ಉದ್ಯೋಗ ಖಾತರಿ ಯೋಜನೆಯಲ್ಲಿ ವಿಶೇಷ ಸಾಧನೆ | ಪುತ್ತೂರು ತಾ.ನ ಹಿರೆಬಂಡಾಡಿ,ಬಜತ್ತೂರು,ನರಿಮೊಗರು ,ಕಡಬ ತಾ.ನ ಶಿರಾಡಿ,ಗೋಳಿತೊಟ್ಟು,ಬೆಳಂದೂರು ಗ್ರಾ.ಪಂ.ಗೆ ಅಭಿನಂದನೆ

2020-21ನೇ ಸಾಲಿನಲ್ಲಿ ಮಹಾತ್ಮ ಗಾಂಧೀ ನರೇಗಾ ಯೋಜನೆಯಡಿ ವಿಶಿಷ್ಠ ಸಾಧನೆಗೈದ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ತಲಾ ಮೂರು ಗ್ರಾಮ ಪಂಚಾಯತ್‌ಗಳನ್ನು ಆ.23ರಂದು ಪುರಭವನದಲ್ಲಿ ಅಭಿನಂದಿಸಲಾಯಿತು.

ಪುತ್ತೂರು ತಾಲೂಕಿನಲ್ಲಿ ವಿಶಿಷ್ಠ ಸಾಧನೆಗೈದು ಪ್ರಥಮ ಸ್ಥಾನ ಪಡೆದ ಹಿರೇಬಂಡಾಡಿ, ದ್ವಿತೀಯ ಸ್ಥಾನ ಪಡೆದ ಬಜತ್ತೂರು ಹಾಗೂ ತೃತೀಯ ಸ್ಥಾನ ಪಡೆದ ನರಿಮೊಗರು ಗ್ರಾ.ಪಂ ಮತ್ತು ಕಡಬ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಶಿರಾಡಿ, ದ್ವಿತೀಯ ಸ್ಥಾನ ಪಡೆದ ಗೋಳಿತೊಟ್ಟು ಹಾಗೂ ತೃತೀಯ ಸ್ಥಾನ ಪಡೆದ ಬೆಳಂದೂರು ಗ್ರಾ.ಪಂಗಳನ್ನು ಶಾಸಕ ಸಂಜೀವ ಮಠಂದೂರು ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಅಭಿನಂದಿಸಿದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ, ನಗೇರಾ ಯೋಜನೆಯಲ್ಲಿ ಪ್ರತಿವರ್ಷ ಗುರಿ ಮೀರಿದ ಸಾಧನೆ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಗುರುತಿಸುವ ಕಾರ್ಯ ನಡೆದಿದೆ. ಪುತ್ತೂರು ತಾಲೂಕಿನಲ್ಲಿ ಶೇ.134ಹಾಗೂ ಕಡಬ ತಾಲೂಕಿನಲ್ಲಿ ಶೇ.108ಸಾಧನೆ ಮಾಡಿದೆ. ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ ಇಂಗುಗುಂಡಿ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಅಂತರ್ಜಲ ವೃದ್ಧಿಯ ಜೊತೆಗೆ ಆರ್ಥಿಕವಾಗಿಯೂ ಸಹಕಾರಿಯಾಗಿದೆ. ಇಲಾಖೆಯ ವರದಿಯಂತೆ ಪುತ್ತೂರು ತಾಲೂಕಿನಲ್ಲಿ ಶೇ.0.05ರಷ್ಟು ಅಂತರ್ಜಲ ಮಟ್ಟ ಏರಿಕೆ ಕಂಡಿದ್ದು ಇಂಗುಗುಂಡಿ ನಿರ್ಮಾಣದ ಫಲಶೃತಿಯಾಗಿದೆ. ತಾಲೂಕಿನಲ್ಲಿ ಎರಡು ಕೆರೆ ಹಾಗೂ 45,000 ಇಂಗುಗುಂಡಿಗಳ ನಿರ್ಮಾಣಗೊಂಡು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದ ಅವರು ಮುಂದೆ ರೈತ ಬಂಧು ಹಾಗೂ ಪೌಷ್ಠಿಕ ತೋಟ ಅಭಿಯಾನ ನಡೆಯಲಿದ್ದು ಈ ಅಭಿಯಾನ ಯಶಸ್ವೀಯಾಗುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಇಓರವರಿಂದ ವೈಯಕ್ತಿಕ ನಗದು ಪುರಸ್ಕಾರ:

ನರೇಗಾ ಯೋಜನೆಯಲ್ಲಿ ವಿಶಿಷ್ಠ ಸಾಧನೆಗೈದು ಪ್ರಥಮ ಸ್ಥಾನ ಪಡೆದ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾ.ಪಂ ಪಿಡಿಓ ದಿನೇಶ್ ಶೆಟ್ಟಿ ಹಾಗೂ ಕಡಬ ತಾಲೂಕಿನ ಶಿರಾಡಿ ಗ್ರಾ.ಪಂ ಪಿಡಿಓ ವೆಂಕಟೇಶ್‌ರವರಿಗೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ತಲಾ ರೂ.5000 ದಂತೆ ವೈಯಕ್ತಿಕ ನಗದು ಪುರಸ್ಕಾರ ನೀಡಿ ಗೌರವಿಸಿದರು.

ಅಭಿನಂದಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಜೀವನಕ್ಕೆ ಪೂರಕವಾದ ಉದ್ಯೋಗ ನೀಡುವುದು ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶ. ಅದನ್ನು ಸಾಕಾರಗೊಳಿಸುವವರು ಗ್ರಾ.ಪಂ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು, ನಿಮ್ಮಿಂದ ಗ್ರಾಮದ ಅಭಿವೃದ್ಧಿ, ಸುಧಾರಣೆ ಸಾಧ್ಯ, ನಿಮ್ಮಿಂದ ಬಡತನ ನಿವಾರಣೆಯಾಗಿ ಗ್ರಾಮ ಸ್ವರಾಜ್ಯ ಸಾಧ್ಯ ಎಂದರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಅನುಷ್ಠಾನ ಮಾಡುವವರೂ ನೀವೇ ಆಗಿದ್ದು ತಾಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ನಿಮ್ಮ ಪಂಚಾಯತ್ ಯಾವ ಸ್ಥಾನ ಪಡೆಯುತ್ತದೆ ಎಂಬುದು ನಿಮ್ಮ ಕೈಯಲ್ಲಿದೆ. ಹೀಗಾಗಿ ಗ್ರಾಮದ ಅಭಿವೃದ್ಧಿ ಹರಿಕಾರರು ಆಯಾ ಗ್ರಾಮದ ಅಧ್ಯಕ್ಷರು ಹಾಗೂ ಪಿಡಿಓಗಳಾಗಿದ್ದು ಸರಕಾರದ ಅನುದಾನವನ್ನು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ವಿನಿಯೋಗಿಸಿ ಗ್ರಾಮದ ಜನರ ಬದುಕಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದರು.

ಇಓರವರ ಮಾರ್ಗದರ್ಶನ, ಸಹಕಾರದಿಂದ ಸಾಧನೆ:

ಪ್ರಥಮ ಸ್ಥಾನ ಪಡೆದ ಕಡಬ ಶಿರಾಡಿ ಗ್ರಾ.ಪಂ ಪಿಡಿಓ ವೆಂಕಟೇಶ್ ಹಾಗೂ ತೃತೀಯ ಸ್ಥಾನದ ಪಡೆದ ನರಿಮೊಗರು ಗ್ರಾ.ಪ. ಪಿಡಿಓ ರವಿಚಂದ್ರಯವರು ಮಾತನಾಡಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರ ಉತ್ತಮ ಸಹಕಾರ, ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ನರೇಗಾ ಯೋಜನೆಯಲ್ಲಿ ಸಾಧನೆಗೆ ಸಾಧ್ಯವಾಗಿದೆ. ಕ್ಲಿಷ್ಟಕರ ಸಂದರ್ಭದಲ್ಲಿ ಉತ್ತಮ ಸ್ಪಂಧನೆ ನೀಡಿದ್ದಾರೆ. ಅಭಿನಂದನೆಯು ಎಲ್ಲಾ ಪಂಚಾಯತ್‌ಗಳಿಗೆ ಪ್ರೇರಣೆಯಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Leave A Reply

Your email address will not be published.