ಭಿಕ್ಷಾಟನೆ ಮಾಡುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ | ಆರೋಪಿಯ ಬಂಧನ

ಮಂಗಳೂರು: ನಗರದ ಬೈಕಂಪಾಡಿ ರೈಲ್ವೆ ಗೇಟ್ ಬಳಿ ಭಿಕ್ಷಾಟನೆ ಮಾಡುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ನಿಖಿಲ್ ಎಂಬುವವನನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳ ಹುಡುಕಾಟದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ನಿಖಿಲ್ ರಾತ್ರಿ ವೇಳೆ ತನ್ನ ಇತರ ಸಂಗಡಿಗರಾದ ಅರುಂಧತಿ ರಾಶಿ, ರೇಖಾ, ಪ್ರೀಯಾ ಮತ್ತಿತರೊಂದಿಗೆ ಸೇರಿ ಬೈಕಂಪಾಡಿ ರೈಲ್ವೆ ಗೇಟ್ ಬಳಿ ಭಿಕ್ಷಾಟನೆ ಮಾಡುತ್ತಿದ್ದ ಶಾಂತಾ, ಪೂರ್ಣಿಮಾ, ನೀಲಾ, ಹುಲಿಗೆಮ್ಮ ಮತ್ತು ಪಾರ್ವತಿ ಎಂಬವರ ಮೇಲೆ ಮೆಣಸಿನ ಪುಡಿ ಎರಚಿ, ಬಾಟಲಿಗಳು ಮತ್ತು ಇತರ ಹರಿತ ಆಯುಧಗಳಿಂದ ಹಲ್ಲೆ ನಡೆಸಿದ್ದರು.

ಇದೇ ವೇಳೆ ಇಲ್ಲಿ ಬೇರೆ ಜಿಲ್ಲೆಯಿಂದ ಬಂದು ಭಿಕ್ಷಾಟನೆ ಮಾಡಬಾರದು ಎಂದು ಆರೋಪಿಗಳು ಬೆದರಿಕೆಯನ್ನೂ ಒಡ್ಡಿದ್ದರು. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು ಆರೋಪಿಯೊಬ್ಬನನ್ನು ಉಡುಪಿಯಲ್ಲಿ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

Leave A Reply

Your email address will not be published.