ವೇಣೂರು : ಕೆಲಸದಾಳುವಿನ ಬಟ್ಟೆ ಸುಟ್ಟ ಮಾಲಿಕ | ಕೋಪದಿಂದ ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ

ಬೆಳ್ತಂಗಡಿ : ಕೆಲಸದಾಳುವಿನ ಬಟ್ಟೆಯನ್ನು ಮನೆ ಮಾಲಿಕ ಸುಟ್ಟು ಹಾಕಿದ್ದು,ಇದರಿಂದ ಕೋಪಗೊಂಡ ಕೆಲಸದಾಳು ಮಾಲಿಕನ ಕಾರು,ಬೈಕಿಗೆ ಬೆಂಕಿ ಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.

ತನ್ನ ಬಟ್ಟೆಯನ್ನು ಸುಟ್ಟು ಹಾಕಿದ್ದರೆಂದು ಆರೋಪಿಸಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಮಾಲೀಕರ ಮನೆ ಬಳಿ ನಿಲ್ಲಿಸಿದ್ದ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆ.

ವೇಣೂರು ಗ್ರಾಮದ ಕರಿಮಣೇಲು ಗ್ರಾಮದ ಪಾಸ್ಕಲ್ ಪಿಂಟೋ ಎಂಬವರ ಕೋಳಿ ಅಂಗಡಿಯಲ್ಲಿ 6 ತಿಂಗಳ ಹಿಂದೆ ಕೆಲಸ ಮಾಡುತಿದ್ದ ಪ್ರಭಾಕರ ಎಂಬ ವ್ಯಕ್ತಿ ಮಾಲಿಕರ ಮನೆ ಬಳಿಯ ಶೆಡ್ ನಲ್ಲಿ ನಿಲ್ಲಿಸಿದ ಬೈಕಿಗೆ ಬೆಂಕಿ ಹಚ್ಚಿದ್ದು ಅದರ ಹತ್ತಿರದಲ್ಲೇ ಇದ್ದ ಕಾರಿಗೂ ಬೆಂಕಿ ತಗುಲಿದೆ.

ಆ ಸಮಯದಲ್ಲಿ ಮನೆಯಲ್ಲಿ ಫಾಸ್ಕಲ್ ಅವರ ತಾಯಿ ಮಾತ್ರ ಇದ್ದು ಕೋಳಿ ಅಂಗಡಿಗೆ ತೆರಳಿದ್ದ ಮಗನಿಗೆ ವಿಷಯ ತಿಳಿಸಿದಾಗ ತಕ್ಷಣ ಅವರು ಬಂದು ಬೆಂಕಿ ನಂದಿಸಿದರೂ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದಲ್ಲದೆ ಕಾರು ಭಾಗಶಃ ಸುಟ್ಟು ಹೋಗಿದೆ. ಅಲ್ಲೇ ಹತ್ತಿರದಲ್ಲಿ ಬೆಂಕಿ ಹಚ್ಚಿದ ಆರೋಪಿಯೂ ಇದ್ದು, ಕೆಲವು ತಿಂಗಳುಗಳ ಹಿಂದೆ ನನ್ನ ಬಟ್ಟೆ ಸುಟ್ಟು ಹಾಕಿದ್ದೀರಿ ಅದಕ್ಕಾಗಿ ನಾನು ನಿಮ್ಮ ವಾಹನಕ್ಕೆ ಬೆಂಕಿ ಹಚ್ಚಿದ್ದೇನೆ ನೀವು ಮಾಡುವುದನ್ನು ಮಾಡಿ ಎಂದು ಸವಾಲು ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.