ರಾಜ್ಯ,ಜಿಲ್ಲಾ,ರಾಷ್ಟ್ರೀಯ ಹೆದ್ದಾರಿಯಿಂದ 40 ಮೀ ಒಳಗೆ ಇರುವ ಕಟ್ಟಡಗಳ ತೆರವಿಗೆ ಆದೇಶಿಸಿದ ಹೈಕೋರ್ಟ್ !! ಪ್ರಸ್ತುತ ರಸ್ತೆ ಬದಿ ಅಂಗಡಿ ನಿರ್ಮಿಸಿದವರ ಗತಿ ಏನು?

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ಬದಿಯಲ್ಲೊಮ್ಮೆ ಅತ್ತಿದಿಂದ ಕಣ್ಣು ಹಾಯಿಸಿದರೆ ಸಾಕು. ಸಾಲು ಸಾಲು ಕಟ್ಟಡಗಳು, ಕಾಂಪ್ಲೆಕ್ಸ್ ಗಳು, ಮಳಿಗೆಗಳು. ಹೆದ್ದಾರಿ ಪಕ್ಕದಲ್ಲೇ ಇರುವಂತಹ ಇಂತಹ ಕಟ್ಟಗಳಿಗೆ ಸದ್ಯದಲ್ಲೇ ಬ್ರೇಕ್ ಬೀಳಲಿದೆ. ಸದ್ಯ ಈ ವಿಚಾರದಲ್ಲಿ ಚಿಂತನೆ ನಡೆಸಿ ಹೊಸ ಕಾನೂನು ಜಾರಿಯಾಗುವ ಎಲ್ಲಾ ಕ್ರಮಗಳನ್ನು ಸರ್ಕಾರ ಈಗಾಗಲೇ ಕೈಗೊಂಡಿದ್ದು, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈ ಕೋರ್ಟ್ ನಿರ್ದೇಶನ ನೀಡಿದೆ. ಇದೆಲ್ಲದರ ನಡುವೆ ಕೈಬಿಸಿ ಮಾಡಿಸಿಕೊಂಡಂತಹ ಅಧಿಕಾರಿಗಳು, ಕಟ್ಟಡ ಮಾಲೀಕರಿಗೂ ಒಳಗೊಳಗೇ ಗಲಿಬಿಲಿ ಶುರುವಾಗಿದೆ.

ಹೌದು. ರಾಷ್ಟ್ರೀಯ ಹೆದ್ದಾರಿಯಿಂದ 40 ಮೀಟರ್ ಒಳಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೈ ಕೋರ್ಟ್ ಪೀಠ ಮಹತ್ವದ ಆದೇಶವನ್ನು ಎತ್ತಿ ಹಿಡಿದಿದ್ದು, ರಾಜ್ಯ ಹೆದ್ದಾರಿಯ 40ಮೀ ಒಳಗೆ ಹಾಗೂ ಜಿಲ್ಲಾ ಹೆದ್ದಾರಿಯ 25 ಮೀ ಒಳಗೆ ಕಟ್ಟಡ ನಿರ್ಮಿಸಲು ಅವಕಾಶ ನೀಡಬಾರದು, ಆ ಪ್ರದೇಶವನ್ನು ಕಟ್ಟಡ ರಹಿತ ವಲಯವಾಗಿ ಅಂತರ ಕಾಯ್ದುಕೊಳ್ಳಬೇಕೆಂದು 1999 ರಲ್ಲಿ ಅದೇಶಿಸಿತ್ತು.

ಈ ಮೊದಲೇ ಸುತ್ತೋಲೆ ಹೊರಡಿಸಿದ್ದರೂ ಉಡುಪಿ ರಾಷ್ಟ್ರೀಯ ಹೆದ್ದಾರಿ(66)ರ ಕಾಪು ಬಳಿ ಹೆದ್ದಾರಿಯ ಸಮೀಪವೇ ಕಟ್ಟಡವೊಂದು ಎದ್ದು ನಿಂತಿದ್ದು ಇದನ್ನು ಪ್ರಶ್ನಿಸಿ ಸಾರ್ವಜನಿಕರು ಕೋರ್ಟ್ ಮೊರೆಹೋಗಿದ್ದರು.

ಈ ಬಗೆಗಿನ ಆದೇಶ ಎತ್ತಿ ಹಿಡಿದ ಕೋರ್ಟ್ 60 ದಿನಗಳ ಒಳಗಾಗಿ ರಸ್ತೆ ಆಕ್ರಮಿತ ಕಟ್ಟಡವನ್ನು ತೆರವುಗೊಳಿಸಲು ಸೂಚಿಸಿದೆ.ಇದೆಲ್ಲದರ ನಡುವೆ ಕೈ ಬಿಸಿ ಮಾಡಿಕೊಂಡಿರುವ ಅಧಿಕಾರಿಗಳ ಬಗೆಗೂ ತನಿಖೆ ನಡೆಸಲು ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದು ಇತ್ತ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.

ಸದ್ಯ ಹೆದ್ದಾರಿ ಬದಿಗಳಲ್ಲಿ ಇರುವ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳು,ಅನಧಿಕೃತ ಕಟ್ಟಡಗಳು,ರಸ್ತೆಯ 40 ಮೀ ಒಳಗೆ ಇದ್ದರೆ ಅಂತಹವುಗಳ ತೆರವು ಕಾರ್ಯ ನಡೆದೇ ನಡೆಯುತ್ತದೆ.ಆದರೆ ಹೊಟ್ಟೆ ಪಾಡಿಗಾಗಿ ಅಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟನ್ನು ನಡೆಸುತ್ತಿರುವವರ ಗತಿ ಏನು? ಸರ್ಕಾರ ಅವರಿಗೆ ಸೂಕ್ತ ಪರಿಹಾರವನ್ನು ಕೊಟ್ಟು ತೆರವುಗೊಳಿಸುತ್ತದೆಯೇ? ಎಂಬುವುದನ್ನು ಕಾದುನೋಡಬೇಕಾಗಿದೆ.

1 Comment
  1. L.B.Pernaje says

    ಭೂಪರಿವರ್ತನಾ ನಿಯಮಗಳನ್ನು ಗಾಳಿಗೆ ತೂರಿ ಅಥವಾ ಉಲ್ಲಂಘಿಸಿ ಯಾ ಭ್ರಷ್ಟಾಚಾರದ ಮಾರ್ಗದಿಂದ ಅಕ್ರಮವಾಗಿ ಕಟ್ಟಡ ರಚಿಸಿದವರಿಗೆ ಸರಕಾರ ಯಾಕಾಗಿ ಪರಿಹಾರ ನೀಡಬೇಕು?ಪರಿಹಾರ ಕೊಡುವುದಾದರೂ ಯಾರ ಹಣವನ್ನು ? ಜನತೆಯಿಂದ ಸಂಗ್ರಹಿಸಿದ ಹಣವನ್ನಲ್ಲವೇ ?ಒಂದುವೇಳೆ ಕಟ್ಟಡ ನಿರ್ಮಾಣದ ಕಾಲದಲ್ಲಿ ಜ್ಯಾರಿಯಲ್ಲಿದ್ದ ಭೂ ಪರಿವರ್ತನಾ ನಿಯಮಗಳಿಗನುಸಾರವಾಗಿ ಕಟ್ಟಡ ನಿರ್ಮಿಸಿದ ತರುವಾಯ ಅಲ್ಲಿನ ರಸ್ತೆ ಮೇಲ್ದರ್ಜೆಗೇರಿಸಿದ್ದಾಗಿದ್ದಲ್ಲಿ ಕಟ್ಟಡ ಮಾಲಿಕನ ಅಪರಾಧವಿಲ್ಲ.ಆ ರಚನೆ ಅಕ್ರಮವಾದುದೂ ಅಲ್ಲ.ಹಾಗಿರುವಾಗ ಅಂತಹ ಪ್ರಸಂಗಗಳಲ್ಲಿ ಕಟ್ಟಡಗಳನ್ನು ಕೆಡುವುದಾದಲ್ಲಿ ಸರಕಾರ ಪರಿಹಾರ ನೀಡಬೇಕಾಗುತ್ತದೆ.ಮತ್ತು ಅದು ನ್ಯಾಯೋಚಿತವೂ ಆಗಿದೆ.

Leave A Reply

Your email address will not be published.