ಕಡಬದಿಂದ ಕಾಲ್ನಡಿಗೆಯಲ್ಲಿ ಲಡಾಖ್ ತಲುಪಲಿದೆ ಯುವಕರ ತಂಡ|’ರೈತರಿಗಾಗಿ ನಡಿಗೆ’ ಶೀರ್ಷಿಕೆಯಡಿಯಲ್ಲಿ ಯುವಕರ ಹೊಸ ಪ್ರಯತ್ನ

ಹದಿನೆಂಟು ಹರೆಯ ತುಂಬುತ್ತಿರುವ ಉತ್ಸಾಹಿ ಯುವಕರ ತಂಡವೊಂದು ಹೊಸ ಯೋಜನೆಯೊಂದಿಗೆ, ಹೊಸ ಪ್ರಯತ್ನಕ್ಕೆ ಸಜ್ಜಾಗುತ್ತಿದೆ. ಹೌದು, ರೈತರೊಂದಿಗೆ ನಾವಿದ್ದೇವೆ, ಅನ್ನ ನೀಡುವ ರೈತನಿಗೆ ನಮ್ಮದೊಂದು ಸಲಾಂ ಎಂದು ತಾವು ಮಾಡುವ ಕಾಲ್ನಡಿಗೆ ಜಾಥಾ ಕ್ಕೆ ‘ರೈತರಿಗಾಗಿ ನಡಿಗೆ’ ಎಂಬ ಹೆಸರನ್ನೂ ಇಡಲಾಗಿದೆ.

ಹೌದು. ಇದೇ ತಿಂಗಳು ಸ್ವಾತಂತ್ರ್ಯ ದಿನದ ಮರುದಿನ ಅಂದರೆ ಆಗಸ್ಟ್ 16 ರಂದು ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ನಿವಾಸಿ ಸಂಪ್ರೀತ್, ಬೆತ್ತೋಡಿ ನಿವಾಸಿಗಳಾದ ಸೆಬಾಸ್ಟಿಯನ್ ಹಾಗೂ ನಿಶಾಂತ್ ಎಂಬ ಮೂವರು ಉತ್ಸಾಹಿ ಯುವಕರ ತಂಡ ಕಡಬದಿಂದ ಮಂಗಳೂರು, ಉಡುಪಿ, ಗೋವಾ ಮೂಲಕ ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಂದಾಗಿ ಲಡಾಕ್ ಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಲಿದ್ದಾರೆ.

ಪ್ರಚಲಿತ ವಿದ್ಯಾಮಾನದಲ್ಲಿ ನಡಿಗೆ ಎಂಬ ಪದವೇ ಯುವ ಪೀಳಿಗೆ ಮರೆತಿರುವುದು ಕಂಡುಬರುತ್ತಿದೆ. ದೇವಸ್ಥಾನ ಅಥವಾ ಇನ್ನಿತರ ಕಡೆಗಳಿಗೆ ತೆರಳಲು ವೃದ್ಧರಿಂದ ಹಿಡಿದು, ಸಣ್ಣ ಪ್ರಾಯದವರು ಕೂಡಾ ವಾಹನಗಳನ್ನು ಅವಲಂಬಿಸುತ್ತಿರುವುದು ವಾಸ್ತವ. ಆದರೆ ಇದೆಲ್ಲದರ ನಡುವೆ ಅದೆಷ್ಟೋ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ, ಒಂದು ಹೊಸ ದಾಖಲೆ ಸೃಷ್ಟಿಸಿ, ಆ ಮೂಲಕ ನಡಿಗೆಯ ಮಹತ್ವ, ರೈತರಿಗೆ ನಮ್ಮದೊಂದು ಕಾಣಿಕೆ, ಹಾಗೂ ಊರಿಗೆ ಒಳ್ಳೆಯ ಹೆಸರು ತರಲು ಹೊರಟ ಈ ಯುವಕರ ತಂಡಕ್ಕೆ ಹತ್ತೂರಿನಿಂದಲೂ ಮೆಚ್ಚುಗೆಯ ಅಭಿನಂದನೆ ಸಾಲು ಸಾಲಾಗಿ ಬರುತ್ತಿದೆ.

ಬಾಲ್ಯದ ಕನಸು ನನಸಾಗುವ ಭರವಸೆ:
ಮೂವರು ಯುವಕರು ಬಾಲ್ಯದಿಂದಲೇ ಉತ್ತಮ ಸ್ನೇಹಿತರಾಗಿದ್ದು, ಲಡಾಕ್ ಗೆ ತೆರಳಿ ಎವರೆಸ್ಟ್ ಹತ್ತುವ ಆಸೆ ಬಾಲ್ಯದಿಂದಲೇ ಮೈಗೂಡಿಸಿಕೊಂಡು ಬಂದಿದ್ದಾರೆ. ಅದೇನೋ, ಇವರ ಇಚ್ಛೆಯಂತೆ ಆ ಭಾಗ್ಯ ಒದಗಿಬಂದಿದ್ದು, ವಿಶೇಷವಾಗಿ ಕಾಲ್ನಡಿಗೆಯಲ್ಲಿ ತೆರಳುವುದು ಇನ್ನೂ ಹೆಚ್ಚಿನ ಉತ್ಸಾಹ ಬರಿಸಿದೆ.ಇವರ ಈ ಆಸೆಗೆ ಹೆತ್ತವರು, ಊರವರು ಹಾಗೂ ಕೆಲ ದಾನಿಗಳು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದು ನಮ್ಮನ್ನು ಇನ್ನಷ್ಟು ಪ್ರೋತ್ಸಾಹಿಸಿದಂತಾಗಿದೆ ಎನ್ನುತ್ತಾರೆ ಕಾಲ್ನಡಿಗೆ ಹೊರಡಲು ಸಿದ್ಧರಾಗಿರುವ ಉತ್ಸಾಹಿಗಳು.

ಈ ಯುವಕರ ಸಾಧನೆ ಉತ್ತಮವಾಗಿರಲಿ,ಹೋಗಿ ಬರುವ ದಾರಿ ಮಧ್ಯೆ ತೊಡಕುಗಳು ಬಾರದಿರಲಿ,ದೇಶದ ಎಲ್ಲಾ ರೈತರ ಆಶೀರ್ವಾದ ಯುವಕರ ಸಾಧನೆಯ ಮೇಲಿರಲಿ,ಊರಿನ ಹಿರಿಮೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿರುವ ಯುವಕರ ಪಾಲಿಗೆ ಜಯ ದೊರಕಲಿ ಎಂಬುವುದು ಊರವರ ಆಶಯವಾಗಿದೆ.

Leave A Reply

Your email address will not be published.