ಬಿಜೆಪಿ ನಾಯಕನನ್ನು ಟಾರ್ಗೆಟ್ ಮಾಡಿ ನಡೆಸಿದ ಭಯೋತ್ಪಾದಕ ದಾಳಿಗೆ 3 ವರ್ಷದ ಕಂದಮ್ಮ ಬಲಿ

ಬಿಜೆಪಿ ನಾಯಕನನ್ನು ಟಾರ್ಗೆಟ್ ಮಾಡಿ ನಡೆದ ಭಯೋತ್ಪಾದಕರ ದಾಳಿಗೆ, 3 ವರ್ಷದ ಕಂದ ಬಲಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದಿದೆ.

ವೀರ್ (3) ದಾಳಿಯಲ್ಲಿ ಮೃತಪಟ್ಟ ಮಗು.
ರಾಜೌರಿಯಲ್ಲಿ ಭಯೋತ್ಪಾದಕರು ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ನಿವಾಸವನ್ನು ಟಾರ್ಗೆಟ್ ಮಾಡಿ ನಿನ್ನೆ ರಾತ್ರಿ ಗ್ರೆನೇಡ್ ಎಸೆದಿದ್ದಾರೆ. ಈ ದಾಳಿಯ ಪರಿಣಾಮ ಜಸ್ಬೀರ್ ಸಿಂಗ್ ಅವರ ಕುಟುಂಬದ ಏಳು ಮಂದಿ ಸದಸ್ಯರಿಗೆ ಗಾಯಗಳಾಗಿವೆ.

ಆದರೆ ಮಗುವಿನ ಸ್ಥಿತಿ ಗಂಭೀರವಾಗಿದ್ದು, ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೀರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಸಿಂಗ್ ಅವರಿಗೂ ಗಾಯಗಳಾಗಿದ್ದು, ಅವರಿಗೆ ಸರಿಯಾಗಿ ಭದ್ರತೆಯನ್ನು ನೀಡದ ಕಾರಣ ಈ ರೀತಿ ಕೃತ್ಯ ಸಂಭವಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ನಾಯಕರ ಮೇಲೆ ಭಯೋತ್ಪಾದಕ ದಾಳಿಗಳನ್ನು ಪಾಕಿಸ್ತಾನ ನಡೆಸುತ್ತಿದೆ. ಇದು ಹೇಡಿತನದ ಕೃತ್ಯ ಹಾಗೂ ನಾವು ದಾಳಿಯನ್ನು ಖಂಡಿಸುತ್ತೇವೆ. ಅದಕ್ಕೆ ಕಾರಣರಾದ ಭಯೋತ್ಪಾದಕರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಆಗ್ರಹಿಸಿದ್ದಾರೆ.

ಈ ಪ್ರಕರಣ ಕುರಿತು ತನಿಖೆ ಮಾಡುಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

Your email address will not be published.