ಕೋರಮಂಗಲದಲ್ಲಿ ಐಷಾರಾಮಿ ಆಡಿ ಕಾರಿನಲ್ಲಿದ್ದ 7 ಜನರನ್ನು ಕೊಂದದ್ದು ಒಂದು ನೀರಿನ ಬಾಟಲ್ !! | ನೀರಿನ ಬಾಟಲ್ ಕೊಲೆಗಾರನಾಗಿ ನಿಂತದ್ದು ಹೇಗೆ ಗೊತ್ತಾ ?!

ಮೊನ್ನೆ ಬೆಂಗಳೂರಿನ ಕೋರಮಂಗಲದ ಮಂಗಳಾ ಕಲ್ಯಾಣ ಮಂಟಪದ ಬಳಿ ಮಧ್ಯರಾತ್ರಿ ಒಂದು ವರೆಗೆ ನಡೆದ ಭೀಕರ ಕಾರು ಅಪಘಾತದ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಅಲ್ಲಿ ನಡೆದ 7 ಜನರ ಸಾವಿಗೆ ಒಂದು ನೀರಿನ ಬಾಟಲ್ ಕಾರಣವೇ ಎಂಬ ಬಗ್ಗೆ ಈಗ ಜಿಜ್ಞಾಸೆ ಶುರುವಾಗಿದೆ.

ತಮಿಳುನಾಡಿನ ಹೊಸೂರಿನ ಶಾಸಕರ ಮಗ ಮತ್ತು ಆತನನ್ನು ಮದುವೆಯಾಗಬೇಕಿದ್ದ ಹುಡುಗಿ ಸೇರಿದಂತೆ ಒಟ್ಟು ಏಳು ಜನ ಅವತ್ತು ಬೆಂಗಳೂರು ಪ್ರವೇಶಿಸಿದ್ದರು. ಪ್ರಯಾಣದ ಸಂದರ್ಭದಲ್ಲಿ ಬಾಯಾರಿಕೆಗೆಂದು ತಂದಿರುವ ನೀರಿನ ಬಾಟಲಿ ಏಕಾಏಕಿ ಜನರನ್ನು ಬಲಿತೆಗೆದುಕೊಂಡಿತು ಎಂಬುದು ಸದ್ಯದ ತನಿಖಾಧಿಕಾರಿಗಳ ಅನಿಸಿಕೆ.

ಹೌದು, ಬೆಂಗಳೂರಿನಲ್ಲಿ ನಡೆದ ಭೀಕರ ಅಪಘಾತಗಳ ಪಟ್ಟಿಗೆ ಈ ಅಪಘಾತ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

7 ಮಂದಿ ಕಾರಿನಲ್ಲಿ ಪ್ರಯಾಣ ಮಾಡುವುದಕ್ಕೂ ಮೊದಲು ಎಲ್ಲೆಲ್ಲಿಗೆ ಹೋಗಿದ್ದರು? ಏನು ಮಾಡಿದ್ದರು ಎಂಬ ಮಾಹಿತಿಯನ್ನು ಪೊಲೀಸರ ಒಂದು ತಂಡ ಕಲೆ ಹಾಕುತ್ತಿದ್ದಾರೆ. ಇನ್ನೊಂದು ತಂಡ ಆಡಿ ಕಾರು ಇಷ್ಟೊಂದು ವೇಗವಾಗಿ ಹೋಗಲು ಕಾರಿನಲ್ಲಿ ಯಾವುದಾದರೂ ತಾಂತ್ರಿಕ ದೋಷ ಇತ್ತೇ ಎಂಬುದರ ಬಗ್ಗೆ ತನಿಖೆ ಆರಂಭಿಸಿದೆ.

ಒಂದು ಬಾಟಲ್ ನೀರು ಸಾಯಿಸಿತಾ 7 ಜನರನ್ನು ?!

ಈ ತನಿಖೆಯ ವೇಳೆ ನೀರಿನ ಬಾಟಲ್ ಸಿಕ್ಕಿದೆ. ನೀರಿನ ಬಾಟಲ್ ಕಾರಿನಲ್ಲಿ ಇರುವುದು ಸಾಮಾನ್ಯ. ಸಾಮಾನ್ಯವಾಗಿ ಕಾರಿನ ಇಕ್ಕೆಲದ ಡೋರ್ ಗಳಲ್ಲಿ ಬಾಟಲ್ ಇಡಲಿಕ್ಕೆಂದೆ ಸ್ಲಾಟ್ ಇರುತ್ತದೆ. ಆದರೆ ಇಲ್ಲಿ ನೀರಿನ ಬಾಟಲ್ ಈ ಎಲ್ಲಿ ಸಿಕ್ಕಿದೆ ಎನ್ನುವುದು ಮುಖ್ಯವಾಗುತ್ತದೆ. ಈ ಪ್ರಕರಣದಲ್ಲಿ ಕಾಲಿನ ಭಾಗದಲ್ಲಿರುವ ಬ್ರೇಕ್ ಲಿವರ್ ಕೆಳಗಡೆ ವಾಟರ್ ಬಾಟಲ್ ಬಿದ್ದಿತ್ತು. ಮೊದಲೇ ಓವರ್ ಸ್ಪೀಡ್‍ನಲ್ಲಿದ್ದ ಕಾರನ್ನು, ಬೇಕಾದಾಗ ನಿಯಂತ್ರಣ ಮಾಡಲು ಬಾಟಲಿ ಬ್ರೇಕಿನ ಕೆಳಗೆ ಸಿಕ್ಕಿಕೊಂಡ ಕಾರಣಕ್ಕೆ ಸಾಧ್ಯವಾಗದೇ ಇದ್ದಿರಬಹುದು ಎಂದು ಪೊಲೀಸ್ ಮೂಲಗಳ ಚಿಂತನೆ.

ಒಂದು ವೇಳೆ ನೀರಿನ ಬಾಟಲ್ ಪೂರ್ಣವಾಗಿ ಭರ್ತಿಯಾಗಿದ್ದರೆ ಬ್ರೇಕ್ ಹಾಕಲು ಸಾಧ್ಯವಾಗುವುದೇ ಇಲ್ಲ. ಹೀಗಾಗಿ ಆಡಿ ಕಾರು ನಿಯಂತ್ರಣಕ್ಕೆ ಸಿಗದೇ ಮಿತಿ ಮೀರಿದ ವೇಗದಲ್ಲಿ ಸಂಚರಿಸಿ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆಯಿದೆ. ಒಂದು ಅಂದಾಜಿನ ಪ್ರಕಾರ ಕಾರು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಅವಗಡ ಸಂಭವಿಸುವಾಗ ಕಾರು ಓಡಿಸುತ್ತಿದ್ದ ಶಾಸಕರ ಮಗ ಬ್ರೇಕ್ ಹಾಕಿರುವ ಸಾಧ್ಯತೆ ಇದೆ. ಬಹುಶಹ ಕಾರಿನ ಗ್ರಿವರಿ ನ ಕೆಳಗೆ ನೀರಿನ ಬಾಟಲ್ ಸಿಲುಕಿಕೊಂಡು ಬ್ರೇಕ್ ಬಿದ್ದಿರಲಿಕ್ಕಿಲ್ಲ. ಜೊತೆಗೆ ಬ್ರೇಕ್ ಬೀಳದಿದ್ದಾಗ ಎಕ್ಸಲೇಟರ್ ಇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ನೀರಿನ ಬಾಟಲ್ ಮೊದಲೇ ಕೆಳಗೆ ಬಿದ್ದಿತ್ತಾ ಅಥವಾ ಅಪಘಾತದ ರಭಸಕ್ಕೆ ಬಿದ್ದಿದ್ಯಾ ಎನ್ನುವುದು ಗೊತ್ತಿಲ್ಲ. ಆದರೆ ಬ್ರೇಕ್ ಅಡಿಯಲ್ಲೇ ಬಾಟಲ್ ಸಿಕ್ಕಿದ ಹಿನ್ನೆಲೆಯಲ್ಲಿ, ಬಾಟಲ್ ಅಲ್ಲಿ ಮೊದಲೇ ಬಿದ್ದಿರಬಹುದು ಎನ್ನುವುದು ಪೊಲೀಸರ ಸದ್ಯದ ಅನುಮಾನ. ಹಾಗಂತ ಪೊಲೀಸರು ಸದ್ಯಕ್ಕೆ ಬಲವಾಗಿ ನಂಬಿದ್ದಾರೆ.

ಅಷ್ಟೇ ಅಲ್ಲದೆ ಏಳು ಜನರಲ್ಲಿ ಇದ್ದ ಇಬ್ಬರು ಹುಡುಗಿಯರು ದಾರಿ ಮಧ್ಯೆ ಮದ್ಯ ಖರೀದಿ ಮಾಡಿದ್ದರು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ. 7 ಜನರನ್ನು ಕೊಂದದ್ದು ಮದ್ಯವಾ ಅಥವಾ ನೀರಾ ಅಥವಾ ಎರಡೂ ಸೇರಿ ಮುಗಿಸಿದವಾ ಎಂಬುದು ಪೂರ್ತಿ ತನಿಖೆಯ ನಂತರ ತಿಳಿದು ಬರಲಿದೆ.

Leave A Reply

Your email address will not be published.