ಪುತ್ತೂರು-ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಬಸ್ ಪುನರಾರಂಭಿಸುವಂತೆ ಕೆಎಸ್‌ಆರ್‌ಟಿಸಿಗೆ ಮನವಿ | ಕೂಡಲೇ ಬಸ್ ಸಂಚಾರ ಆರಂಭಕ್ಕೆ ನಿರ್ದೇಶನ

ಸವಣೂರು: ಪುತ್ತೂರು-ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಈ ಹಿಂದೆ ಸಂಚಾರ ನಡೆಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನರಾರಂಭಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಾಧಿಕಾರಿ ಜಯಕರ ಶೆಟ್ಟಿ ಅವರಿಗೆ ಸವಣೂರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಅಂಗಡಿಮೂಲೆ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಅವರು ಮನವಿ ಸಲ್ಲಿಸಿದರು.

ಈ ಹಿಂದೆ ಸಂಚಾರ ನಡೆಸುತ್ತಿದ್ದ ಬಸ್‌ಗಳನ್ನು ಮತ್ತೆ ಆರಂಭಿಸಬೇಕು.ಈ ಬಸ್‌ಗಳನ್ನು ನಂಬಿಕೊಂಡು ಹಲವರು ತಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು,ಕೋವಿಡ್ ಕಾರಣದಿಂದ ನಿಂತ ಬಸ್ ಸಂಚಾರವನ್ನು ಮತ್ತೆ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಅಲ್ಲದೆ ಇನ್ನು ಮುಂದಿನ ದಿನಗಳಲ್ಲಿ ಶಾಲೆ, ಕಾಲೇಜು ಆರಂಭವಾಗಲಿದ್ದು ಆದ್ದರಿಂದ ಈ ರಸ್ತೆಯಲ್ಲಿ ಬಸ್ ಸಂಚಾರ ಆರಂಭಿಸುವಂತೆ ಮನವಿಯಲ್ಲಿ ವಿನಂತಿಸಲಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಯಕರ ಶೆಟ್ಟಿ ಅವರು ಈ ರಸ್ತೆಯಲ್ಲಿ ಕೂಡಲೇ ಬಸ್ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಡಾವು-ಅಂಕತ್ತಡ್ಕ-ಬಂಬಿಲ-ಸವಣೂರು-ಕಡಬ ಮೂಲಕವೂ ಬಸ್ ಸಂಚಾರ ಆರಂಭಿಸುವಂತೆಯೂ ಮನವಿ ಸಲ್ಲಿಸಲಾಯಿತು. ಈ ಕುರಿತು ಬಸ್ ಲಭ್ಯತೆ ಹಾಗೂ ಇತರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.

Leave A Reply

Your email address will not be published.