ಮೊಹರಂ ಆಚರಣೆ ವೇಳೆ ವಿದ್ಯುತ್ ಅವಘಡ | ಇಬ್ಬರು ಸಾವು, ಓರ್ವ ಗಂಭೀರ

ಮೊಹರಂ ಹಬ್ಬದ ಆಚರಣೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯಗಳಾದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ನಡೆದಿದೆ.

ಹಸನ್ ಸಾಬ್ ಮುಲ್ಲಾ (55) ಹುಲಿಗೆಮ್ಮ (25) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ದೇವರನ್ನು ಹಿಡಿದ ವ್ಯಕ್ತಿ ಮತ್ತು ದರ್ಶನಕ್ಕೆ ಹೋಗಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗಿನ ಜಾವ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಮೊಹರಂ ಕತ್ತಲರಾತ್ರಿ ನಿಮಿತ್ತ ಸಂತೆಕೆಲ್ಲೂರಿನಿಂದ ದಾದನದೊಡ್ಡಿಗೆ ದೇವರುಗಳು ಭೇಟಿ ನೀಡುವ ವೇಳೆ ವಿದ್ಯುತ್ ಅವಘಡ ಸಂಭವಿಸಿದೆ.

ಹುಸೇನ್ ಪಾಶಾ ದೇವರನ್ನ ದಾದನದೊಡ್ಡಿ ದರ್ಗಾಕ್ಕೆ ಕರೆದೊಯ್ಯುವ ವೇಳೆ ದೇವರು ವಿದ್ಯುತ್ ತಂತಿಗೆ ತಾಗಿ ದುರ್ಘಟನೆಯಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋವಿಡ್ ಹಿನ್ನೆಲೆ ನಿಷೇಧದ ನಡುವೆಯೂ ಮೊಹರಂ ಆಚರಣೆಗೆ ಗ್ರಾಮಸ್ಥರು ಮುಂದಾಗಿದ್ದರು. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.