ಸೌತಡ್ಕ ಕ್ಷೇತ್ರದ ಆವರಣದಲ್ಲಿ ಮಣ್ಣು ಅಗೆದ ಪ್ರಕರಣ | ಮಹಮ್ಮದ್ ಖಲಂದರ್ ಷಾ ಸ್ಪಷ್ಟನೆ

ಬೆಳ್ತಂಗಡಿ : ಸೌತಡ್ಕ ಬಯಲು ಆಲಯದ ಗಣಪತಿ ಕ್ಷೇತ್ರದ ಆವರಣದಿಂದ ಮಣ್ಣು ಅಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದ ಆತಂಕ ದೂರವಾಗಿದೆ.

ಕ್ಷೇತ್ರದ ಆವರಣದಿಂದ ಮಣ್ಣು ತೆಗೆದ ಮಹಮ್ಮದ್ ಖಲಂದರ್ ಷಾ ಅವರು ಸ್ಪಷ್ಟನೆ ನೀಡಿದ್ದು, ದೋಷ ಪರಿಹಾರಕ್ಕಾಗಿ ಸೌತಡ್ಕ ಕ್ಷೇತ್ರದ ಮಣ್ಣು ಹಾಗೂ ನೀರು ಸೇವನೆ ಮಾಡುವಂತೆ ಪ್ರಾಜ್ಞರು ನೀಡಿದ ಸಲಹೆಯಂತೆ ಮಹಾಗಣಪತಿ ದೇವರ ಬಗ್ಗೆ ಅಪಾರ ನಂಬಿಕೆಯಿಂದ ಮಣ್ಣು ಮತ್ತು ನೀರು ಸೇವನೆಗಾಗಿ ,ಕ್ಷೇತ್ರದಿಂದ ಮಣ್ಣು ಹಾಗೂ ನೀರು ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.

ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ಕಲಂದರ್ ಎಂಬಾತ ಸೌತಡ್ಕ ಕ್ಷೇತ್ರದ ಆವರಣದಿಂದ ಮಣ್ಣು ಅಗೆದು ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿಸಿಕೊಂಡು ಹೋಗಿದ್ದು, ಜು.24 ರಂದು ದೇವಸ್ಥಾನದಲ್ಲಿ ಜನಸಂದಣಿ ಕಡಿಮೆ ಇರುವ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ವರ್ತಿಸಿದ್ದು, ಈತ ದೇವಳದ ವಠಾರದಿಂದ ಮಣ್ಣು ಅಗೆದು ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಹೋಗಿರುವುದು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಭಕ್ತರಿಗೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು.

ವ್ಯಕ್ತಿಯಿಂದ ಶ್ರೀ ಕ್ಷೇತ್ರಕ್ಕೆ ಯಾವುದೇ ಅನಾಹುತ ಸಂಭವಿಸುವ ಸಾಧ್ಯತೆಯಿದೆ.ಅಲ್ಲದೆ ಈತನ ವಿರುದ್ಧ ಹಿಂದೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನನ್ನು ಕೂಡಲೇ ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದರು.

ಈಗ ಖಲಂದಾರ್ ಷಾ ಸ್ಪಷ್ಟನೆ ನೀಡುವ ಮೂಲಕ ಘಟನೆ ಬಗ್ಗೆ ಇದ್ದ ಸಂಶಯ ದೂರವಾಗಿದೆ.

Leave A Reply

Your email address will not be published.