ಕಡಬ ಅಂಬೇಡ್ಕರ್ ಭವನದ ಎದುರು ತುಂಬಿದ ಕೆಸರು | ಸಚಿವರು ಆಗಮಿಸಿದರೂ ಕ್ರಮಕೈಗೊಳ್ಳದ ಬೇಜವಾಬ್ದಾರಿ ಅಧಿಕಾರಿಗಳು

ಕಡಬ : ಕಡಬ ಅಂಬೇಡ್ಕರ್ ಭವನದ ಎದುರು ಕೆಸರು ತುಂಬಿ ವಾಹನಗಳು ಸಂಚರಿಸಲು ಪರದಾಡುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ಕಡಬದ ಬೇಜವಾಬ್ದಾರಿ ಅಧಿಕಾರಿಗಳು ಮಂಗಳವಾರ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರು ಆಗಮಿಸುವಾಗಲೂ ದುರಸ್ತಿ ಕಾರ್ಯ ಕೈಗೊಳ್ಳದೆ ಸಚಿವರನ್ನು ಅವಮಾನಿಸಿದ್ದಾರೆ.

ತಿಂಗಳ ಹಿಂದೆ ಸಚಿವರು ಕೆಡಿಪಿ ಸಭೆ ಆಗಮಿಸಿದ್ದ ಸಂದರ್ಭದಲ್ಲಿ ಕೂಡಾ ಕೆಸರು ತುಂಬಿ ವಾಹನಗಳ, ಸಾರ್ವಜನಿಕರ ಪರದಾಟ ನಡೆದಿತ್ತು. ಮಂಗಳವಾರ ಕೂಡಾ ಅದೇ ರಾಗ ಮುಂದುವರಿದಿದೆ. ಸಚಿವರು ಸಜ್ಜನರು, ಕೆಸರು ಇದ್ದರು ತನ್ನ ಪಂಚೆಯನ್ನು ಎತ್ತಿ ಅದರಲ್ಲೆ ದಾಟಿ ಹೋಗುವುದಕ್ಕೆ ಅವರಿಗೆ ಸಂಕೋಚವಿಲ್ಲ, ಎನ್ನುವಂತಹ ಅವರ ಸರಳತೆಯನ್ನೇ ಅಪಹಾಸ್ಯ ಮಾಡಿದಂತಿರುವ ಅಧಿಕಾರಿಗಳ ನಡೆ ಸಾರ್ವಜನಿಕ ವಲಯದಲ್ಲಿ ಅಕ್ರೋಶಕ್ಕೆ ಕಾರಣವಾಗಿದೆ. ಕಡಬ ಪೇಟೆಯ ದಕ್ಷಿಣ ಭಾಗದಲ್ಲಿರುವ ಅಂಬೇಡ್ಕರ್ ಭವನ ಅಷ್ಟೇನು ಉತ್ತಮ ಸ್ಥಿತಿಯಲ್ಲಿಲ್ಲ. ಅದಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಐನೂರು ಮೀಟರ್‌ನಷ್ಟು ಇರುವ ರಸ್ತೆಯ ಸ್ಥಿತಿ ಅಯೋಮಯವಾಗಿದೆ. ಅಂಬೇಡ್ಕರ್ ಭವನದ ಎದುರು ನೇಜಿ ಣಾಟಿ ಮಾಡಬಹುದಾದಷ್ಟು ಕೆಸರು ತುಂಬಿ ತುಳುಕುತ್ತಿದ್ದರೂ ಅದರಲ್ಲೇ ವಾಹನ ಚಲಾಯಿಸಿ ವಾಹನಗಳು ಹೂತು ಅವುಗಳನ್ನು ದೂಡುವ ದೃಶ್ಯ ಸಾಮಾನ್ಯವಾಗಿತ್ತು. ಮಂಗಳವಾರ ಇಲ್ಲಿ ನಡೆದ ಅಕ್ರಮ ಸಕ್ರಮದಡಿಯಲ್ಲಿ ಮಂಜೂರಾದ ಹಕ್ಕು ಪತ್ರ ವಿತರಣಾ ಸಮಾರಂಭಕ್ಕೆ ಆಗಮಿಸಿದ ಅಧಿಕಾರಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು, ಅಷ್ಟೇ ಏಕೆ ಘನತೆವೆತ್ತ ಸಚಿವರ ವಾಹನಗಳು ಹೂತು ಹೊರಲಾಡಿ ಕೆಸರಲ್ಲಿ ಮಿಂದೆದ್ದು ಹೋಗಿದ್ದವು.

ಅಂಬೇಡ್ಕರ್ ಭವನವನ್ನು ಹೈಸ್ಕೂಲ್ ರಸ್ತೆಯಿಂದ ಸಂಪರ್ಕಿಸುವ ಹತ್ತಿರದ ಮಸೀದಿ ಬಳಿಯಿಂದ ಹೋಗುವ ಐವತ್ತು ಮೀಟಟರ್ ಉದ್ದದ ಕಿರು ರಸ್ತೆ ಸೇರುವಲ್ಲಿ ಕೂಡಾ ಕೆಸರಿನ ಗುಂಡಿಯೇ ನಿರ್ಮಾಣವಾಗಿದೆ. ಇಷ್ಟೊಂದು ಅವ್ಯವಸ್ಥೆ ಅದ್ವಾನಗಳಿದ್ದರೂ ಸಂಬಂಧಪಟ್ಟವರು ಮಾತ್ರ, ನಮಗೂ ಅದಕ್ಕೂ ಯಾವುದೇ ಸಂಬAಧ ಇಲ್ಲ ಎನ್ನುವ ರೀತಿಯಲ್ಲಿ ಇದ್ದಾರೆ. ತಾನು ಶಾಸಕನಾಗಿರುವಂದಿನಿAದಲೂ ಅಧಿಕಾರಿಗಳ ಬಗ್ಗೆ ಮೃದು ಧೋರಣೆ ಹೊಂದಿರುವ ಸಚಿವ ಅಂಗಾರ ತಾನು ಸಚಿವನಾದರೂ ಅದೇ ಸರಳತೆ ಸಜ್ಜಣಿಕೆಯನ್ನು ಹೊಂದಿದ್ದಾರೆ. ಇದನ್ನೇ ದುರುಪಯೊಗಪಡಿಸಿಕೊಂಡಿರುವ ಅಧಿಕಾರಿಗಳು ಸಚಿವರ ಆಗಮಿಸುತ್ತಾರೆ ಎಂದು ತಿಳಿದಿದ್ದರೂ ಅದರ ದುರಸ್ತಿ ಕಾರ್ಯ ಮಾಡಲಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

ನಮ್ಮ ಸಚಿವರು ಐಶಾರಾಮಿ ವ್ಯವಸ್ಥೆಯನ್ನು ಬಯಸುವವರಲ್ಲ, ಅವರ ಸರಳತೆಯನ್ನೇ ಬಂಡವಾಳವನ್ನಾಗಿಸಕೊAಡಿರುವ ಕಡಬದ ಅಧಿಕಾರಿ ವರ್ಗ ಹೇಗಿದ್ದರೂ ಸಚಿವರು ಏನೂ ಹೇಳುವುದಿಲ್ಲ ಎಂದು ಸಚಿವರ ಪದವಿಗೂ ಗೌರವ ನೀಡದೆ, ಕನಿಷ್ಟ ಕೆಸರು ಇದ್ದಲ್ಲಿಗೆ ಚರಲ್ ಮರಳು ಹಾಕಿಸುವ ಕಾರ್ಯ ಕೂಡಾ ಮಾಡಿಲ್ಲ ಎಂದು ಮಂಗಳವಾರ ಅಂಬೇಡ್ಕರ್ ಭವನಕ್ಕೆ ಆಗಮಿಸಿದ್ದ ಸಾರ್ವಜನಿಕರು ಗೊಣಗುಡುತ್ತಿದ್ದರು. ಇನ್ನೊಂದು ಬಾರಿ ಸಚಿವರ ಆಗಮಿಸುವ ಮುನ್ನ ಅಧಿಕಾರಿಗಳು ಕೆಸರುಮಯವಾಗಿರುವ ಅಂಬೇಡ್ಕರ್ ಭವದ ಎದುರಿನ ಸ್ಥಳವನ್ನು ಸ್ವಚ್ಚವಾಗಿಡಲು ಕ್ರಮ, ಕೈಗೊಂಡು ಸಚಿವರಿಗೆ ಗೌರವ ನೀಡುವ ಕಾರ್ಯ ಮಾಡಲಿ ಎಂದು ಸಚಿವರ ಅಭಿಮಾನಿಗಳು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.

Leave A Reply

Your email address will not be published.