ಬೆಳ್ತಂಗಡಿ | ನಾಗರ ಹಾವನ್ನು ಹಿಡಿದು ವಾಪಸ್ಸಾಗುತ್ತಿದ್ದಾಗ ಸ್ನೇಕ್ ಅಶೋಕ್ ಗೆ ಅಪಘಾತ

ಬೆಳ್ತಂಗಡಿ: ನಾಗರ ಹಾವನ್ನು ಹಿಡಿದು ಬುಟ್ಟಿಗೆ ಹಾಕಿಕೊಂಡು ತನ್ನ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಸ್ನೇಕ್ ಅಶೋಕ್ ಅವರಿಗೆ ಅಪಘಾತವಾದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ನಡೆದಿದೆ.

ಆದಿತ್ಯವಾರ ರಾತ್ರಿ ಹಾವನ್ನು ಹಿಡಿದುಕೊಂಡು ಹೊರಟಿದ್ದ ಸ್ನೇಕ್ ಅಶೋಕ್ ಲಾಯಿಲ ಅವರ ದ್ವಿಚಕ್ರ ವಾಹನವು ಮಂಜೊಟ್ಟಿಯಲ್ಲಿ ರಸ್ತೆಯಲ್ಲಿರುವ ಗುಂಡಿಗೆ ಬಿದ್ದ ಕಾರಣ ಅವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಹಾವು ಹಿಡಿಯುವುದಲ್ಲಿ ಖ್ಯಾತಿಯಿಗಿದ್ದ ಇವರು, ಆಟಿ ಅಮಾವಾಸ್ಯೆಯ ಸಂಜೆ ಬಂಗಾಡಿಯ ಮನೆಯೊಂದರಲ್ಲಿ ನಾಗರ ಹಾವು ಇರುವ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ನಾಗರ ಹಾವನ್ನು ಸೆರೆ ಹಿಡಿದು ವಾಪಸ್ ಬರುತ್ತಿರುವಾಗ ಮಂಜೊಟ್ಟಿ ಸಮೀಪ ಎದುರಿನಿಂದ ಬಂದ ಕಾರೊಂದರ ಪ್ರಕಾಶಮಾನ ಲೈಟ್ ನಿಂದ ರಸ್ತೆಯಲ್ಲಿರುವ ಗುಂಡಿಯನ್ನು ಗಮನಿಸದೆ ದ್ವಿಚಕ್ರ ವಾಹನ ಗುಂಡಿಗೆ ಬಿದ್ದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ನಾಗರ ಹಾವು ಇದ್ದ ಡಬ್ಬ ಒಟ್ಟಿಗೆ ಬಿದ್ದಿದ್ದು, ಡಬ್ಬದ ಮುಚ್ಚಳ ತೆರದ ಕಾರಣ ಹಾವು ಪರಾರಿಯಾಗಿದೆ. ಅದೃಷ್ಟವಶಾತ್ ಹಾವು ಹೊರ ಬಂದು ಯಾವುದೇ ಅಪಾಯ ಮಾಡದ ಕಾರಣ ಅವರು ಪಾರಾಗಿದ್ದಾರೆ.

ಒಂದು ಕ್ಷಣಕ್ಕೆ ಆತಂಕಗೊಂಡ ಅವರು ಕೂಡಲೇ ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ತೆರಳಿ ಆಗಿರುವ ಗಾಯ ಯಾವುದರಿಂದ ಎಂದು ಪರೀಕ್ಷಿಸಿ ನಂತರ ಅಲ್ಲಿಂದ ಮನೆಗೆ ಮರಳಿದ್ದಾರೆ.

Leave A Reply

Your email address will not be published.