ಬೆಳ್ತಂಗಡಿ | ದಿನಕ್ಕೆ 8000 ಗಳಿಸುವ ದುರಾಸೆಗೆ ಬಿದ್ದು, 5.61 ಲಕ್ಷ ಕಳೆದುಕೊಂಡು ತಲೆಯ ಮೇಲೆ ಸಾಲ ತುಂಬಿಕೊಂಡು ಕುಳಿತ ಗೃಹಿಣಿ

ದಿನಕ್ಕೆ 3-8 ಸಾವಿರ ರೂ. ಗಳಿಸುವ ಆಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಬರೋಬ್ಬರಿ 5.61 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಳ್ತಂಗಡಿಯಲ್ಲಿ ಇದೀಗ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ಚರ್ಚ್ ರಸ್ತೆಯ ಕಲ್ಕಣಿಯ ರವಿಶಂಕರ್ ಡಿ.ಕೆ ಅವರ ಪತ್ನಿ ಪೂರ್ಣಿಮಾ ಎಂಬವರೇ ಈ ರೀತಿ ವಂಚನೆಗೊಳಗಾದವರು ಎಂದು ತಿಳಿದುಬಂದಿದೆ.

ಪ್ರತಿದಿನ ಸುಮಾರು 3-8 ಸಾವಿರ ರೂ ಗಳಿಸಬಹುದು ಎಂದು ವಾಟ್ಸ್ ಆಪ್ ಮೂಲಕ ಬಂದ ಸಂದೇಶ ನಂಬಿ ಪೂರ್ಣಿಮಾ ಅವರು 3 ತಿಂಗಳ ಅಂತರದಲ್ಲಿ ಒಟ್ಟು 5.61 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಜೂನ್ ತಿಂಗಳಲ್ಲಿ ಒಂದು ಅಪರಿಚಿತ ನಂಬರಿನಿಂದ ವ್ಯಕ್ತಿಯೋರ್ವ ಮೆಸೇಜ್ ಕಳುಹಿಸಿದ್ದು, ಕಾರ್ತಿಕ್ ಅಮೇಜಾನ್ ಪಾರ್ಟ್ ಟೈಮ್‌ಗೆ ತುರ್ತಾಗಿ ರಿಕ್ರೂಟ್‌ಮೆಂಟ್ ಮಾಡುತ್ತಿದ್ದು, ನೀವು ಪ್ರತಿ ದಿನ  3000-8000 ರೂ. ಗಳಿಸಬಹುದು. ಇದಕ್ಕಾಗಿ ನೀವು ಈ ನಂಬರನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾನೆ. ಈ ಮೆಸೇಜನ್ನು ನಂಬಿದ ಗ್ರಹಿಣಿ ಅದರ ಪ್ರಕಾರ ಆಕೆ ಸಂಪರ್ಕಿಸಿದಾಗ ಲಿಂಕ್ ಒಂದನ್ನು ಕಳಿಸಿದ್ದಾರೆ.

ಲಿಂಕ್ ಮೂಲಕ ನೊಂದಾವಣೆಗೊಂಡ ತಕ್ಷಣ ಅವರ ಖಾತೆಗೆ 100 ರೂ.ಜಮೆ ಆಗಿದೆ. ನಂತರ ಅಪರಿಚಿತ ವ್ಯಕ್ತಿ ಕಳುಹಿಸಿದ ವೆಬ್ ಸೈಟ್‌ನಲ್ಲಿ ಒಂದೊಂದೇ ಟಾಸ್ಕ್ ನೀಡುತ್ತಾ ಹೋಗುತ್ತಿದ್ದರು. 200 ರೂ ಪಾವತಿಸುವಂತೆ ಕೇಳಿಕೊಂಡಿದ್ದು, ಗೃಹಿಣಿ ತನ್ನ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ್ದರು. ಅದಕ್ಕೆ ರೂ 23.12 ಕಮಿಶನ್ ಸೇರಿಸಿ ಇವರಿಗೆ ಮೇಸೆಜ್ ಕಳುಹಿಸಲಾಗಿತ್ತು. ಬಳಿಕ ಹೀಗೆಯೇ ಎಂಟು ಟಾಸ್ಕ್ ಗಳ ಮುಖಾಂತರ ರೂ 1,21,324 ರೂ ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಂದ ಪಡೆದು ಪಾವತಿಸಿದ್ದರು.

ಜು. 12ರಂದು 12ಸಾವಿರ ರೂ, ಸ್ನೇಹಿತರ ಕ್ರೆಡಿಟ್ ಕಾರ್ಡ್ ಮೂಲಕ 10ಸಾವಿರ ರೂ. ಪಾವತಿಸಿದ್ದರು. ಬಳಿಕ ಅವರ ಮೇಲೆ ವಿಶ್ವಾಸವಿರಿಸಿ 85,707 ರೂ., 2,54,506 ರೂ., 78,000 ರೂ., ಹೀಗೆ ಒಟ್ಟು 5,61,537 ರೂ. ಗಳನ್ನು ಖಾತೆಗೆ ವರ್ಗಾಯಿಸಿಕೊಂಡು ಯಾವುದೇ ಕಮಿಷನ್ ಕೊಡದೆ ವಂಚಿಸಲಾಗಿರುತ್ತದೆ ಎಂದು ಆಕೆ ಇದೀಗ ದ.ಕ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ 419, 420, ಕಲಂ . 66 (ಡಿ ) , 66 (ಸಿ) ಮಾಹಿತಿ ತಂತ್ರಜ್ಞಾನ ಕಾಯ್ದೆಯಂತೆ ಅಪರಿಚಿತ ವಂಚಕನ ವಿರುದ್ಧ ಕೇಸು ದಾಖಲಾಗಿದೆ ಹಾಗೂ ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.