ಬಾರದ ಲೋಕಕ್ಕೆ ಪಯಣಿಸಿದ ಕಂಬಳದ ಗುರುವಪ್ಪ ಪೂಜಾರಿ | ಯಜಮಾನನಿಗೆ ಕಾಯುತಿದೆ ಕಂಬಳದ ಕೋಣಗಳು

ಮಂಗಳೂರು: ಕಾರು-ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಂಬಳ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದ ಗುರುವಪ್ಪ ಪೂಜಾರಿ ಅವರು ಇಹಲೋಕ ತ್ಯಜಿಸಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ತನ್ನದೇ ಹೆಸರಿನ ಮೂಲಕ ಅಡ್ಡ ಹಲಗೆಯ ಕಂಬಳ ಕ್ರೀಡೆಯಲ್ಲಿ ಛಾಪನ್ನು ಮೂಡಿಸಿದ್ದ ಗುರುವಪ್ಪ ಪೂಜಾರಿಯವರು, ಮಂಗಳೂರು ಹೊರವಲಯದ ಗುರುಪುರದ ಕುಕ್ಕುದಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ 47 ವರ್ಷದಿಂದ ಕಂಬಳ ಕೋಣಗಳ ಮೂಲಕ ಜನಪ್ರಿಯರಾಗರುವ ಇವರು ಒಂದಷ್ಟು ಕೃಷಿಭೂಮಿ ಯನ್ನೂ ಹೊಂದಿದ್ದು ಬಾಲ್ಯದ ದಿನಗಳಿಂದಲೇ ಕಂಬಳದ ಮೇಲೆ ಆಸಕ್ತರಾಗಿದ್ದರು.

ತನ್ನ ಗದ್ದೆ ಉಳಲೆಂದು ಉತ್ತಮ ಜಾತಿಯ ಕೋಣಗಳನ್ನು ತಂದು, ಕೃಷಿ ಕೆಲಸ ಮುಗಿದ ಬಳಿಕ ಕಂಬಳ ಗದ್ದೆಗಳಲ್ಲಿ ಓಡಿಸಿ ಖುಷಿ ಪಡೆಯುತ್ತಿದ್ದರು. ನಂತರ ದೂರದ ಊರುಗಳಲ್ಲಿ ನಡೆಯುವ ಕಂಬಳಗಳತ್ತ ಗಮನ ಕೇಂದ್ರೀಕರಿಸಿದ ಇವರು, ಕಂಬಳಕ್ಕಾಗಿಯೇ ಹುಬ್ಬಳ್ಳಿ, ಕೋಟಾ ಮೊದಲಾದ ಕಡೆಯಿಂದ ಉತ್ತಮ ಜಾತಿಯ ಕೋಣಗಳನ್ನು ತಂದು, ಪಳಗಿಸುವುದರಲ್ಲಿ ಎತ್ತಿದ ಕೈ ಅನಿಸಿಕೊಂಡಿದ್ದರು.

ಇವರು ಅಡ್ಡ ಹಲಗೆ, ಹಗ್ಗದ ಹಿರಿ-ಕಿರಿ ವಿಭಾಗ, ನೇಗಿಲಿನ ಹಿರಿ-ಕಿರಿ ವಿಭಾಗ, ದೊಡ್ಡ ವಿಭಾಗ ಹಾಗೂ ಕಣೆಹಲಗೆ ವಿಭಾಗದ ಕೋಣಗಳ ಸ್ಪರ್ಧೆಯಲ್ಲಿ ಪಳಗಿದವರಾಗಿದ್ದು, ಕಂಬಳದ ಬೆಳ್ಳಿ ಕೆದು ಬರಿ ಗುರುವಪ್ಪ ಪೂಜಾರಿ ಎಂದೇ ಖ್ಯಾತರಾಗಿದ್ದರು.

ಇಂದು ಇವರು ತಮ್ಮ ಆಕ್ಟಿವಾದಲ್ಲಿ ಗುರುಪುರ ಬಳಿ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.