ಪತ್ನಿಯನ್ನು ಕಳುಹಿಸಿಕೊಡಲಿಲ್ಲವೆಂದು ಮಾವನ ಕತ್ತು ಕೊಯ್ದ ಅಳಿಯ

ಪತ್ನಿಯನ್ನು ಕಳುಹಿಸಿಕೊಡಲಿಲ್ಲವೆಂದು ಕ್ಯಾತೆ ತೆಗೆದು ಸಿಟ್ಟಾದ ಅಳಿಮಯ್ಯನೊಬ್ಬ ಹೆಣ್ಣು ಕೊಟ್ಟ ಮಾವನ ಕತ್ತನ್ನೇ ಸೀಳಿದ ಘಟನೆ ಹುಬ್ಬಳ್ಳಿ ಜಿಲ್ಲೆಯ ಅಣ್ಣಿಗೇರಿ ತಾಲೂಕು ಹಳ್ಳಿಕೇರಿ ಗ್ರಾಮದಿಂದ ವರದಿಯಾಗಿದೆ.

ಶಿವಪ್ಪ ಹುಚ್ಚಪ್ಪ ದಳವಾಯಿ (55) ಎಂಬಾತನೇ ಅಳಿಯನಿಂದ ಮಾರಣಾಂತಿಕವಾಗಿ ಗಾಯಗೊಂಡ ವ್ಯಕ್ತಿ.

ಬ್ಲೇಡ್ ನಿಂದ ಕತ್ತು ಸೀಳಲ್ಪಟ್ಟ ಶಿವಪ್ಪ ಅವರು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮಗಳ ಗಂಡ ಶಿರಹಟ್ಟಿ ತಾಲೂಕು ಬನ್ನಿಕೊಪ್ಪ ಗ್ರಾಮದ ಜಗದೀಶ ಕಂಬಳಿ ಹಲ್ಲೆ ಮಾಡಿದ್ದಾನೆ.

ಜಗದೀಶ ತನ್ನ ಪತ್ನಿಯೊಂದಿಗೆ ಅನಾವಶ್ಯಕವಾಗಿ ಪದೇ ಪದೇ ಜಗಳ ಮಾಡುತ್ತಿದ್ದ. ಹೀಗಾಗಿ ಗಾಯಾಳು ಶಿವಪ್ಪ ತಿಂಗಳ ಹಿಂದಷ್ಟೆ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಅಲ್ಲದೆ ಒಳ್ಳೆಯ ರೀತಿಯಿಂದ ಜೀವನ ಸಾಗಿಸು, ಮಗಳನ್ನು ನಿನ್ನೊಂದಿಗೆ ಕಳುಹಿಸುತ್ತೇನೆಂದು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಆದರೂ ಜಗದೀಶ ಮಂಗಳವಾರ ಸಂಜೆ ಬೈಕ್‌ನಲ್ಲಿ ಹಳ್ಳಿಕೇರಿಗೆ ಬಂದು ಪತ್ನಿಯನ್ನು ಕಳುಹಿಸಿ ಕೊಡುವಂತೆ ಮಾವ ಶಿವಪ್ಪ, ಅವರ ಮಗ ಮತ್ತು ಇನ್ನೋರ್ವ ಮಗಳೊಂದಿಗೆ ಜಗಳವಾಡಿ, ಅವಾಚ್ಯವಾಗಿ ನಿಂದಿಸಿದ್ದಾನೆ.

ನಿನ್ನ ಪತ್ನಿ ಗದಗದಲ್ಲಿ ಸಂಬಂಧಿಕರ ಮನೆಯಲ್ಲಿದ್ದಾಳೆ. ಬುಧವಾರ ನಿನ್ನೆ ಜತೆ ಕಳುಹಿಸುತ್ತೇವೆಂದು ಹೇಳಿದರೂ ಕೇಳದೆ ಜಗಳವಾಡಿ, ತನ್ನೊಂದಿಗೆ ತಂದಿದ್ದ ಖಾರದಪುಡಿಯನ್ನು ಮಾವ ಶಿವಪ್ಪ ಮತ್ತು ಅವರ ಮಗ ಪ್ರವೀಣರ ಮುಖಕ್ಕೆ ಎರಚಿ, ಸ್ಟೀಕರ್‌ ಕತ್ತರಿಸುವ ಬ್ಲೇಡ್‌ನಿಂದ ಕುತ್ತಿಗೆಗೆ ಇರಿದಿದ್ದಾನೆ. ಬಿಡಿಸಲು ಹೋದ ಅವರ ಇನ್ನೋರ್ವ ಮಗಳ ಮುಖಕ್ಕೆ ಖಾರದ ಪುಡಿ ಎರಚಿ ಹಲ್ಲೆ ಮಾಡಿ ಎಳೆದಾಡಿದ್ದಾನೆ.

ಘಟನೆಗೆ ಸಂಬಂಧಿಸಿ ಅಣ್ಣಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.