ಅಕ್ರಮವಾಗಿ ಮಂಜೂರಾಗಿದ್ದ 94 ಸಿ ನಿವೇಶನ ರದ್ದಾಗಿ ಎರಡು ವರ್ಷವಾಗುವಾಗುತ್ತಿದ್ದಂತೆ ಅಧಿಕಾರಿಗಳಿಂದ ಮರು ಮಂಜೂರಾತಿಗೆ ಆದೇಶ: ಸಚಿವರು ಗರಂ

ಕಡಬ : ಕಡಬದ ಕಲ್ಲಂತಡ್ಕದ ಸ್ಮಶಾನಕ್ಕೆ ಹೊಂದಿಕೊಂಡಿರುವ ಸರಕಾರಿ ಜಮೀನನಲ್ಲಿ ಅಕ್ರಮವಾಗಿ ೯೪ ಸಿ ಯೋಜನೆಯಡಿಯಲ್ಲಿ ಮಂಜೂರಾಗಿರುವ ಹಕ್ಕುಪತ್ರವನ್ನು ರದ್ದು ಪಡಿಸಿ ಎರಡು ವರ್ಷವಾಗುತ್ತಿದ್ದಂತೆ ಮತ್ತೆ ಅದೇ ಜಮೀನಿನಲ್ಲಿ ಅಕ್ರಮವಾಗಿ ಪಡೆದ ೯೪ ಸಿ ನಿವೇಶನವನ್ನು ಅಧಿಕಾರಿಗಳು ಮರು ಮಂಜೂರು ಮಾಡಲು ಆದೇಶ ನೀಡಿದ್ದಾರೆ ಎನ್ನುವ ಮಾಹಿತಿ ದೊರೆಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಗರಂ ಆಗಿದ್ದಾರೆ.

ಸುಮಾರು ಎರಡು ಎಕರೆ ಸರಕಾರಿ ಜಾಗವನ್ನು ತಾಲೂಕು ಅನುಷ್ಠಾನದ ಹಿನ್ನೆಲೆಯಲ್ಲಿ ನ್ಯಾಯಾಲಯ ತೆರೆಯಲು ಮೀಸಲಿಡುವಂತೆ ಅಂದಿನ ಶಾಸಕ ಇಂದಿನ ಸಚಿವ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದರೂ ಆ ಜಮೀನಿನಲ್ಲಿ ಮತ್ತೆ ಅಕ್ರಮವಾಗಿ ಭೂಮಿ ಮಂಜೂರಾತಿ ಆದೆಶ ನೀಡಿರುವುದಕ್ಕೆ ಸಚಿವರು ಅಸಮಧಾನ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಅಕ್ರಮವಾಗಿ ಈ ಹಿಂದೆ ಜಮೀನು ಪಡೆದವರಿಗೆ ಮರು ಮಂಜೂರೂ ಮಾಡಬಾರದು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನಲೆ: ಕಡಬ-ಪಂಜ ರಸ್ತೆ ಬದಿಯಲ್ಲಿನ ಕಲ್ಲಂತಡ್ಕ ಹಿಂದೂ ರುದ್ರಭೂಮಿಗೆ ಹೊಂದಿಕೊಂಡಿರುವ ಸ,ನಂ 19.3 ಬಿ ರಲ್ಲಿ ಎರಡು ಎಕ್ರೆ ಸರಕಾರಿ ಜಾಗದಲ್ಲಿ ಎರಡು ವರ್ಷದ ಹಿಂದೆ ಏಕಾ ಏಕಿ ಏಳು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಪ್ರಾರಂಭಿಸಲಾಗಿತ್ತು. ಇದರಿಂದ ಆಶ್ಚರ್ಯಗೊಂಡ ಸ್ಥಳೀಯರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮಾಧ್ಯಮಗಳು ಕೂಡಾ ವರದಿ ಮಾಡಿದ್ದವು. ತಕ್ಷಣ ಅಂದಿನ ಸಹಾಯಕ ಆಯುಕ್ತರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಲ್ಲಿ ಇಬ್ಬರಿಗೆ ನಿಯಮ ಬಾಹಿರವಾಗಿ 94 ಸಿ ಯೋಜನೆಯಡಿಯಲ್ಲಿ ನಿವೇಶನ ಮಂಜೂರು ಮಾಡಿರುವುದು ಬೆಳಕಿಗೆ ಬಂದಿತ್ತು.

ಉಳಿದಂತೆ ಐದು ಜನ ಯಾವುದೇ ದಾಖಲೆಗಳಿಲ್ಲದೆ ಕಟ್ಟಡ ನಿರ್ಮಾಣಕ್ಕೆ ಇಳಿದಿದ್ದರು. ಇದನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳಿಯಾಡಳಿತಕ್ಕೆ ಆದೇಶಿಸಿರುವುದಲ್ಲದೆ, ಅಕ್ರಮವಾಗಿ 94ಸಿ ಯಲ್ಲಿ ಮಂಜೂರಾದ ಭೂಮಿಯ ಹಕ್ಕು ಪತ್ರವನ್ನು ರದ್ದು ಪಡಿಸುವಂತೆ ತಹಶಿಲ್ದಾರರಿಗೆ ಸೂಚನೆ ನೀಡಿದ್ದರು. ಬಳಿಕ ಅಕ್ರಮ ಕಟ್ಟಡಗಳ ತೆರವು ಕಾರ್ಯ ನಡೆದಿತ್ತು.
ತಪ್ಪು ಮಾಹಿತಿ ನೀಡಿ ಹಕ್ಕು ಪತ್ರ ಪಡೆಯಲಾಗಿದೆ ಎಂದು ತಹಶಿಲ್ದಾರರು ಮಂಜೂರಾಗಿದ್ದ ನಿವೇಶನದ ಹಕ್ಕು ಪತ್ರವನ್ನು ರದ್ದು ಪಡಿಸಿದ್ದರು. ಈ ಮಧ್ಯೆ ಅಂದಿನ ಶಾಸಕ, ಇಂದಿನ ಸಚಿವ ಎಸ್ ಅಂಗಾರ ಸ್ಥಳಕ್ಕೆ ಭೇಟಿ ನೀಡಿ ಈ ಜಾಗ ಕಡಬ ಪೇಟೆಗೆ ಹತ್ತಿರವಿರುವುದರಿಂದ ಮುಂದೆ ಇಲ್ಲಿ ನ್ಯಾಯಾಲಯ ನಿರ್ಮಾಣಕ್ಕೆ ಮೀಸಲಿಡಬೇಕೆಂದು ೦೯-೦೮-೨೦೧೯ ರಂದು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಕೇಳಿಕೊಂಡಿದ್ದರು.

ಬಳಿಕ ನಡೆದ ಬೆಳವಣಿಗೆಯಲ್ಲಿ ನ್ಯಾಯಾಲಯ ಸಂಕಿರ್ಣ ನಿರ್ಮಾಣ ಮಾಡುವುದಕ್ಕೆ ನ್ಯಾಯಾಧೀಶರುಗಳಿಂದ ಸ್ಥಳ ಪರಿಶೀಲನೆ ಕೂಡಾ ನಡೆದಿತ್ತು.

ಇದಾದ ಬೆನ್ನಲ್ಲೇ ಅಕ್ರಮಿತರು ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಮನವಿ ಮಾಡಿ ರದ್ದು ಪಡಿಸಲಾಗಿದ್ದ ಮಂಜೂರಾತಿ ಆದೇಶವನ್ನು ಪರಿಶೀಲಿಸಿ ನಮಗೆ ಮರು ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಇದೀಗ ಈಗಾಗಲೇ ರದ್ದು ಪಡಿಸಿದ ಎರಡು 94 ಸಿ ನಿವೇಶನ ಹಾಗೂ ಉಳಿದಂತೆ ಐದು ಜನರಿಗೆ ನಿವೇಶನ ಮಂಜೂರು ಮಾಡುವಂತೆ ಆದೇಶ ನೀಡಲಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಸಚಿವ ಅಂಗಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾನೂನುಬಾಹಿರವಾಗಿ ಯಾರಿಗಾದರೂ ಜಮೀನು ಮಂಜೂರು ಮಾಡಿದರೆ ಅಂತವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.