ಪುತ್ತೂರು : ಚಿನ್ನ ತೊಳೆದು ಕೊಡುವುದಾಗಿ ಮಹಿಳೆಯ ಚಿನ್ನಾಭರಣ ಎಗರಿಸಿದ ಹಳದಿ ಪೌಡರ್ ಗ್ಯಾಂಗ್

ಪುತ್ತೂರು: ಚಿನ್ನಾಭರಣಕ್ಕೆ ಹೊಳಪು ನೀಡುವುದಾಗಿ ಹೇಳಿ ವಂಚಿಸುತ್ತಿರುವ `ಹಳದಿ ಪೌಡರ್ ಗ್ಯಾಂಗ್‌’ನಿಂದಾದ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು 2ಪವನ್‌ ತನ್ನ ಮಾಂಗಲ್ಯ ಸರ ಸೇರಿದಂತೆ ಸುಮಾರು ಐದೂವರೆ ಪವನ್ ಚಿನ್ನಾಭರಣವನ್ನು ಕಳೆದುಕೊಂಡಿರುವ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ಠಾಣೆಯ ಮೆಟ್ಟಿಲೇರಿದ್ದಾರೆ.

ನೆಟ್ಟಣಿಗೆಮುನ್ನೂರು ಗ್ರಾ.ಪಂ ಸದಸ್ಯೆಯಾಗಿರುವ ಪೆರ್ನಾಜೆ ನಿವಾಸಿ ವಂಚನೆಗೆ ಒಳಗಾದವರು.ಚಿನ್ನಾಭರಣವನ್ನು ಹೊಳೆಯುವಂತೆ ಪಾಲಿಶ್ ಮಾಡಿ ಕೊಡುವುದಾಗಿ ನಂಬಿಸಿ ಪಡೆದುಕೊಂಡ ಆರೋಪಿ ಮಾಂಗಲ್ಯ ಸರ ಸೇರಿದಂತೆ ಸುಮಾರು ಐದೂವರೆ ಪವನ್ ಚಿನ್ನಾಭರಣವನ್ನು ಇಂದಿರಾ ಅವರಿಂದ ಪಡೆದುಕೊಂಡು ಸ್ವಲ್ಪವೂ ಅನುಮಾನ ಬಾರದಂತೆ ಆಕೆಯ ಕಣ್ಣೆದುರೇ ವಂಚಿಸಿ ಪರಾರಿಯಾಗಿದ್ದಾನೆ.

ಮನೆಯ ಶೋಕೇಸ್, ಟಿವಿ, ಬೆಳ್ಳಿ, ಬಂಗಾರದ ಆಭರಣ ಸೇರಿದಂತೆ ಹಲವು ವಸ್ತುಗಳನ್ನು ಸ್ವಚ್ಛಗೊಳಿಸಿ ಹೊಳಪು ನೀಡುವ ಪೌಡರ್ ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡು ಇಂದಿರಾ ಅವರ ಮನೆಗೆ ಬಂದ ಅಪರಿಚಿತ ಯುವಕ, ಬೆಳ್ಳಿ, ಚಿನ್ನಾಭರಣ ಹೊಳೆಯುವಂತೆ ಈಗಲೇ ಪಾಲಿಶ್ ಮಾಡಿಕೊಡುವ ಮೂಲಕ ಮಾದರಿ ತೊರಿಸುವುದಾಗಿ ತಿಳಿಸಿದ್ದ.ಇದನ್ನು ನಂಬಿದ ಇಂದಿರಾ ಅವರು ತಮ್ಮ ಬಳಿಯಿದ್ದ ಕಾಲಿನ ಗೆಜ್ಜೆ ತೆಗೆದುಕೊಟ್ಟಿದ್ದರು.ಅದನ್ನು ಆ ವ್ಯಕ್ತಿ ಹಳದಿ ಪೌಡರ್ ಬಳಸಿ ಫಳಫಳ ಹೊಳೆಯುವಂತೆ ಮಾಡಿಕೊಟ್ಟಿದ್ದ.ಆ ಬಳಿಕ, ಚಿನ್ನದ ಆಭರಣಗಳಿದ್ದರೆ ಅವುಗಳನ್ನೂ ಹೊಳೆಯುವಂತೆ ಮಾಡಿಕೊಡುತ್ತೇನೆಂದು ವಂಚಕ ನಂಬಿಸಿದ್ದ.ಈ ವೇಳೆ ಇಂದಿರಾ ಅವರು ತಮ್ಮ ಮಾಂಗಲ್ಯ ಸರ, ಚೈನು, ಎರಡು ಬಲೆಗಳನ್ನು ಕಳಚಿ ವಂಚಕನ ಕೈಗಿಟ್ಟರು.ಈ ವೇಳೆ ಚಿನ್ನಾಭರಣಗಳ ಮೇಲೆ ಹಳದಿ ಪೌಡರ್ ಸುರಿದು, ಲಿಕ್ವಿಡ್ ಮತ್ತು ಜೆಲ್ ಹಾಕಿ ಬ್ರೆಷ್ ಬಳಸಿ ತೊಳೆಯುವಂತೆ ನಟಿಸಿ ಬಳಿಕ ಬ್ಯಾಟರಿ ಚಾಲಿತ ಬೆಂಕಿ ನೀರಲ್ಲಿ ಕುದಿಸಿದ್ದಾನೆ.ನಂತರ ನೀರಿನಿಂದ ತೊಳೆದು ಅರಿಶಿಪುಡಿ ಹಾಕಿ, ಪೇಪರ್ ಒಂದರಲಿ ಪೊಟ್ಟಣ ಕಟಿ ಕೊಟ್ಟಿದ್ದ,ಅರ್ಧ ಗಂಟೆಯ ಬಳಿಕ ಪೊಟ್ಟಣ ತೆಗೆಯುವಂತೆ ಇಂದಿರಾ ಅವರಿಗೆ ತಿಳಿಸಿದ ವಂಚಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಆದರೆ ಅನುಮಾನ ಪಟ್ಟ ಇಂದಿರಾ ಅವರು ಐದೇ ನಿಮಿಷದಲ್ಲಿ ಪೊಟ್ಟಣ ತೆರೆದು ನೋಡಿದಾಗ ಮಾಂಗ್ಯಲ ಸರ ಸೇರಿದಂತೆ ತಾನು ನೀಡಿದ್ದ ಚಿನ್ನಾಭರಣಗಳು ತುಂಡು ತುಂಡಾಗಿರುವುದು ಕಂಡು ಬಂತು.ಆವೇಳೆಗಾಗಲೇ ಅವರು ನೀಡಿದ್ದ ಚಿನ್ನಾಭರಣಗಳಲ್ಲಿದ್ದ ಚಿನ್ನದಂಶವನ್ನು ವಂಚಕ ದ್ರವ ಮಾದರಿಯಲ್ಲಿ ಸಂಗ್ರಹಿಸಿ ಪಡೆದು ಪರಾರಿಯಾಗಿದ್ದಾನೆ.ಈ ಕುರಿತು ಇಂದಿರಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚಕ ಆಟೋ ರಿಕ್ಷಾದಲ್ಲಿ ಬಂದಿದ್ದ, ನಮ್ಮ ಮನೆಯ ಮೇಲಿನ ಮನೆಯಲ್ಲಿ ಆತ ಇದೇ ಮಾದರಿಯಲ್ಲಿ ವಂಚನೆಗೆ ಪ್ರಯತ್ನ ಪಟ್ಟಿದ್ದ. ಆದರೆ ಆ ಮನೆಯಲ್ಲಿ ಅವರು ನಮಗೆ ಯಾವುದೂ ಬೇಡ ಎಂದು ತಿಳಿಸಿದ್ದರಿಂದ ಆತ ನಮ್ಮ ಮನೆಗೆ ಬಂದಿದ್ದ. ಆರಂಭದಲ್ಲಿ ಆತ ನನ್ನ ಕಾಲಿನ ಗೆಜ್ಜೆಯನ್ನು ಹೊಳಪಾಗಿಸಿ ಕೊಟ್ಟಿದ್ದರಿಂದ ನನಗೆ ನಂಬಿಕೆ ಬಂತು.ಆದರೆ ನನ್ನಿಂದ ಪಡೆದ ಚಿನ್ನಾಭರಣವನ್ನು ಬ್ಯಾಟರಿ ಚಾಲಿತ ಬೆಂಕಿಯಲ್ಲಿ ಕುದಿಸುವಾಗ ನಾನು ಅನುಮಾನ ಪಟ್ಟು ಪ್ರಶ್ನಿಸಿದಾಗ, ಚಿನ್ನದಲ್ಲಿರುವ ಮಣ್ಣು ಬಿಡಲು ಈ ರೀತಿ ಕುದಿಸಬೇಕು ಎಂದಿದ್ದ. ಇದರ ಜೊತೆಗೆ ಆತನ ಬಳಿ ಸಣ್ಣ ಡಬ್ಬಗಳು ಹಲವು ಇತ್ತು.ಕುದಿಸಿ ಆರಿಸಿದ ದ್ರವದ ಅಡಿ ಭಾಗದಿಂದ ಕೆಲವು ದ್ರವ ಮಾದರಿಯನ್ನು ಪಡೆದು ಡಬ್ಬಕ್ಕೆ ತುಂಬಿಸಿದ್ದ.ಈ ನಡುವೆ ನಾನು ಕೊಟ್ಟ ಆಭರಣಕ್ಕೆ ಹಳದಿ ಹುಡಿ ಮಿಶ್ರ ಮಾಡಿದ್ದರಿಂದ ನನಗೆ ವಂಚಕನ ಕೈಚಳಕ ಗೊತ್ತಾಗಿಲ್ಲ.ಆದರೆ ಆತ ಪೇಪರ್‌ನಲ್ಲಿ ಕಟ್ಟಿಕೊಟ್ಟ ಆಭರಣವನ್ನು ಅರ್ಧಗಂಟೆ ಬಿಟ್ಟು ತೆಗೆಯಬೇಕೆಂದಿದ್ದ.ಈ ನಡುವೆ, ನಾನು ಮಾದರಿಯಾಗಿ ನಿಮಗೆ ತೋರಿಸಿದ್ದೇನೆ. ಮುಂದೆ ನನ್ನನ್ನು ಪುತ್ತೂರಿನ ರಿಲಾಯನ್ಸ್ ಸ್ಮಾರ್ಟ್‌ನಲ್ಲಿ ಸಂಪರ್ಕಿಸಿ.ಅಲ್ಲಿ ನಾನು ಸಿಗುತ್ತೇನೆ ಎಂದು ಹೇಳಿ ಹೋಗಿದ್ದ,ನಾನು ಐದು ನಿಮಿಷದ ಬಳಿಕ ಪೊಟ್ಟಣ ತೆಗೆದು ನೋಡಿದಾಗ ಮೋಸ ಹೋದದ್ದು ಅರಿವಾಗಿದೆ.

Leave A Reply

Your email address will not be published.