ಉಡುಪಿ | ಕೆಲವೇ ಗಂಟೆಗಳ ಅಂತರದಲ್ಲಿ ಅಣ್ಣ-ತಂಗಿ ಹೃದಯಾಘಾತಕ್ಕೆ ಬಲಿ !

ಹೆಬ್ರಿ ತಾಲೂಕಿನ ಬೆಳ್ವೆ ಹೆದ್ದಾರಿಜೆಡ್ಡು ಎಂಬಲ್ಲಿ ಸ್ವಲ್ಪ ಸಮಯದ ಅಂತರದಲ್ಲಿ ಸಹೋದರ ಹಾಗೂ ಸಹೋದರಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಗಿರಿಜಾ (60) ಹಾಗೂ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದ ಸಹೋದರ ಸುಬ್ಬಣ್ಣ ನಾಯ್ಕ (65) ಮೃತಪಟ್ಟವರು ಎಂದು ತಿಳಿದುಬಂದಿದೆ.

ಗಿರಿಜಾ ತನ್ನ ಪುತ್ರನೊಂದಿಗೆ ವಾಸವಾಗಿದ್ದು, ಸೋಮವಾರ ಮಧ್ಯಾಹ್ನ ಮನೆಯಲ್ಲಿ, ಮನೆ ರಿಪೇರಿ ಕೆಲಸಕ್ಕೆ ಬಂದಿದ್ದವರಿಗೆ ಊಟ ಬಡಿಸುತ್ತಿರುವಾಗಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಪುತ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ಹೃದಯಾಘಾತದಿಂದ ಮರಣ ಹೊಂದಿರುವುದನ್ನು ವೈದ್ಯರು ಖಚಿತಪಡಿಸಿದರು.

ಮನೆಯಲ್ಲಿ ಅಂತ್ಯಸಂಸ್ಕಾರ ಕಾರ್ಯಕ್ಕಾಗಿ ತಯಾರಿ ನಡೆಸಿ, ಅಗ್ನಿ ಸ್ಪರ್ಶಕ್ಕೆ ಕೆಲವೇ ಕ್ಷಣಗಳಿರುವಾಗ ನೀರು ಕುಡಿಯಲು ಮನೆಗೆ ಹೋಗುತ್ತಿದ್ದ ಸುಬ್ಬಣ್ಣ ಕುಸಿದು ಬಿದ್ದರು. ತಕ್ಷಣ ಅವರನ್ನು ಹಾಲಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.

ಇಬ್ಬರ ಮರಣ ಕುಟುಂಬದವರಿಗೆ ಭಾರಿ ಆಘಾತ ನೀಡಿದೆ. ಗಿರಿಜಾ ಅವರ ಪತಿ ಈ ಹಿಂದೆ ಆಕಸ್ಮಿಕವಾಗಿ ಮರಣ ಹೊಂದಿದ್ದರು. ಒಬ್ಬ ಮಗ ಈ ಹಿಂದೆ ಹೆಬ್ರಿ ಹತ್ತಿರ ಚಾರ ಹೊಳೆಯಲ್ಲಿ ಕಾಲು ಜಾರಿ ಮೃತಪಟ್ಟಿದ್ದರು. ಇನ್ನೊಬ್ಬ ಪುತ್ರ ಅನಂತ ಅವಿವಾಹಿತನಾಗಿದ್ದು, ಈಗ ಏಕಾಂಗಿಯಾಗಿದ್ದಾನೆ.

Leave A Reply

Your email address will not be published.