ಉಡುಪಿ | ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನಿದ್ದೆಯಿಂದ ಎದ್ದು ಕೂತ 2 ವರ್ಷದ ಮಗು ನದೀ ತೀರಕ್ಕೆ ತೆರಳಿತ್ತು !! ಮುಂದೆ ನಡೆದದ್ದು ದುರಂತ !

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಎರಡು ವರ್ಷದ ಮಗು ನಿದ್ದೆಯಿಂದ ಎಚ್ಚೆತ್ತು ಮನೆ ಸಮೀಪದ ನದಿ ದಡದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಉಡುಪಿಯ ಜಿಲ್ಲೆಯ ಕುಂದಾಪುರದ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಡೆದಿದೆ.

ಉಪ್ಪುಂದ ಗ್ರಾಮ ಕರ್ಕಿಕಳಿ ಚೌಕಿಮನೆ ವಿಶ್ವನಾಥ ಖಾವಿ ಎಂಬುವರ ಮಗ ಸರ್ವದ (2 ವರ್ಷ 1 ತಿಂಗಳು) ಮೃತಪಟ್ಟ ಮಗು ಎಂದು ತಿಳಿದುಬಂದಿದೆ.

ಪೋಷಕರು ಸೋಮವಾರ ಮಧ್ಯಾಹ್ನ ಮಗುವನ್ನು ಮನೆಯ ಕೋಣೆಯಲ್ಲಿ ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದರು. ಮಲಗಿದ್ದ ಮಗು ಎದ್ದು ಮನೆಯಿಂದ ಹೊರ ಬಂದು ಮನೆಯ ಸಮೀಪ ಹರಿಯುವ ಎಡಮಾವಿನ ಹೊಳೆಯ ದಡದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದೆ.

ಈ ಬಗ್ಗೆ ಮನೆಯವರಿಗೆ ವಿಷಯ ತಿಳಿಯದೆ ಮಗುವನ್ನು ಎಲ್ಲಾ ಕಡೆ ಹುಡುಕಿದ್ದಾರೆ. ಕೊನೆಗೆ ಮಗು ನಾಪತ್ತೆ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆದರೆ ಮಗುವಿನ ಮೃತದೇಹವು ಎಡಮಾವಿನ ಹೊಳೆ ಸಮುದ್ರವನ್ನು ಸೇರುವ ಉಪ್ಪುಂದ-ಕರ್ಕಿಕಳಿ ಬ್ರೇಕ್ ವಾಟರ್ ಸಮೀಪ ನೀರಿನಲ್ಲಿ ನಿನ್ನೆ ದೊರೆತಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.