ್ಯನಗಿರಿ

ಚಿಕ್ಕಮಗಳೂರಿನಿಂದ ಸುಮಾರು 20 ಕಿಲೋಮೀಟರ್ ದೂರದ ಕಾಫಿ ತೋಟಗಳ ನಡುವೆ ಕಾಫಿ ಹೂಗಳ ಸುವಾಸನೆಯನ್ನು ಸವಿಯುತ್ತಾ ಸಂಚರಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ತಣ್ಣನೆಯ ಗಾಳಿ ಜೊತೆಗೆ ಮೋಡಗಳ ಮರೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಹೆಸರೇ ಹೇಳುವಂತೆ ಮುಳ್ಳಯ್ಯನಗಿರಿ ಬೆಟ್ಟ ರಾಜ್ಯದಲ್ಲೇ ಅತೀ ಎತ್ತರ ಗಿರಿಶಿಖರ ಎಂಬ ಖ್ಯಾತಿಯನ್ನು ಪಡೆದಿದೆ . ಇದು ಸಮುದ್ರ ಮಟ್ಟದಿಂದ ಸುಮಾರು 6330 ಅಡಿಗಳಷ್ಟು ಎತ್ತರದಲ್ಲಿದೆ ಆದುದರಿಂದ ಚಾರಣಿಗರಿಗೆ ಹೇಳಿಮಾಡಿಸಿದ ಸ್ಥಳವಾಗಿದೆ . ಬೆಟ್ಟದ ಬುಡದಲ್ಲಿ ನಿಂತು ಮೇಲೆ ನೋಡಿದರೆ ಮೋಡಗಳು ಗಿರಿಶಿಖರವನ್ನು ಆವರಿಸಿಕೊಂಡಂತೆ ಅನುಭವವಾಗುತ್ತದೆ. ಒಂದೊಮ್ಮೆ ಬೆಟ್ಟದ ತುದಿ ಕಂಡರೆ ತಕ್ಷಣ ಮಾಯವಾಗುತ್ತದೆ.

ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಜನಜಾತ್ರೆಯಿಂದ ತುಂಬಿರುತ್ತದೆ. ಮಂಜಿನ ಹನಿಗಳ ನಡುವಿನ ಚಿತ್ತಾರ, ಚುಮುಚುಮು ಚಳಿಯಲ್ಲಿ ಮಳೆಯ ಸಿಂಚನ. ಇವೆಲ್ಲವೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಭೇಟಿ ನೀಡಿದರೆ ಮನಸ್ಸು ಶಾಂತವಾಗುವುದರಲ್ಲಿ ಎರಡು ಮಾತಿಲ್ಲ.

ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿಯ ಅನುಭವವೇ ಬೇರೆ ಹಾಗಾಗಿ ಸಾಕಷ್ಟು ಪ್ರವಾಸಿಗರು, ಚಾರಣಿಗರು ಈ ಸಮಯದಲ್ಲಿ ಭೇಟಿ ನೀಡುವುದರಿಂದ ಚಿಕ್ಕಮಗಳೂರು ರಸ್ತೆ ಸದಾ ವಾಹನಗಳಿಂದ ತುಂಬಿರುತ್ತದೆ.

ಇಲ್ಲಿನ ಗಿರಿಶಿಖರವನ್ನು ಹತ್ತುವಾಗ ಸಿಗುವ ಸಂತೋಷ ಬೇರೆಲ್ಲೂ ಸಿಗಲಾರದು ಮುಳ್ಳಯ್ಯನಗಿರಿ ಅನ್ನೋ ಹೆಸರೇ ನಿಮ್ಮನ್ನು ಆಕರ್ಷಿಸುತ್ತದೆ. ಒಂದು ಸಲ ಆ ನೆಲಕ್ಕೆ ಕಾಲಿಟ್ಟರೆ ಆ ಊರು ಬಹುಬೇಗ ನಿಮ್ಮನ್ನು ಬಿಟ್ಟು ಹೋಗದು.

ಕಾರು ಬೈಕ್ ಮಾತ್ರ ಚಲಿಸಬಹುದಾದ ಕಿರಿದಾದ ಮಾರ್ಗ ಇದರಲ್ಲಿ ಸಂಚರಿಸುವಾಗ ನಾವೆಲ್ಲಿ ಹಿಮಾಲಯದ ಪರ್ವತದ ತಪ್ಪಲಿನಲ್ಲಿ ಇದ್ದೇವೇನೋ ಅನ್ನುವ ಅನುಭವದ ಜೊತೆಗೆ ಜೀವಭಯ, ಒಂದು ಬದಿಯಲ್ಲಿ ಬೆಟ್ಟದ ಧರೆ ಇನ್ನೊಂದು ಬದಿಯಲ್ಲಿ ನೂರಾರು ಅಡಿಗಳಷ್ಟು ಆಳವಿರುವ ಕಂದಕ ಇವುಗಳ ನಡುವೆ ಅಪಾಯಕಾರಿ ತಿರುವಿನಿಂದ ಕೂಡಿದ ರಸ್ತೆಗಳು ಇದರಲ್ಲಿ ಸಂಚರಿಸಲು ತಾಳ್ಮೆ ಜೊತೆಗೆ ಸಹನೆ ಅತ್ಯಗತ್ಯ.

ಚಾರಣಿಗರಿಗೆ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಸೂಕ್ತವಾದ ಸಮಯವಾಗಿದೆ. ಮಳೆ ಇರದ ಕಾರಣ ಚಾರಣ ಮಾಡಲು ಉತ್ತಮ ವಾತಾವರಣ ಈ ಸಮಯದಲ್ಲಿ ಸಿಗುತ್ತದೆ.

ಮುಳ್ಳಯ್ಯನಗಿರಿ ತಲುಪುವ ಮೊದಲು ಸಿಗುವ ಸ್ಥಳ ಶೀತಾಳಯ್ಯನ ಗಿರಿ. ಈ ಸ್ಥಳದಲ್ಲಿ ಶೀತಾಳಯ್ಯ ತಪಸ್ಸು ಮಾಡಿದ್ದರಿಂದ ಈ ಗಿರಿಗೆ ಶೀತಾಳಯ್ಯನ ಗಿರಿ ಎಂದು ಹೆಸರು ಬಂದಿದೆ.ಇಲ್ಲಿ ಈಶ್ವರನ ದೇವಾಲಯವೂ ಇದೆ. ಇಲ್ಲಿಂದ ಪೂರ್ವಾಂಬುದಿಯ ಕಡೆ ನಡೆಯುತ್ತ ಹೊರಟರೆ ಸುಮಾರು ಎರಡು ಕಿ.ಮೀ ಗಳ ಅಂತರದಲ್ಲಿ ಕರ್ನಾಟಕದಲ್ಲೇ ಅತಿ ಎತ್ತರದ ಶಿಖರವೆಂದು ಹೆಸರು ಪಡೆದಿರುವ ಮುಳ್ಳಯ್ಯನ ಗಿರಿ ಶಿಖರದ ಕಲಶ ಕಾಣಸಿಗುತ್ತದೆ.

ಇಲ್ಲಿ ಬೆಟ್ಟದ ಅರ್ಧ ಭಾಗದವರೆಗೆ ವಾಹನ ಸಂಚಾರಕ್ಕೆ ಮಾರ್ಗವಿದ್ದು ನಂತರದ 300ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ನಡೆದೇ ಸಾಗಬೇಕು. ಇದರಲ್ಲಿ ಸಿಗುವ ರೋಚಕ ಅನುಭವ ಮಾತಿನಲ್ಲಿ ವರ್ಣಿಸಲು ಅಸಾಧ್ಯ, ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಬಲವಾಗಿ ಬೀಸುವ ಗಾಳಿ ಅವುಗಳನ್ನು ಸೀಳಿಕೊಂಡು ಮುನ್ನುಗುವ ಅನುಭವವೇ ರೋಚಕ, ಭಯದ ಜೊತೆಗೆ ಬೆಟ್ಟದ ತುದಿ ತಲುಪಬೇಕು ಎನ್ನುವ ಛಲ, ಇವೆಲ್ಲವನ್ನು ದಾಟಿ ಬೆಟ್ಟದ ತುದಿಗೆ ತಲುಪಿದಾಗ ಸಿಗುವುದೇ ಶ್ರೀ ಗುರು ಮುಳ್ಳಪ್ಪಸ್ವಾಮಿ ತಪಸ್ಸು ಮಾಡಿರುವ ಗದ್ದುಗೆ ಹಾಗೂ ದೇವಾಲಯ. ದೇವಾಲಯದ ಆವರಣದಲ್ಲಿ ಬಂದು ನಿಂತಾಗಲೂ ಕಿವಿಯಲ್ಲಿ ಗುಯ್ ಎನ್ನುವ ಗಾಳಿಯ ನಿನಾದ ಹೊರಹೊಮ್ಮುತ್ತಿರುತ್ತದೆ. ಅಂದಹಾಗೆ ಈ ನಿಸರ್ಗದ ವಿಸ್ಮಯದ ಅನುಭವ ನಿಮಗೂ ಆಗಿರಬಹುದು ಒಂದು ವೇಳೆ ನೀವು ಈ ಗಿರಿಶಿಖರಕ್ಕೆ ಭೇಟಿ ನೀಡಿಲ್ಲವಾದರೆ ಮಳೆಗಾಲದಲ್ಲಿ ಒಮ್ಮೆ ಬಿಡುವು ಮಾಡಿಕೊಂಡು ಚಿಕ್ಕಮಗಳೂರು ಜಿಲ್ಲೆಯನ್ನು ಸುತ್ತಿ ಮುಳ್ಳಯ್ಯನಗಿರಿಯ ನಿಸರ್ಗದ ಸ್ಪರ್ಶವನ್ನು ಅನುಭವಿಸಿ…

Leave A Reply

Your email address will not be published.