ಎಲ್ಲೆಡೆ ಹರಿದಾಡುತ್ತಿದೆ ಕೊರಗಜ್ಜನ ಕಾರ್ಣಿಕ ತೋರ್ಪಡಿಸುವ ಕಿರುಚಿತ್ರದ ತುಣುಕು|ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ ವಿರೋಧ |ಚರ್ಚೆಗೆ ಕಾರಣವಾದ ಕಿರು ಚಿತ್ರದ ಪರ-ವಿರೋಧಗಳ ಬೆನ್ನಟ್ಟಿ

ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ನೀಡುವ ಕಾರ್ಣಿಕ ಶಕ್ತಿ, ತುಳುವರ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಶಕ್ತಿ ಅಸಾಮಾನ್ಯವಾದದ್ದು.ಭಕ್ತರು ಅಜ್ಜನ ಮೇಲಿಟ್ಟ ನಂಬಿಕೆ, ಭಯ, ಭಕ್ತಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಆದರೂ ಈ ನಡುವೆ ಕಳೆದ ಬಾರಿ ದೈವಕ್ಕೆ ಅಪಚಾರ ಮಾಡಿದ ನೀಚರು ಕೊರಗಜ್ಜ ದೈವದ ಕಾರ್ಣಿಕಕ್ಕೆ ಒಳಗಾಗಿ ಸರಿಯಾದ ಶಿಕ್ಷೆ ಅನುಭವಿಸಿದ್ದು ಕೂಡಾ ಜನತೆಗೆ ಅರಿತ ಸಂಗತಿ. ಆದರೆ ಇದೇ ದೈವದ ಕಾರ್ಣಿಕವನ್ನು ಕಿರುಚಿತ್ರದ ಮೂಲಕ ತುಳುನಾಡಿಗೆ ಪರಿಚಯಿಸಲು ಮುಂದಾದ ಅದೊಂದು ಚಿತ್ರ ತಂಡವೀಗ ಭಾರೀ ಚರ್ಚೆಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ಪ್ರಾರಂಭವಾಗಿದೆ.

ಸಾಮಾಜಿಕ ಜಾಲತಾಣದಲ್ಲಾದ ಚರ್ಚೆ

ಅಂದಹಾಗೆ ಇದೊಂದು ಕೊರಗಜ್ಜನ ಮಹಿಮೆ, ಕಾರ್ಣಿಕವನ್ನು ತೋರಿಸುವ ಕಿರು ಚಿತ್ರವಾಗಿದ್ದು, ಇದರಲ್ಲಿ ಬರುವ ಸನ್ನಿವೇಶಗಳು ತುಳುನಾಡಿನ ಕೊರಗಜ್ಜ ಭಕ್ತರ ಮನಸ್ಸಿಗೆ ನೋವುಂಟು ಮಾಡಿರುವುದು ಸಹಜ. ಇಲ್ಲಿ ಇಬ್ಬರೂ ಹುಡುಗಿಯರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸಂದರ್ಭ ವಾಹನ ಬಂದ್ ಬೀಳುತ್ತದೆ, ಅದೇ ಸಮಯದಲ್ಲಿ ವೃದ್ಧನ ವೇಷದಲ್ಲಿರುವ ವ್ಯಕ್ತಿಯೊಬ್ಬ ಇವರ ಸಹಾಯಕ್ಕೆ ಧಾವಿಸುವುದು, ಆ ಬಳಿಕ ಆ ಹುಡುಗಿಯರು ಆ ವೃದ್ಧನೊಂದಿಗೆ ಸೆಲ್ಫಿ ತೆಗೆಯುವುದು, ಸೆಲ್ಫಿ ಯಲ್ಲಿ ಕೊರಗಜ್ಜನ ಕಾಣುವುದು,ಹೀಗೆ ಇನ್ನೂ ಅನೇಕ ಪಾತ್ರಗಳು ಚಿತ್ರದಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿರೋಧ

ಕೊರಗಜ್ಜ ಕಾಡಿನಲ್ಲಿ ಕಾಣಿಸಿಕೊಳ್ಳುವುದು, ಸೆಲ್ಫೀ ಗೆ ಪೋಸ್ ಕೊಡುವುದು, ಇದೆಲ್ಲಾ ಕಾರ್ಣಿಕಕ್ಕೆ ಅಪಹಾಸ್ಯ ಮಾಡಿದ ರೀತಿ ಇದೆ ಎಂಬುವುದು ಇಲ್ಲಿ ಪ್ರಮುಖವಾಗಿ ಚರ್ಚೆಗೆ ಕಾರಣವಾಗಿದೆ. ನಂಬಿಕೆ, ಕಾರ್ಣಿಕ ಮೆರೆವ ಅಗೋಚರ ಶಕ್ತಿಯುಳ್ಳ ಕೊರಗಜ್ಜನನ್ನು ಈ ರೀತಿ ಸಣ್ಣತನದಿಂದ ತೋರಿಸುವುದು ಸರಿಯಲ್ಲ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಕೊರಗಜ್ಜನ ಮಹಿಮೆಯನ್ನು ತುಳುನಾಡಿನ ಜನ ಸಿನಿಮಾ ಗಳಿಂದ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲವೆಂದು ಹೇಳುತ್ತಾರೆ.ಕೆಲವೊಂದು ಪತ್ತೇದಾರಿ ಕೆಲಸಗಳಲ್ಲಿ ಕೊರಗಜ್ಜನ ಮೊರೆಹೋದಾಗ ಪೊಲೀಸರಿಂದ ಪತ್ತೆಹಚ್ಚಲು ಅಸಾಧ್ಯವಾದವನ್ನು ಅಜ್ಜ ಸಾಧ್ಯವಾಗಿಸಿದ್ದು ಇಂತಹ ಅನೇಕ ಉದಾಹರಣೆಗಳಿವೆ.ಈ ಬಗ್ಗೆ ನಮ್ಮ ತಂಡ ಕೆಲ ವಾದಿಗಳನ್ನು, ದೈವಭಕ್ತರನ್ನು ಸಂಪರ್ಕಿಸಿ ಮಾತನಾಡಿಸಿದಾಗ ಕಿರುಚಿತ್ರ ಹಾಗೂ ಚಿತ್ರ ತಂಡದ ವಿರುದ್ಧ ಅನೇಕ ವಿರೋಧಗಳು ವ್ಯಕ್ತವಾಗಿದೆ.

ಕಳೆದ ಬಾರಿ ಬಜಪೆ ಪೆರಾರ ಸಮೀಪ ನಡೆದ ದೈವ ಕೋಲದಲ್ಲಿ ಜರ್ಮನಿಯಿಂದ ಬಂದ ವ್ಯಕ್ತಿಯೊಬ್ಬರು ದೈವದ ಫೋಟೋ ಕ್ಲಿಕ್ಕಿಸಿದಾಗ, ಕ್ಲಿಕ್ಕಿಸಿದ ಫೋಟೋ ಸ್ಪಷ್ಟತೆ ಕಳೆದುಕೊಂಡು, ದೈವ ತನ್ನ ಕಾರ್ಣಿಕ ಮೆರೆದಿತ್ತು.ಆದರೆ ಇಂಥ ವಿಚಾರಗಳು ಯಾವುವೂ ಎಲ್ಲಿಯೂ ತೋರಿಕೆಗೆ ಬರಲಿಲ್ಲ, ಯಾಕೆಂದರೆ ಭಕ್ತರಿಗೆ ದೈವದ ಮೇಲಿನ ಅಗಾಧವಾದ ನಂಬಿಕೆ ಆ ಮಟ್ಟಕ್ಕಿದೆ ಎಂಬುವುದು ಇಲ್ಲಿ ತಿಳಿಯುತ್ತದೆ.

ಸದ್ಯ ಈ ಕಿರುಚಿತ್ರ ಪೂರ್ತಿಯಾಗಿ ತೆರೆಯ ಮೇಲೆ ಕಂಡಿಲ್ಲವಾದರೂ, ಅದರ ಒಂದು ತುಣುಕಿನಿಂದಾಗಿ ಬಹಳ ಚರ್ಚೆಗೆ ಈಡಾಗಿದೆ. ತಿಳುವಳಿಕೆ ಉಳ್ಳವರ ಪ್ರಕಾರ ಚಲನಚಿತ್ರ ಚಲನಚಿತ್ರವಾಗಿರಬೇಕೆ ಹೊರತು, ಅದರ ಒಂದು ತುಣುಕನ್ನು ಹರಿಯಬಿಟ್ಟರೆ, ಅದರ ಪೂರ್ತಿ ಸಂದೇಶವನ್ನು ಅರಿತುಕೊಳ್ಳಲು ತಡವಾಗುತ್ತದೆ.ಪ್ರಚಾರ ಪಡೆದುಕೊಳ್ಳುವ ನೆಪದಲ್ಲಿ ಚಿತ್ರ ತಂಡಗಳು ಇಂತಹ ಚರ್ಚೆಗೆ ಕಾರಣವಾಗದಿರಲಿ, ತುಳುನಾಡಿನ ದೈವ ಕಾರ್ಣಿಕವನ್ನು ಭಕ್ತರಿಗೆ ಮನಮುಟ್ಟುವ ರೀತಿಯಲ್ಲಿ ತೊರ್ಪಡಿಸಲಿ ಎಂಬುವುದೇ ಆಶಯ.

Leave A Reply

Your email address will not be published.