ಉಡುಪಿ:ನಡುರಸ್ತೆಯಲ್ಲೇ ಯುವತಿಗೆ ಚೂರಿ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ|ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವು

ಉಡುಪಿ:ಇಲ್ಲಿನ ಸಂತೆಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ಯುವಕನೋರ್ವ ಯುವತಿಗೆ ಚೂರಿ ಇರುದು ತಾನೂ ಚೂರಿಯಲ್ಲಿ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ನಡೆದಿದ್ದು,ಸದ್ಯ ಗಂಭೀರ ಗಾಯಗೊಂಡಿದ್ದ ಯುವತಿ ನಿನ್ನೆ ಸಂಜೆಯೇ ಮೃತಪಟ್ಟಿದ್ದು, ಇತ್ತ ಚಿಂತಾಜನಕ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೂ ಕೊನೆಯುಸಿರೆಳೆದಿದ್ದಾನೆ.ಮೃತ ಯುವತಿಯನ್ನು ಅಂಬಾಗಿಲು ನಿವಾಸಿ ಸೌಮ್ಯ ಶ್ರೀ ಭಂಡಾರಿ ಎಂದು ಗುರುತಿಸಲಾಗಿದ್ದು, ಯುವಕನನ್ನು ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್ ಎಂದು ಗುರುತಿಸಲಾಗಿದೆ.

ಘಟನೆ ವಿವರ :ಮೃತ ಯುವತಿ ಹಾಗೂ ಕೊಲೆ ನಡೆಸಿದ ಯುವಕ ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಆದರೆ ಕಳೆದ ಕೆಲ ದಿನಗಳ ಹಿಂದೆ ಯುವತಿಗೆ ಬೇರೊಂದು ಯುವಕನ ಜೊತೆಯಲ್ಲಿ ಮದುವೆ ನಿಶ್ಚಯವಾಗಿದ್ದು, ವಿಷಯ ತಿಳಿದ ಯುವಕನ ಕೋಪ ನೆತ್ತಿಗೇರಿದೆ. ಅದರಂತೆ ಇಂದು ಸಂದೇಶ್ ಕುಲಾಲ್, ಯುವತಿ ಕೆಲಸ ಮಾಡುತ್ತಿದ್ದ ಸ್ಥಳದಿಂದ ಹಿಂಬಾಲಿಸಿಕೊಂಡು ಬಂದು ಆಶೀರ್ವಾದ ಚಿತ್ರಮಂದಿರದ ಬಳಿಯ ಪೆಟ್ರೋಲ್ ಪಂಪ್ ಬಳಿ ರಸ್ತೆ ಮಧ್ಯೆ ಯುವತಿಯ ಸ್ಕೂಟಿಯನ್ನು ಅಡ್ಡಹಾಕಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ತನಗೆ ಮೋಸ ಮಾಡಿ ಇನ್ನೊಬ್ಬನನ್ನು ವರಿಸಲು ನಾನು ಜೀವಂತವಿರುವ ವರೆಗೂ ಸಾಧ್ಯವಿಲ್ಲ ಎಂದು ತಾನು ತಂದಿದ್ದ ಚೂರಿಯಲ್ಲಿ ಆಕೆಯ ಕುತ್ತಿಗೆ ಸೀಳಿದ್ದಾನೆ.

ಆ ಬಳಿಕ ಅದೇ ಚೂರಿಯಲ್ಲಿ ತಾನೂ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ರಸ್ತೆಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಆ ಕೂಡಲೇ ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸಿದ್ದಾರೆ. ಅದಾಗಲೇ ತೀವ್ರ ರಕ್ತಸ್ರಾವಗೊಂಡಿದ್ದರಿಂದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟರೆ,ಯುವಕನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿತ್ತು. ಆದರೆ ಇಂದು ಮುಂಜಾನೆ ಮೃತಾಪಟ್ಟಿದ್ದಾನೆ.ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಒಟ್ಟಿನಲ್ಲಿ ತಾನು ಪ್ರೀತಿಸಿದ ಯುವತಿ ಇನ್ನೊಬ್ಬನ ಪಾಲಾಗುವುದನ್ನು ಸಹಿಸದ ಆತನ ಆ ಒಂದು ನಿರ್ಧಾರದಿಂದ ಇಬ್ಬರ ಜೀವಕ್ಕೂ ಕುತ್ತು ತಂದಿದೆ.

Leave A Reply

Your email address will not be published.