ಕಡಬ: ಸವಿತಾ ಸಮಾಜ ಸಮಾಲೋಚನ ಸಭೆ ಸಮಿತಿ ರಚನೆ

ಕಡಬ: ಸವಿತಾ ಸಮಾಜ ಸಂಘದ ಕಡಬ ತಾಲೂಕು ಮಟ್ಟದ ಸಮಾಲೋಚನ ಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಕಡಬದ ಜೈರಾಮ್ ಟವರ್ಸ್ ಹೊಟೇಲ್ ವೃದ್ಧಿಯ ಸಭಾಂಗಣದಲ್ಲಿ ಜರಗಿತು.

ಮಾರ್ಗದರ್ಶಕರಾಗಿ ಆಗಮಿಸಿದ ದ.ಕ.ಜಿಲ್ಲಾ ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸದಸ್ಯ ಸೀತಾರಾಮ ಗೌಡ ಪೊಸವಳಿಕೆ ಅವರು ಮಾತನಾಡಿ ಯಾವುದೇ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಅವರು ಸಂಘಟಿತರಾಗಿ ಕಾರ್ಯಚಟುವಟಿಕೆಗಳನ್ನು ನಡೆಸಬೇಕು.

ನಾವು ಸಂಘಟಿತರಾಗಿ ಒಗ್ಗಟ್ಟನಿಂದ ಕೆಲಸ ಮಾಡಿದಾಗ ಮಾತ್ರ ನಮಗೆ ನಮ್ಮ ಹಕ್ಕೊತ್ತಾಯಗಳನ್ನು ಸಮರ್ಥವಾಗಿ ಮಂಡಿಸಲು ಸಾಧ್ಯ. ಸಂಘಟನೆ ಎನ್ನುವುದು ಅಭಿವೃದ್ಧಿಯ ವಿಚಾರಕ್ಕೆ ಬಳಕೆಯಾಗಬೇಕೇ ಹೊರತು ಸಂಘರ್ಷಕ್ಕೆ ವೇದಿಕೆಯಾಗಬಾರದು ಎಂದರು.

ಸವಿತಾ ಸಮಾಜವು ಎಲ್ಲರ ಜೊತೆ ನಿರಂತರ ಸಂಪರ್ಕದಲ್ಲಿರುವ ಸಮುದಾಯವಾಗಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಸವಿತಾ ಸಮಾಜದ ಕೊಡುಗೆ ಅಪಾರವಾದುದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಮಾತನಾಡಿ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ವೃತ್ತಿ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಸಂಘಟನೆಯಿಂದ ನಮಗೆ ಸಾಕಷ್ಟು ಅನುಕೂಲವಾಗಲಿದೆ. ಯುವ ಸಮುದಾಯ ದುಶ್ಚಟಮುಕ್ತರಾಗಿ ಕೆಲಸ ಮಾಡುವುದರಿಂದ ಎಲ್ಲರ ಪ್ರೀತ್ಯಾದರಗಳನ್ನು ಪಡೆಯಬಹುದು ಎಂದರು.

ಬಿಜೆಪಿ ಸುಳ್ಯ ಮಂಡಲದ ಕಾರ್ಯದರ್ಶಿ ಪ್ರಕಾಶ್ ಎನ್.ಕೆ. ಮಾತನಾಡಿದರು. ಗಣೇಶ್ ಬಾಬು ಕಡಬ, ನವೀನ್ ಭಂಡಾರಿ ನೆಲ್ಯಾಡಿ ಉಪಸ್ಥಿತರಿದ್ದರು. ಸವಿತಾ ಸಮಾಜದ ಮುಖಂಡ ವಸಂತ ಭಂಡಾರಿ ಮೂರಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂತೋಷ್ ನೆಲ್ಯಾಡಿ ವಂದಿಸಿದರು.

ಸಮಿತಿ ರಚನೆ

ನೂತನವಾಗಿ ರಚನೆಗೊಂಡ ಸವಿತಾ ಸಮಾಜ ಸಂಘದ ಕಡಬ ತಾಲೂಕು ಸಮಿತಿಯ ಗೌರವಾಧ್ಯಕ್ಷರಾಗಿ ಪ್ರಕಾಶ್ ಎನ್.ಕೆ., ಅಧ್ಯಕ್ಷರಾಗಿ ವಸಂತ ಭಂಡಾರಿ ಮೂರಾಜೆ, ಕಾರ್ಯದರ್ಶಿ ಯಾಗಿ ನವೀನ್ ಭಂಡಾರಿ ನೆಲ್ಯಾಡಿ, ಕೋಶಾಧಿಕಾರಿಯಾಗಿ ಗಣೇಶ್ ಬಾಬು ಕಡಬ, ಉಪಾಧ್ಯಕ್ಷರಾಗಿ ಸಂತೋಷ್ ನೆಲ್ಯಾಡಿ, ಸಚಿನ್ ಸವಣೂರು, ಶರತ್ ಕೆದಿಲ ರಾಮಕುಂಜ, ಯೋಗೀಶ್ ನೆಟ್ಟಣ ಅವರು ಆಯ್ಕೆಯಾದರು.

Leave A Reply

Your email address will not be published.