ಗೆಳೆಯನನ್ನು ಬಾರ್ ಗೆ ಕರೆಸಿ ಬೀರು ಹೀರಲು ಆಹ್ವಾನ | ಬಿಲ್ ಬಂದಾಗ ಪಾವತಿ ಮಾಡದ್ದಕ್ಕೆ ಸ್ನೇಹಿತನ ಮೇಲೆಯೇ ಹಲ್ಲೆ

ಬ್ರಹ್ಮಾವರ : ಸ್ನೇಹಿತನೋರ್ವನನ್ನು ಮದ್ಯ ಸೇವನೆಗಾಗಿ ಬಾರ್‌ಗೆ ಕರೆಸಿ, ಮದ್ಯ ಸೇವಿಸಿದ ನಂತರ ಸ್ನೇಹಿತನಿಗೇ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.

ಹಲ್ಲೆಗೆ ಒಳಗಾಗಿರುವ ರಮೇಶ್‌ ಎಂಬವರು ಇದೀಗ ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ. ರಮೇಶ್‌ ಸ್ನೇಹಿತನಾಗಿರುವ ಪ್ರಶಾಂತ್‌ ಮದ್ಯ ಸೇವನೆ ಮಾಡಲು ಆಹ್ವಾನಿಸಿದ್ದಾನೆ. ಗೆಳೆಯ ಪ್ರೀತಿಯಿಂದ ಕರೆದು ಮದ್ಯದ ಪಾರ್ಟಿ ಕೊಡ್ತಾನೆ ಅಂದಾಗ ಬೇಡವೆನ್ನುವವ ಯಾರು ? ಹಾಗೆ ಬಿಟ್ಟಿ ಎಣ್ಣೆಯ ಆಸೆಗೆ  ಪ್ರಶಾಂತ್‌ ಸ್ನೇಹಿತ ಶ್ರೀನಿವಾಸ ಸೇರಿದಂತೆ ಮೂವರು ಬ್ರಹ್ಮಾವರದ ಬಾರ್‌ವೊಂದಕ್ಕೆ ತೆರಳಿ ಮನಸೋ ಇಚ್ಛೆ ಮದ್ಯ ಸೇವನೆ ಮಾಡಿದ್ದಾರೆ.

ಆದರೆ ಕುಡಿದ ಬಿಲ್ ಬಂದಾಗ ಬಿಲ್ ನೀಡುವುದರಲ್ಲಿ ವ್ಯಾಜ್ಯ ಶುರುವಾಗಿದೆ. ರಮೇಶ್‌ ಬಾರ್‌ ಬಿಲ್‌ ನೀಡಿಲ್ಲ ಅನ್ನೋ ಕಾರಣಕ್ಕೆ ಶ್ರೀನಿವಾಸ್‌ ಹಾಗೂ ಪ್ರಶಾಂತ್‌ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಲ್ಲೆಗೆ ಒಳಗಾಗಿರುವ ರಮೇಶ್‌ ಬ್ರಹ್ಮಾವರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಬ್ರಹ್ಮಾವರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.